10 ಕೋಟಿ ರು. ಬಂಪರ್ ಲಾಟ್ರಿ ಗೆದ್ದ ಕೇರಳ ಚಾಲಕ

Published : Sep 24, 2017, 11:31 AM ISTUpdated : Apr 11, 2018, 12:48 PM IST
10 ಕೋಟಿ ರು. ಬಂಪರ್ ಲಾಟ್ರಿ ಗೆದ್ದ ಕೇರಳ ಚಾಲಕ

ಸಾರಾಂಶ

ಭರ್ಜರಿ! ಮಲಪ್ಪುರಂನ ವ್ಯಕ್ತಿಗೆ ಖುಲಾಯಿಸಿದ ಅದೃಷ್ಟ ಓಣಂ ಹಬ್ಬದ ಲಾಟರಿ ಗೆದ್ದ ಮುಸ್ತಫಾ ಈಗ ದಿಢೀರ್ ಶ್ರೀಮಂತ

ಮಲಪ್ಪುರಂ: ಈತ ನಿನ್ನೆ ಓರ್ವ ಸಾಮಾನ್ಯ ವಾಹನ ಚಾಲಕ ಹಾಗೂ ತೆಂಗಿನಕಾಯಿ ವ್ಯಾಪಾರಿ. ಇಂದು ಏಕಾಏಕಿ 10 ಕೋಟಿ ರು. ಒಡೆಯ! ನಿಜ, ನಸೀಬು ತೆರೆಯಿತೆಂದರೆ ಏನು ಬೇಕಾದರೂ ಆಗಬಹುದು ಎಂಬುದಕ್ಕೆ ಇದೇ ಸಾಕ್ಷಿ.

ಮಲಪ್ಪುರಂ ಜಿಲ್ಲೆಯ 48 ವರ್ಷದ ವಾಹನ ಚಾಲಕ ಮುಸ್ತಫಾ ಮೂಟ್ಟತ್ತದರಮ್ಮಾಳ್‌ಗೆ ಕೇರಳ ಸರ್ಕಾರದ 10 ಕೋಟಿ ಮೌಲ್ಯದ ಓಣಂ ಬಂಪರ್ ಲಾಟರಿ ಒಲಿದಿದೆ. ಇದು ಕೇರಳ ರಾಜ್ಯ ಲಾಟರಿಯ ದೊಡ್ಡ ಮೊತ್ತದ ಬಹುಮಾನ.

ಎಜೆ2876 ನಂಬರಿನ ಈ ಲಾಟರಿಗೆ 10 ಕೋಟಿ ರು.ಒಲಿದು ಬಂದಿದ್ದನ್ನು ಶುಕ್ರವಾರ ನಡೆದ ಡ್ರಾದಲ್ಲಿ ಘೋಷಿಸಲಾಗಿತ್ತು. ಪರಪ್ಪನಂಗಡಿಯ ಐಶ್ವರ್ಯ ಲಾಟರಿ ಏಜೆನ್ಸಿ ಮೂಲಕ ಈ ಲಾಟರಿಯನ್ನು ಮಾರಲಾಗಿತ್ತು.

ಆದರೆ ಶನಿವಾರ ಮಧ್ಯಾಹ್ನದವರೆಗೆ ಇದರ ವಿಜೇತರಾರೂ ಬಂದು ಹಣ ಕ್ಲೇಮ್ ಮಾಡಿಕೊಳ್ಳದ ಇರುವುದು ಊಹಾಪೋಹಕ್ಕೆ ಕಾರಣವಾಗಿತ್ತು. ಇದೇ ವೇಳೆ ಶನಿವಾರ ಮಧ್ಯಾಹ್ನ 2 ಗಂಟೆಗೆ ಪರಪ್ಪನಂಗಡಿಯ ಫೆಡರಲ್ ಬ್ಯಾಂಕ್‌ಗೆ ಆಗಮಿಸಿದ ಮುಸ್ತಫಾ, ಲಾಟರಿಯನ್ನು ಬ್ಯಾಂಕ್ ಮ್ಯಾನೇಜರ್’ಗೆ ಹಸ್ತಾಂತರಿಸಿ, ತಾವು ವಿಜೇತರಾಗಿದ್ದು, ತಮ್ಮ ಖಾತೆಗೆ 10 ಕೋಟಿ ರು. ಲಾಟರಿ ಹಣ ಜಮಾ ಮಾಡುವಂತೆ ಕೋರಿದರು.

ಆಗ ಎಲ್ಲ ಕುತೂಹಲಕ್ಕೆ ತೆರೆಬಿತ್ತು. ಇದೀಗ ಲಾಟರಿ ಏಜೆನ್ಸಿ 1 ಕೋಟಿ ರು. ಕಮಿಶನ್ ಪಡೆಯಲಿದ್ದು, ಇದಲ್ಲದೆ ಸುಮಾರು ಶೇ.35 ತೆರಿಗೆ ಕಡಿತವಾಗಲಿದೆ. ಹಾಗಾಗಿ, ಒಟ್ಟಾರೆ ಸುಮಾರು 5.5 ಕೋಟಿ ರು.ಗಳಷ್ಟು ಹಣವಷ್ಟೇ ಮುಸ್ತಫಾ ಕೈಗೆ ದೊರೆಯುವ ಸಾಧ್ಯತೆ ಇದೆ.

ಸಂಭ್ರಮ: ಮುಸ್ತಫಾಗೆ ಲಾಟರಿ ಹೊಡೆಯುತ್ತಿದ್ದಂತೆಯೇ ಅವರನ್ನು ಭಾರಿ ಸಂಖ್ಯೆಯ ಗ್ರಾಮಸ್ಥರು ಭೇಟಿ ಮಾಡಿ, ಸೆಲ್ಫಿ ತೆಗೆಸಿಕೊಂಡು ಸಂಭ್ರಮಿಸಿದರು. ಪಿಕಪ್ ವಾಹನ ಚಾಲಕರಾಗಿದ್ದ ಮುಸ್ತಫಾ ಕುಟುಂಬದಲ್ಲಿ ಐವರು ಸದಸ್ಯರಿದ್ದಾರೆ. ಪ್ರಸ್ತುತ ತಮ್ಮ ತಂದೆಯ ತೆಂಗಿನ ಕಾಯಿ ವ್ಯಾಪಾರದಲ್ಲೂ ನಿರತರಾಗಿದ್ದಾರೆ. ಪರಪ್ಪನಗುಡಿ ಬಸ್ ನಿಲ್ದಾಣದಲ್ಲಿ ಖಾಲಿದ್ ಎಂಬ ಸಬ್ ಏಜೆಂಟ್‌ನ ಬಳಿ ಈ ಟಿಕೆಟ್ ಅನ್ನು ಮುಸ್ತಫಾ ಕೊಂಡಿದ್ದರು. ’20 ವರ್ಷದಿಂದ ಲಾಟರಿ ಕೊಂಡುಕೊಳ್ಳುವ ಖಯಾಲಿ ಇತ್ತು. ಒಂದಿಲ್ಲೊಂದು ದಿನ ಬಂಪರ್ ಹೊಡೆಯುವ ನಿರೀಕ್ಷೆ ಇತ್ತು. ಬಂದ ಹಣದಿಂದ ನನ್ನ ತೆಂಗಿನಕಾಯಿ ವ್ಯಾಪಾರ ವಿಸ್ತರಿಸುವೆ. ಸಣ್ಣ ಮನೆ ಕಟ್ಟಿಸುವೆ’ ಎಂದರು ಮುಸ್ತಫಾ.

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಧರ್ಮಸ್ಥಳ ಪ್ರಕರಣ: ಶಿವಮೊಗ್ಗ ಜೈಲಿನಿಂದ ಇಂದು 'ಬುರುಡೆ ಚಿನ್ನಯ್ಯ' ಬಿಡುಗಡೆ, ಶ್ಯೂರಿಟಿ ಕೊಟ್ಟಿದ್ದು ಯಾರು?
India Latest News Live: ಬಿಹಾರ ಸೋಲಿನ ಬಳಿಕ ಪ್ರಶಾಂತ್ ಕಿಶೋರ್ - ಪ್ರಿಯಾಂಕಾ ಗಾಂಧಿ ರಹಸ್ಯ ಭೇಟಿ?