
ಬೆಂಗಳೂರು (ಜೂ.30): ನೋಟು ಅಮಾನ್ಯದ ಬಳಿಕ ಖೋಟಾ ನೋಟು ಕಾಟ ದೇಶಕ್ಕಿರೋದಿಲ್ಲ ಅಂತ ನಂಬಲಾಗಿತ್ತು. ಆದ್ರೆ ಹಾಗಾಗುತ್ತಿಲ್ಲ. ಬದಲಾಗಿ ಖೋಟಾ ನೋಟಿನ ದಂಧೆ ಈಗಲೂ ದೊಡ್ಡ ಪ್ರಮಾಣದಲ್ಲೇ ನಡೀತಿದೆ. ಅದು ನಮ್ಮ ಕರ್ನಾಟಕ ರಾಜ್ಯದೊಳಗೆ ಅನ್ನೋದು ಆತಂಕಕಾರಿ ವಿಚಾರ. ಈ ಶಾಕಿಂಗ್ ನ್ಯೂಸ್ ಅನ್ನ ಸುವರ್ಣ ನ್ಯೂಸ್ ಕವರ್ಸ್ಟೋರಿ ತಂಡ ಭಾರೀ ಅಪಾಯ ಎದುರಿಸಿ ಪತ್ತೆ ಹಚ್ಚಿದೆ.
ಪಕ್ಕಾ ಒರಿಜಿನಲ್ ಥರಾನೇ ಕಾಣೋ ಐವತ್ತು ನೂರು, ಐನ್ನೂರರ ಖೋಟಾ ನೋಟು ಪ್ರಿಂಟ್ ಮಾಡಿ ಜನರಿಗೆ ಮಾರೋ ಸ್ಮಗ್ಲರ್ಗಳ ತಂಡ ನಮ್ಮ ರಾಜ್ಯದೊಳಗೆ ಆಕ್ಟೀವ್ ಆಗಿದೆ ಅನ್ನೋ ಪಕ್ಕಾ ಮಾಹಿತಿ ಕವರ್ಸ್ಟೋರಿ ತಂಡಕ್ಕೆ ಸಿಕ್ತು. ಈ ಸ್ಮಗ್ಲರ್ಗಳ ವಿರುದ್ಧ ಕಾರ್ಯಾಚರಣೆ ಮಾಡೋದು ತುಂಬಾನೇ ಅಪಾಯಕಾರಿ ಅಂತ ಗೊತ್ತಿದ್ರೂ ದೇಶಕ್ಕಾಗಿ ಆ ಅಪಾಯ ಎದುರಿಸಲು ರೆಡಿಯಾದ್ವಿ. ಬಲೆಗೆ ಬಿದ್ದ ಏಜೆಂಟ್ ಲಕ್ಕಪ್ಪ! ಈ ಖೋಟಾನೋಟು ಮಾಫಿಯಾದೊಳಗೆ ನುಗ್ಗಲು ಏಜೆಂಟ್ ಲಕ್ಕಪ್ಪ ಫಕೀರಪ್ಪರನನ್ನ ಸೂತ್ರವಾಗಿ ಬಳಸಿಕೊಂಡ್ವಿ. ಲಕ್ಕಪ್ಪ ಹಣದ ಬಗ್ಗೆ ದುರಾಸೆ ಇರೋ ಅಮಾಯಕರನ್ನ, ಸಡನ್ ಶ್ರೀಮಂತರಾಗಬೇಕೆನ್ನುವ ಮಧ್ಯಮ ವರ್ಗದವರನ್ನೇ ಟಾರ್ಗೆಟ್ ಮಾಡ್ತಾನೆ. ಟಾರ್ಗೆಟ್ ಮಾಡಿ ಅವರಿಗೆ ಖೋಟಾ ನೋಟಿನ ಮಾಫಿಯಾದೊಳಗೆ ಎಂಟ್ರಿ ಕೊಡಿಸ್ತಾನೆ. ಇವನ ಈ ಟ್ರಿಕ್ಸ್ನ್ನ ಚೆನ್ನಾಗಿ ಅರಿತ ನಾವು, ಆತನ ಬಲೆಗೆ ಬೇಕೂಂತಲೇ ಬಿದ್ವಿ. ಆತನ ಜೊತೆ ದೂರವಾಣಿ ಸಂಪರ್ಕ ಸಾಧಿಸಿದ್ವಿ. ವಿಶ್ವಾಸ ಗಳಿಸಿ, ಮನಗೆದ್ವಿ.
ದಂಧೆಗೆ ಮುಹೂರ್ತ ಫಿಕ್ಸ್: ನಮ್ಮ ಬೇಟೆಗೆ ಮೂಹೂರ್ತ ಫಿಕ್ಸ್ ಮಾಡಿದ ಲಕ್ಕಪ್ಪ ನಮ್ಮನ್ನ ಬೆಳಗಾವಿಯ ಚಿಕ್ಕೋಡಿಗೆ ಬರಹೇಳಿದ. ಆತನ ಅಣತಿಯಂತೆ ಚಿಕ್ಕೋಡಿಗೆ ಹೋಗಿ ಆತನ ಗಾಡಿ ಏರಿದ್ವಿ. ಲಕ್ಕಪ್ಪ ನಮಗೆ ಖೋಟಾ ನೋಟು ಕೊಡೋ ಗ್ಯಾಂಗ್ನ ಪ್ರಮುಖರನ್ನ ಭೇಟಿ ಮಾಡಿಸಲು ಚಿಕ್ಕೋಡಿಯ ಮಹಾರಾಷ್ಟ್ರ ಗಡಿಯಲ್ಲಿರೋ ಭೋಜ್ಗೆ ಕರ್ಕೊಂಡು ಹೋದ. ನಾವು ಚೇಸ್ ಮಾಡುತ್ತಲೇ ಸಾಗಿದ್ವಿ. ಈ ವೇಳೆ ಲಕ್ಕಪ್ಪ ಈ ದಂಧೆಯ ಕೆಲ ಟಾಪ್ ಸೀಕ್ರೆಟ್ಗಳನ್ನ ಬಿಟ್ಟು ಕೊಟ್ಟ. ಅದೇನಂದ್ರೆ ಈ ಖೋಟಾನೋಟು ಪಾಕಿಸ್ತಾನದಿಂದ ಸಪ್ಲೈ ಆಗುತ್ತೆ. ಪಾಕಿಸ್ತಾನದಿಂದ ನೇಪಾಳದ ಮೂಲಕ ಕೆಲ ವ್ಯಾಪರಸ್ಥರ ಕೈ ಸೇರೋ ಈ ನೋಟು ಭಾರತ ಪ್ರವೇಶಿಸುತ್ತಿದೆ ಅಂತ ಹೇಳಿದ. ಅಲ್ಲದೆ ಈ ಖೋಟಾನೋಟು ಪತ್ತೆ ಹಚ್ಚೋದೇ ಕಷ್ಟ. ಪಕ್ಕಾ ಒರಿಜಿನಲ್ ಥರಾ ಇರುತ್ತೆ, ಬ್ಯಾಂಕ್ನಲ್ಲಿ ಕೂಡ ಗೊತ್ತಾಗಲ್ಲ ಅಂದ. ಇಂಥಾ ಭಯಾನಕ ಸತ್ಯ ಬಿಚ್ಚಿಟ್ಟ ಲಕ್ಕಪ್ಪ ನಮಗೆ ಈ ದಂಧೆಯ ಬಗ್ಗೆ ಹೇಳುತ್ತಾ ಹೇಳುತ್ತಾ, ನೋಟಿನ ಸ್ಯಾಂಪಲ್ ತೋರಿಸಿ ಡೀಲ್ ಕುದುರಿಸಲು ಬೆಳಗಾವಿಯ ಚಿಕ್ಕೋಡಿಯಲ್ಲಿರೋ ಮಹಾರಾಷ್ಟ್ರದ ಗಡಿ ಭಾಗದಲ್ಲಿರೋ ಭೋಜ್ಗೆ ಕರ್ಕೊಂಡು ಬಂದ.
ಮನೆಯಲ್ಲೇ ನಡೆಯಿತು ಡೀಲ್: ಲಕ್ಕಪ್ಪ ನಮ್ಮನ್ನ ಭೋಜ್ನಲ್ಲಿರೋ ಒಂದು ದೊಡ್ಡ ಬಂಗಲೆಯೊಳಗೆ ಕರ್ಕೊಂಡು ಹೋದ. ಗೋಡೌನ್ ಥರ ಇತ್ತ ಆ ಬಂಗಲೆಯೊಳಗೆ ಖೋಟಾ ನೋಟು ದಂಧೆಯ ಪ್ರಮುಖ ಕಿಂಗ್ಪಿನ್ ರಣಜೀತ್ ಪಾಟೀಲ್ ನಮಗಾಗಿ ಕಾಯುತ್ತಿದ್ದ. ರಂಜಿತ್ ಪಾಟೀಲ್, ಈ ದಂಧೆಯ ಹಳೇ ಕುಳ. ಕಳೆದ ಹತ್ತು ಹದಿನೈದು ವರ್ಷಗಳಿಂದ ಖೋಟಾನೋಟು, ಡಬ್ಲಿಂಗ್ ದಂಧೆ ನಡೆಸುತ್ತಿದ್ದಾನಂತೆ. ದೊಡ್ಡ ದೊಡ್ಡವರ ಲಿಂಕ್ ಇದ್ದೇ ಈ ದಂಧೆ ನಡೆಸುತ್ತಿರೋ ಖತರ್ನಾಕ್ ವ್ಯಕ್ತಿ ಈತ. ಈತ ನಮ್ಮ ನ್ನ ಆತನ ಮನೆಯೊಳಗೆ ಕೂರಿಸಿ ದಂಧೆಯ ಬಗ್ಗೆ ಮಾತುಕತೆ ಪ್ರಾರಂಭಿಸಿದ. ನಾವು ಒಂದು ಲಕ್ಷ ಒರಿಜಿನಲ್ ನೋಟು ಕೊಟ್ರೆ ನಮಗೆ 10ಲಕ್ಷ ಖೋಟಾ ನೋಟು ಕೊಡ್ತಾರಂತೆ. ಇನ್ನು 10ಲಕ್ಷ ಕೊಟ್ರೆ 1 ಕೋಟಿ ಕೊಡ್ತಾರಂತೆ. ನಮಗೆ ನಂಬಿಕೆ ಬರಲು ಐವತ್ತು ರೂಪಾಯಿಯ ಖೋಟಾ ನೋಟಿನ ಸ್ಯಾಂಪಲ್ಲೂ ಕೊಟ್ಟ. ಆ ಸ್ಯಾಂಪಲ್ ನೋಡಿ ಬೆಚ್ಚಿ ಬಿದ್ದೆವು. ಪಕ್ಕಾ ಒರಿಜಿನಲ್ ನೋಟಿನಂತೆ ಇದೆ. ವ್ಯತ್ಯಾಸವೇ ಗೊತ್ತಾಗಲ್ಲ. ಅಚ್ಚರಿಪಟ್ಟ ನಾವು ನಾಲ್ಕು ಸಾವಿರ ರೂಪಾಯಿ ಕೊಟ್ಟು ಆ ಬಂಡಲನ್ನ ಖರೀದಿಸಿಯೇ ಬಿಟ್ವಿ.
ಮಹಾರಾಷ್ಟ್ರದಿಂದ ನೋಟು ಸಪ್ಲೈ: ಈ ನೋಟು ಎಲ್ಲಿಂದ ತರ್ತೀರಾ? ವ್ಯವಹಾರ ಹೇಗೆ ನಡೆಸ್ತೀರಾ? ಅಂತ ಕೇಳಿದಾಗ, ಆತ ಹೇಳಿದ್ದೇನು ಗೊತ್ತಾ? ಮಹಾರಾಷ್ಟ್ರದ ದೊಡ್ಡ ಸ್ಮಗ್ಲರ್ ಗ್ಯಾಂಗ್ ಈ ವ್ಯವಹಾರವನ್ನ ನಡೆಸುತ್ತಂತೆ. ಇವರಿಗೆ ಮೀರಜ್ನಿಂದ ಖೋಟಾನೋಟು ಸಪ್ಲೈ ಆಗುತ್ತಂತೆ. ಮೊದಲು ಅಸಲಿ ಹಣ ಡಿಪಾಸಿಟ್ ಮಾಡಿ ಆಮೇಲೆ ಖೋಟಾ ನೋಟು ಖರೀದಿಸಬೇಕಂತೆ. ನಾವು ನೂರು, ಐನ್ನೂರರ ಸ್ಯಾಂಪಲ್ ತೋರಿಸಲು ಹೇಳಿದ್ವಿ. ನಾಳೆ ಸ್ಯಾಂಪಲ್ ಬರುತ್ತೆ. ನೀವು ಮೂವತ್ತು ಸಾವಿರ ರೂಪಾಯಿ ಕಟ್ಟಿದ್ರೆ ಒಂದು ಲಕ್ಷ ರೂಪಾಯಿ ಕೊಡ್ತೀನಿ ಅಂತ ಹೇಳಿ ತನ್ನ ಬಳಿ ಇದ್ದ ಕೆಲ ಸ್ಯಾಂಪಲ್ ತೋರಿಸಿದ. ಈ ಸ್ಯಾಂಪಲ್ ಹಾಗೂ ಒರಿಜಿನಲ್ ಮಧ್ಯೆ ವ್ಯತ್ಯಾಸ ಹುಡುಕುವುದೇ ಕಷ್ಟ ಸಾಧ್ಯ. ಇವರ ಬಳಿ ಡೀಲ್ ಕುದಿರಿಸಿದ್ವಿ. ಸ್ಯಾಂಪಲ್ ಪಡೆದುಕೊಂಡು ನಾಳೆ ಹತ್ತು ಲಕ್ಷ ಪಕ್ಕಾ ತರುವುದಾಗಿ ಮಾತುಕೊಟ್ವಿ. ಈ ಡೀಲ್ ಜೊತೆ ದೇಶದ್ರೋಹಿಗಳನ್ನ ಅಂದರ್ ಮಾಡ್ಲೇ ಬೇಕು ಅಂತ ನಿರ್ಧರಿಸಿದ್ವಿ. ಅದಕ್ಕಾಗಿ ಬೆಳಗಾವಿ ಪೊಲೀಸ್ ವರಿಷ್ಠಾಧಿಕಾರಿ ರವಿಕಾಂತೇ ಗೌಡರ ಸಹಾಯ ಕೋರಿದ್ವಿ. ಅವರು ಚಿಕ್ಕೋಡಿ ಡಿವೈಎಸ್ಪಿ ಬಿಎಸ್ ಅಂಗಡಿಯವರಿಗೆ ತಿಳಿಸಿದ್ರು. ಅಂಗಡಿಯವರು ಕಾರ್ಯಾಚರಣೆಯ ಜವಾಬ್ದಾರಿಯನ್ನ ಸದಲಗಾ ಪೊಲೀಸ್ ಠಾಣೆಯ ಎಸ್ಐ ಸಂಗಮೇಶ್ ಅವರಿಗೆ ನೀಡಿದ್ರು. ಸಂಗಮೇಶ್ ಅವರ ತಂಡ ಹಾಗೂ ನಮ್ಮ ಆಪರೇಷನ್ ಖೋಟಾ ನೋಟಿಗೆ ಸಹಕರಿಸಲು ರೆಡಿಯಾಯ್ತು. ಪಕ್ಕಾ ಪ್ಲಾನ್ ಮಾಡಿದ ನಾವು ಡೀಲ್ ಮುಗಿಸಲು ಲಕ್ಕಪ್ಪನನ್ನ ಆಹ್ವಾನಿಸಿದ್ವಿ. ಆತ ಹತ್ತು ಗಂಟೆಗೆ ಭೋಜ್ಗೆ ಬರಲು ನಮಗೆ ಹೇಳಿದ. ನಾವು ಫುಲ್ ರೆಡಿಯಾಗಿ ಆತನ ಬರುವಿಕೆಗೆ ಕಾಯಲು ಪ್ರಾರಂಭಿಸಿದ್ವಿ. ಮದ್ಯಾಹ್ನ ಎರಡು ಗಂಟೆ ವರೆಗೆ ಲಕ್ಕಪ್ಪನ ಪತ್ತೆಯೇ ಇಲ್ಲ. ಬೇಟೆ ಕೈತಪ್ಪಿ ಹೋಯ್ತು ಬೇಜಾರಲ್ಲಿ ಕಾಯ್ದಿದ್ದಾಗ, ಲಕ್ಕಪ್ಪನ ಸ್ಕಾರ್ಪಿಯೋ ಗಾಡಿ ಬಂದೇ ಬಿಡ್ತು. ನಾವು ತಕ್ಷಣ ಗಾಡಿ ಹತ್ತಿ ಆತ ಹಾಗೂ ಆತನ ಪತ್ನಿ ಮಂಜುಳಾಳನ್ನ ಲಾಕ್ ಮಾಡಿದೆವು. ಪ್ರಮುಖ ಕಿಂಗ್ ಪಿನ್ ರಣಜೀತ್ನನ್ನು ಮಾಲು ಸಮೇತವಾಗಿ ಬಂಧಿಸಲು ಭೋಜ್ಗೆ ತೆರಳಿದೆವು. ಆದ್ರೆ ಅಷ್ಟೊತ್ತಿಗೆ ನಮ್ಮ ಆಗಮನದ ಮಾಹಿತಿ ಆತನಿಗೆ ಗೊತ್ತಾಗಿ ಆತ ತಪ್ಪಿಸಿಕೊಳ್ಳಲು ಮುಂದಾದ. ಆದ್ರೆ ಸದಲಗಾ ಪೊಲೀಸ್ ತಕ್ಷಣ ಎಚ್ಚೆತ್ತು ರಣಜೀತ್ ಹಾಗೂ ಆತನ ಸ್ನೇಹಿತ ವಿನಯ್ ಸಿದಗೌಡ ಪಾಟೀಲನನ್ನೂ ಬಂಧಿಸಿದ್ರು. ನಾಲ್ಕು ಮಂದಿ ಆರೋಪಿಗಳನ್ನ ಸದಲಗಾ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಮಾಡಿದ್ರು. ಬಳಿಕ ಎಫ್ಐಆರ್ ದಾಖಲಿಸಿ ಜೈಲಿಗೆ ಅಟ್ಟಿದ್ರು.
ಈ ಆರೋಪಿ ಹಲವು ವರ್ಷಗಳಿಂದ ಈ ದಂಧೆ ನಡೆಸುತ್ತಿದ್ದಾರೆ. ಖೋಟಾನೋಟು ಮೂಲಕ ದೇಶದ ಆರ್ಥಿಕತೆಗೆ ಸಾಕಷ್ಟು ಏಟು ಕೊಟ್ಟಿದ್ದಾರೆ. ಇವರ ಈ ದಂಧೆಯ ಹಿಂದೆ ದೊಡ್ಡ ಜಾಲವೊಂದಿದೆ. ದೊಡ್ಡದೊಡ್ಡವರ ಕೈವಾಡವೂ ಇದೆಯಂತೆ. ಇದಕ್ಕೆ ವಿದೇಶದ ಲಿಂಕೂ ಇದೆ. ಈ ಬಗ್ಗೆ ಉನ್ನತಮಟ್ಟದ ತನಿಖೆ ನಡೆಸಿದ್ರೆ ಇನ್ನಷ್ಟು ಕರಾಳ ಸತ್ಯ ಬಯಲಾಗುತ್ತೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.