
ಬೆಂಗಳೂರು(ಆ. 03): ನಿನ್ನೆ ಆದಾಯ ತೆರಿಗೆ ಅಧಿಕಾರಿಗಳು ರೇಡ್ ಮಾಡಿದ ವೇಳೆ ಡಿಕೆ ಶಿವಕುಮಾರ್ ಕೆಲ ದಾಖಲೆಗಳನ್ನು ಹರಿದುಹಾಕಲು ಪ್ರಯತ್ನಿಸಿದರೆಂಬ ಸುದ್ದಿ ಕೇಳಿಬಂದಿತ್ತು. ಇದೀಗ, ಆ ದಾಖಲೆಯು ಬಹಳ ಮಹತ್ವದ ಅಂಶಗಳನ್ನು ಒಳಗೊಂಡಿರುವ ಡೈರಿ ಎಂಬ ಸತ್ಯ ಬಹಿರಂಗವಾಗಿದೆ. ಕಾಂಗ್ರೆಸ್ ಹೈಕಮಾಂಡ್'ಗೆ ಕಪ್ಪ ಕೊಟ್ಟಿರುವ ಮಾಹಿತಿ ಈ ಡೈರಿಯಲ್ಲಿತ್ತು ಎಂದು ರಾಷ್ಟ್ರೀಯ ವಾಹಿನಿ ಟೈಮ್ಸ್ ನೌನಲ್ಲಿ ವರದಿಯಾಗಿದೆ. ಈ ಡೈರಿಯಲ್ಲಿನ ಕೆಲ ಕಾಗದಗಳನ್ನು ಡಿಕೆಶಿ ಹರಿದುಹಾಕಿದರೆನ್ನಲಾಗಿದೆ. ಜನವರಿ 5ರಂದು ಎಐಸಿಸಿಗೆ 3 ಕೋಟಿ ರೂ ಹಣ ಸಂದಾಯವಾಗಿರುವ ಬಗ್ಗೆ ಈ ಡೈರಿಯಲ್ಲಿ ಬರೆಯಲಾಗಿದೆ. ಹೈಕಮಾಂಡ್'ಗಷ್ಟೇ ಅಲ್ಲ ಇನ್ನೂ ಕೆಲವು ನಾಯಕರಿಗೆ ಹಣ ನೀಡಿರುವ ಬಗ್ಗೆ ಡೈರಿಯಲ್ಲಿ ಉಲ್ಲೇಖವಾಗಿತ್ತೆನ್ನಲಾಗಿದೆ. ಈಗಲ್'ಟನ್ ರೆಸಾರ್ಟ್'ನಲ್ಲಿ ರೇಡ್ ಮಾಡಿದ ಐಟಿ ಅಧಿಕಾರಿಗಳ ಎದುರೇ ಡಿಕೆಶಿ ಈ ಹಾಳೆಗಳನ್ನು ಹರಿದುಹಾಕಿದ್ದರು. ಪಂಚನಾಮೆ ವೇಳೆ ಅಧಿಕಾರಿಗಳು ಈ ಹರಿದ ಕಾಗದಪತ್ರಗಳನ್ನೂ ವಶಕ್ಕೆ ತೆಗೆದುಕೊಂಡು ಹೋಗಿದ್ದರು. ಈಗಲ್ಟನ್ ರೆಸಾರ್ಟ್'ಗೆ ಐಟಿ ಅಧಿಕಾರಿಗಳು ದಾಳಿ ಮಾಡಬಹುದೆಂದು ಡಿಕೆಶಿ ನಿರೀಕ್ಷಿಸಿರಲಿಲ್ಲವೆನ್ನಲಾಗಿದೆ. ಅನಿರೀಕ್ಷಿತವಾಗಿ ನಡೆದ ಈ ದಾಳಿಯಿಂದ ಗಲಿಬಿಲಿಗೊಂಡ ಡಿಕೆಶಿ ಈ ಡೈರಿಯ ದಾಖಲೆಗಳನ್ನು ನಾಶ ಮಾಡಲು ಯತ್ನಿಸಿದ್ದರೆನ್ನಲಾಗಿದೆ.
ವಿತ್ತ ಸಚಿವ ಅರುಣ್ ಜೇಟ್ಲಿ ನಿನ್ನೆ ರಾಜ್ಯಸಭೆಯಲ್ಲಿ ಈ ಬಗ್ಗೆ ಸುಳಿವು ನೀಡಿದ್ದರು. ಐಟಿ ರೇಡ್ ವೇಳೆ ಡಿಕೆ ಶಿವಕುಮಾರ್ ಡೈರಿಯನ್ನು ಹರಿಯಲು ಯತ್ನಿಸಿದ್ದನ್ನು ಜೇಟ್ಲಿ ಉಲ್ಲೇಖಿಸಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.