
ಬೆಂಗಳೂರು(ಸೆ. 06): ಆರೆಸ್ಸೆಸ್ ಮತ್ತು ಬಿಜೆಪಿಯ ವಿಚಾರಗಳನ್ನು ವಿರೋಧಿಸಿದವರೆಲ್ಲರನ್ನೂ ಟಾರ್ಗೆಟ್ ಮಾಡಲಾಗುತ್ತಿದೆ. ಗೌರಿ ಲಂಕೇಶ್ ಹತ್ಯೆ ಹಿಂದೆ ಬಿಜೆಪಿ ಮತ್ತು ಆರೆಸ್ಸೆಸ್ ಕೈವಾಡ ಇದೆ ಎಂದು ರಾಹುಲ್ ಗಾಂಧಿ ಮಾಡಿದ್ದ ಆರೋಪ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗುತ್ತಿದೆ. ರಾಹುಲ್ ಗಾಂಧಿ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಬಿಜೆಪಿ ನಾಯಕ ಕೆಎಸ್ ಈಶ್ವರಪ್ಪ, "ನಾನೂ ಕೂಡ ಆರೆಸ್ಸೆಸ್ ವ್ಯಕ್ತಿಯೇ. ಹಾಗಾದರೆ ನಾನು ಗೌರಿ ಲಂಕೇಶ್'ರನ್ನ ಹತ್ಯೆ ಮಾಡಿದ್ದೀನಾ?" ಎಂದು ಪ್ರಶ್ನಿಸಿದ್ದಾರೆ.
"ಕಮ್ಯೂನಿಸ್ಟ್ ಪಕ್ಷದವರ ವಿಚಾರಧಾರೆಯೇ ಬಿಜೆಪಿಯನ್ನ ಟೀಕಿಸುವುದು. ಅವರೇನಾದರೂ ಈ ಹೇಳಿಕೆ ನೀಡಿದ್ದರೆ ಅರ್ಥವಿರುತ್ತಿತ್ತು. ಸೆಕ್ಯೂಲರ್'ವಾದಿಗಳ ಪೈಕಿ ರಾಹುಲ್ ಗಾಂಧಿ ಇರೋದ್ರಲ್ಲಿ ಉತ್ತಮ ಎಂದಂದುಕೊಂಡಿದ್ದೆ. ಆದರೆ, ಇವರೇ ಹೀಗೆಲ್ಲಾ ಮಾತನಾಡುತ್ತಿದ್ದಾರಲ್ಲಾ..! ರಾಹುಲ್ ಗಾಂಧಿ ಮೈಮೇಲಿನ ಪ್ರಜ್ಞೆ ತಪ್ಪಿ ಮಾತಾಡಿರಬೇಕು. ತೂಕವೇ ಇಲ್ಲದ ವ್ಯಕ್ತಿ ನೀಡುವ ಹೇಳಿಕೆಗೆ ಏನಂಥ ಹೇಳಲಿ?" ಎಂದು ಈಶ್ವರಪ್ಪ ಅಚ್ಚರಿ ವ್ಯಕ್ತಪಡಿಸಿದ್ದಾರೆ.
"ಸ್ವಾತಂತ್ರ್ಯಪೂರ್ವದಲ್ಲಿ ರಾಷ್ಟ್ರಭಕ್ತ ಸಂಘಟನೆಯಾಗಿದ್ದ ಕಾಂಗ್ರೆಸ್ ಪಕ್ಷದ ನಾಯಕತ್ವವು ಈಗ ರಾಹುಲ್ ಗಾಂಧಿ ಕೈಯಲ್ಲಿರುವುದು ದುರದೃಷ್ಟಕರ. ಇಂಥ ನೂರಾರು ರಾಹುಲ್ ಗಾಂಧಿಗಳು ಬಂದರೂ ಆರೆಸ್ಸೆಸ್'ಗೆ ಏನೂ ಮಾಡಲು ಆಗುವುದಿಲ್ಲ," ಎಂದು ಈಶ್ವರಪ್ಪ ಚಾಲೆಂಜ್ ಹಾಕಿದ್ದಾರೆ.
ಇದೇ ವೇಳೆ, ಗೌರಿ ಲಂಕೇಶ್ ಹತ್ಯೆಯನ್ನು ಬಲವಾಗಿ ಖಂಡಿಸಿದ ಈಶ್ವರಪ್ಪ, ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕೆಂದು ಆಗ್ರಹಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.