ಹಾವೇರಿ(ಅ.06): ವಿದ್ಯಾದೇಗುಲದಲ್ಲಿ ಧರ್ಮಯುದ್ದ ನಡೆಯುತ್ತಿದೆ. ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ವಿವಿಧ ಕಾಲೇಜುಗಳಲ್ಲಿ, ಈಗ ಬುರ್ಖಾ ವರ್ಸಸ್ ಕೇಸರಿ ಶಾಲು ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಹಾನಗಲ್ ಪಟ್ಟಣದ ಕುಮಾರೇಶ್ವರ ಪದವಿ ಕಾಲೇಜಿನಲ್ಲಿ ಸಮವಸ್ತ್ರ ಧರಿಸಿಕೊಂಡು ಕಾಲೇಜಿಗೆ ವಿಧ್ಯಾರ್ಥಿಗಳು ಬರಬೇಕು. ಆದ್ರೆ ಒಂದು ಕೋಮಿಗೆ ಸೇರಿದ ವಿಧ್ಯಾರ್ಥಿನೀಯರು ಬುರ್ಖಾ ಧರಿಸಿ ಬರುತ್ತಿದ್ದಾರೆ.
ಆದರೆ, ಇದನ್ನು ಖಂಡಿಸಿ ಇನ್ನೊಂದು ಕೋಮಿನ ವಿದ್ಯಾರ್ಥಿ ವಿದ್ಯಾರ್ಥಿನಿಯರು ಕೇಸರಿ ಶಾಲು ಧರಿಸಿ ಕಾಲೇಜುಗಳಿಗೆ ಬರುತ್ತಿದ್ದಾರೆ. ಬುರ್ಖಾ ತೆಗೆಯುವವರೆಗೂ ಕೇಸರಿ ಶಾಲು ತೆಗೆಯುವುದಿಲ್ಲವೆಂದು ಪಟ್ಟು ಹಿಡಿದಿದ್ದಾರೆ. ಇದು ಕಾಲೇಜು ಪ್ರಾಚಾರ್ಯರಿಗೆ ಹಾಗೂ ಆಡಳಿತ ಮಂಡಳಿಯವರಿಗೆ ತಲೆನೋವಾಗಿದೆ.
ವಿದ್ಯಾರ್ಥಿಗಳ ಜತೆಗೆ ನಡೆಸಿದ ಮಾತುಕತೆಗಳು ಸಹ ವಿಫಲವಾಗಿದ್ದು, ಕಾಲೇಜು ಆವರಣದಲ್ಲಿ ಬೂದಿ ಮುಚ್ಚಿದ ಕೆಂಡದ ವಾತಾವರಣ ಸೃಷ್ಠಿಯಾಗಿದೆ. ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗಬೇಕಿದ್ದ ಕಾಲೇಜು ಆವರಣದಲ್ಲಿ ಬುರ್ಖಾ ವರ್ಸಸ್ ಕೇಸರಿ ಶಾಲಿನಿಂದಾಗಿ ಧರ್ಮಯುದ್ದ ನಡೆಯುತ್ತಿದೆ. ಇದು ಜಿಲ್ಲೆಯ ವಿವಿಧ ಕಾಲೇಜುಗಳಿಗೆ ಆವರಿಸುವ ಆತಂಕ ಮೂಡಿದ್ದು, ಪೋಲಿಸರು ಎಲ್ಲೆಡೆ ನಿಗಾ ಇಟ್ಟಿದ್ದಾರೆ.