
ನವದೆಹಲಿ(ಏ. 13): ದೇಶದ ರಾಜಧಾನಿಯಲ್ಲಿ ಭರ್ಜರಿ ಬಹುಮತದೊಂದಿಗೆ ಅಧಿಕಾರ ಪಡೆದಿದ್ದ ಆಮ್ ಆದ್ಮಿ ಪಕ್ಷಕ್ಕೆ ಉಪಚುನಾವಣೆಯಲ್ಲಿ ಮುಖಭಂಗವಾಗಿದೆ. ರಜೋರಿ ಗಾರ್ಡನ್ ಕ್ಷೇತ್ರದ ಉಪಸಮರದಲ್ಲಿ ಬಿಜೆಪಿ-ಶಿರೋಮಣಿ ಅಕಾಲಿ ದಳ ಮೈತ್ರಿಕೂಟದ ಅಭ್ಯರ್ಥಿ ಮಂಜೀಂದರ್ ಸಿಂಗ್ ಸಿರ್ಸಾ ಅವರು ಭರ್ಜರಿ ಜಯ ಸಾಧಿಸಿದ್ದಾರೆ. ಮಂಜೀಂದರ್ ಸಿಂಗ್ ಅವರು 14,652 ಮತಗಳ ಅಂತರದಿಂದ ಗೆಲುವು ಪಡೆದಿದ್ದಾರೆ. ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಹರ್ಜೀತ್ ಸಿಂಗ್ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಷ್ಟೇ ಅಲ್ಲ ಠೇವಣಿಯನ್ನೂ ಕಳೆದುಕೊಂಡಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಮೀನಾಕ್ಷಿ ಚಾಂದೇಲಾ ಎರಡನೇ ಸ್ಥಾನ ಪಡೆದಿದ್ದಾರೆ. ಬಿಜೆಪಿ ಅಭ್ಯರ್ಥಿ ಶೇ.50ಕ್ಕಿಂತಲೂ ಹೆಚ್ಚು ಮತ ಪ್ರಮಾಣ ಪಡೆದಿದ್ದಾರೆ. ಕಾಂಗ್ರೆಸ್ ಶೇ.38ರಷ್ಟು ಮತ ಪಡೆದು ಸಮಾಧಾನಪಟ್ಟುಕೊಂಡಿದೆ.
ಆಮ್ ಆದ್ಮಿಯ ಜರ್ನೇಲ್ ಸಿಂಗ್ ಅವರು ಪಂಜಾಬ್'ನಲ್ಲಿ ಚುನಾವಣೆ ಎದುರಿಸಲು ತೆರಳಿದ್ದರಿಂದ ರಜೋರಿ ಗಾರ್ಡನ್ ಕ್ಷೇತ್ರದ ಶಾಸಕ ಸ್ಥಾನ ತೆರವಾಗಿತ್ತು. ಈ ಹಿನ್ನೆಲೆಯಲ್ಲಿ ಉಪಚುನಾವಣೆ ಭಾನುವಾರ ನಡೆದಿತ್ತು. ಕೆಲವೇ ತಿಂಗಳಲ್ಲಿ ದೆಹಲಿಯ ಮಹಾನಗರಪಾಲಿಕೆ ಚುನಾವಣೆ ನಡೆಯಲಿರುವುದರಿಂದ ಈ ಚುನಾವಣೆ ಬಹಳ ಮಹತ್ವ ಪಡೆದುಕೊಂಡಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.