‘ರಾಮನಗರದಿಂದ ಸಿಎಂ’ ಆದವರಿಗಿಲ್ಲ 5 ವರ್ಷ ಭಾಗ್ಯ

Published : Jul 18, 2019, 08:07 AM ISTUpdated : Jul 18, 2019, 01:25 PM IST
‘ರಾಮನಗರದಿಂದ ಸಿಎಂ’ ಆದವರಿಗಿಲ್ಲ 5 ವರ್ಷ ಭಾಗ್ಯ

ಸಾರಾಂಶ

ಕೆಂಗಲ್‌, ರಾಮಕೃಷ್ಣ ಹೆಗಡೆ, ದೇವೇಗೌಡ, ಎಚ್‌ಡಿಕೆಗೆ ಸಿಎಂ ಆಗಿ ಅವಧಿ ಪೂರ್ಣ​ಗೊ​ಳಿ​ಸಿಲ್ಲ |  ಈಗ ಕುಮಾರಸ್ವಾಮಿಗೆ ಮತ್ತದೇ ಸವಾಲು | ಎಚ್‌ಡಿಕೆ ನೇತೃ​ತ್ವದ ರಾಜ್ಯ ಮೈತ್ರಿ ಸರ್ಕಾ​ರಕ್ಕೆ ಮತ್ತೊಮ್ಮೆ ಕಂಟಕ |ಸಂಕಟದಿಂದ ಪಾರಾಗಿ ಅವಧಿ ಪೂರ್ಣಗೊಳಿಸುತ್ತಾರಾ ಎಚ್‌ಡಿಕೆ?

ಬೆಂಗಳೂರು (ಜು. 18):  ರಾಮ​ನ​ಗರದಲ್ಲಿ ರಾಜ​ಕೀ​ಯ​ವಾಗಿ ಆಶ್ರ​ಯ ಪಡೆ​ದಿದ್ದ ನಾಲ್ವರು ಪ್ರಭಾವಿ ರಾಜ​ಕಾ​ರ​ಣಿ​ಗಳಿಗೆ ಮುಖ್ಯ​ಮಂತ್ರಿ ಗದ್ದುಗೆಗೇರುವ ಅದೃ​ಷ್ಟ​ವೇನೊ ಒಲಿದಿದೆ. ಆದರೆ ಆಡ​ಳಿತ ಚುಕ್ಕಾ​ಣಿ​ಯನ್ನು ಪೂರ್ಣಾ​ವ​ಧಿ​ವ​ರೆಗೆ ನಡೆ​ಸುವ ಯೋಗ ಮಾತ್ರ ಇನ್ನೂ ಒದಗಿ ಬರಲಿಲ್ಲ.

ರಾಜ್ಯ ರಾಜಕೀಯದಲ್ಲಿ ಅತಿರಥ ಮಹಾರಥರಂತೆ ಮೆರೆದಿದ್ದ ಕೆಂಗಲ್  ಹನುಮಂತಯ್ಯ, ರಾಮ​ಕೃಷ್ಣ ಹೆಗಡೆ , ಎಚ್‌.ಡಿ.ದೇವೇಗೌಡ ಈ ಮೂವರೂ ವಿವಿಧ ಕಾರಣಗಳಿಗಾಗಿ ಪೂರ್ಣಾವಧಿ ಆಡಳಿತ ನಡೆಸಲು ಸಾಧ್ಯವಾಗಲೇ ಇಲ್ಲ.

ಈಗ ಚನ್ನ​ಪ​ಟ್ಟಣ ವಿಧಾ​ನ​ಸಭಾ ಕ್ಷೇತ್ರ​ದಿಂದ ಚುನಾ​ಯಿ​ತ​ರಾಗಿ ಮುಖ್ಯಮಂತ್ರಿಯಾದ ಕುಮಾರಸ್ವಾಮಿಯವರು ಅತೃಪ್ತ ಶಾಸಕರ ರಾಜೀನಾಮೆಯಿಂದಾಗಿ ಜೆಡಿ​ಎಸ್‌ -ಕಾಂಗ್ರೆಸ್‌ ಮೈತ್ರಿ ಸರ್ಕಾ​ರ ಸಂಕ​ಷ್ಟಕ್ಕೆ ಸಿಲು​ಕಿದ್ದಾರೆ. ಗುರುವಾರದಂದು ವಿಶ್ವಾಸಮತ ಯಾಚನೆಗೆ ನಿಗದಿಯಾಗಿದೆ. ಈ ಅಗ್ನಿಪರೀಕ್ಷೆಯಲ್ಲಿ ಕುಮಾರಸ್ವಾಮಿ ವಿಶ್ವಾಸಮತ ಗೆದ್ದು, ಪೂರ್ಣಾವಧಿ ಸರ್ಕಾರ ನೀಡುವ ಮೂಲಕ ಈ ಅಪವಾದ ತೊಡೆದು ಹಾಕುತ್ತಾರಾ ಎಂಬ ಕುತೂಹಲ ಎಲ್ಲರಲ್ಲಿದೆ.

ಎರಡು ಬಾರಿ ಕೆಂಗಲ್‌ಗೆ ಮಣೆ:

ವಿಧಾನಸೌಧದ ನಿರ್ಮಾತೃ ಮಾಜಿ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ರಾಮನಗರದವರು. 1952, 1957ರಲ್ಲಿ ರಾಮನಗರ ಕ್ಷೇತ್ರದಿಂದ ಆಯ್ಕೆಯಾಗಿದ್ದರು. 1952ರ ಮೊದಲ ವಿಧಾ​ನ​ಸ​ಭೆ​ಯಲ್ಲಿ ಮೈಸೂರು ರಾಜ್ಯದ ಪ್ರಭಾವಿ ಕಾಂಗ್ರೆಸ್‌ ನಾಯಕರಾಗಿದ್ದ ಕೆಂಗಲ್ ಅವರಿಗೆ ಮುಖ್ಯಮಂತ್ರಿ ಪದವಿ ಒಲಿದು, 4 ವರ್ಷ 5 ತಿಂಗಳು ಆಡ​ಳಿತ ನಡೆ​ಸಿ​ದ್ದ​ರು. ಆಂತರಿಕ ಭಿನ್ನಮತದಿಂದಾಗಿ ಕಾಂಗ್ರೆಸ್ಸಿಗರೇ ಅವಿ​ಶ್ವಾಸ ನಿರ್ಣಯ ಮಂಡಿಸಿದ್ದರು. ವಿಶ್ವಾಸಮತ ಸಾಬೀತು ಪಡಿ​ಸ​ಲಾ​ಗದೆ ಕೆಂಗಲ್‌ ಅಂದು ಅಧಿ​ಕಾರ ಕಳೆ​ದು​ಕೊ​ಳ್ಳು​ತ್ತಾರೆ. ಬಾಕಿ ಉಳಿ​ದಿದ್ದ ನಾಲ್ಕು ತಿಂಗಳ ಅವಧಿಗೆ ಕಡಿ​ದಾಳ್‌ ಮಂಜಪ್ಪ ಮುಖ್ಯ​ಮಂತ್ರಿ ಆಗಿದ್ದರು.

ಹೆಗಡೆಗೆ ರಾಜ​ಕಿ​ಯ ಆಶ್ರಯ:

1983ರಲ್ಲಿ ರಾಜ್ಯದಲ್ಲಿ ಮೊದಲ ಬಾರಿಗೆ ಕಾಂಗ್ರೆಸ್ಸೇತರ ಸರ್ಕಾರ ಅಸ್ತಿತ್ವಕ್ಕೆ ಬಂತು. ಬಿಜೆಪಿ ಬೆಂಬಲದೊಂದಿಗೆ ಅಧಿಕಾರಕ್ಕೆ ಬಂದ ಜನತಾ ಪಕ್ಷದ ಸರ್ಕಾರದಲ್ಲಿ ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾದರು. ಉಭಯ ಸದನಗಳಲ್ಲಿ ಯಾವುದರಲ್ಲೂ ಶಾಸಕ ಸ್ಥಾನವಿರದ ಅವರು ಆರು ತಿಂಗಳೊಳಗೆ ಶಾಸಕರಾಗಬೇಕಾಗಿತ್ತು. ಅವರಿಗಾಗಿ ಕನಕಪುರದಿಂದ ಚುನಾಯಿತರಾಗಿದ್ದ ಪಿ.ಜಿ.ಆರ್‌.ಸಿಂಧ್ಯಾ ಸ್ಥಾನ ತೆರವು ಮಾಡಿಕೊಟ್ಟರು.

ಚುನಾವಣೆಯಲ್ಲಿ ಬನ್ನಿಮಕೋಡ್ಲು ಲಿಂಗೇ​ಗೌಡ ಎದುರು ರಾಮಕೃಷ್ಣ ಹೆಗಡೆ ಗೆಲುವು ಸಾಧಿಸಿ, ಸದನ ಸದಸ್ಯರಾದರು. 12 ತಿಂಗಳು ಮಾತ್ರ ಮುಖ್ಯ​ಮಂತ್ರಿ​ಯಾಗಿ ಆಡ​ಳಿತ ನಡೆ​ಸಿ​ದ್ದರು. ಜನತಾ ಪಕ್ಷದ ಶಾಸ​ಕ​ರೊಂದಿಗಿನ ಸಂಭಾ​ಷ​ಣೆಯುಳ್ಳ ವೀರಪ್ಪ ಮೊಯ್ಲಿ ಅವರ ಟೇಪ್‌ ಹಗ​ರಣದಿಂದಾಗಿ ಹೆಗಡೆಯವರು ಸರ್ಕಾ​ರ ವಿಸ​ರ್ಜಿಸಿ ಜನಾ​ದೇ​ಶಕ್ಕೆ ತೆರ​ಳಿದ್ದರು.

ದೇವೇಗೌಡ​ರಿಗೆ ಮರುಹುಟ್ಟು:

1994ರ ಚುನಾವಣೆಯಲ್ಲಿ ರಾಜ್ಯದಲ್ಲಿ ಜನತಾ ದಳ ಪರ ಅಲೆ ಇತ್ತು. ಸ್ವಕ್ಷೇತ್ರ ಹೊಳೆ​ನ​ರ​ಸೀ​ಪುರ ಮತ್ತು ರಾಮನಗರ ಪೈಕಿ ರಾಮನಗರದಿಂದ ಗೆದ್ದರೆ ಮುಖ್ಯಮಂತ್ರಿ ಕುರ್ಚಿ ಏರುವುದು ಸಲೀಸು ಎನ್ನುವ ಜ್ಯೋತಿಷ್ಯವಾಣಿ ಪ್ರಕಾರ ದೇವೇಗೌಡರು ರಾಮನಗರದಿಂದ ಸ್ಪರ್ಧಿಸಿ ಗೆದ್ದಿದ್ದರು. ಮಾತ್ರವಲ್ಲ ಮುಖ್ಯಮಂತ್ರಿ ಹುದ್ದೆಗೇರಿ 17 ತಿಂಗಳು ಆಡ​ಳಿತ ನಡೆಸಿದರು. ಆ ವೇಳೆ ಅವರಿಗೆ ಪ್ರಧಾನ ಮಂತ್ರಿ ಹುದ್ದೆ ಒಲಿದು ಬಂದಿದ್ದರಿಂದ ಮುಖ್ಯಮಂತ್ರಿ ಹುದ್ದೆಯನ್ನು ತ್ಯಜಿಸಿದರು.

ಎಚ್‌ಡಿಕೆಗೆ ರಾಜಕೀಯ ಜನ್ಮಭೂಮಿ:

1996ರಲ್ಲಿ ಲೋಕಸಭಾ ಚುನಾವಣೆ ಕನಕಪುರ ಲೋಕಸಭಾ ಕ್ಷೇತ್ರದಲ್ಲಿ ಅವಿಭಜಿತ ಜನತಾದಳ ಅಭ್ಯರ್ಥಿಯಾಗಿ ಭಾರೀ ಅಂತರದ ಗೆಲುವು ಸಾಧಿಸಿದ್ದ ಎಚ್‌.ಡಿ.ಕುಮಾರಸ್ವಾಮಿ ಮುಂದೆ ರಾಮನಗರವನ್ನೇ ರಾಜಕೀಯ ಜನ್ಮಭೂಮಿಯನ್ನಾಗಿಸಿಕೊಂಡರು.

2004 ರಲ್ಲಿ ರಾಮನಗರ ಕ್ಷೇತ್ರದಿಂದ ವಿಧಾನಸಭೆಗೆ ಮೊದಲ ಬಾರಿ ಪ್ರವೇಶಿಸಿದ ಅವರು ಬಿಜೆಪಿ ಸಖ್ಯದೊಂದಿಗೆ ಮುಖ್ಯಮಂತ್ರಿಯೂ ಆದರು. ಆದರೆ ಆ ಸರ್ಕಾರ 20 ತಿಂಗಳಲ್ಲೇ ಬಿದ್ದು ಹೋಯಿತು. ಇದೀಗ ಕಾಂಗ್ರೆಸ್‌ ಜೊತೆಗಿನ ದೋಸ್ತಿ ಸರ್ಕಾರದಲ್ಲಿ ಕುಮಾ​ರ​ಸ್ವಾ​ಮಿ​ ಮುಖ್ಯ​ಮಂತ್ರಿಯಾಗಿ ಅಧಿ​ಕಾರ ಸ್ವೀಕ​ರಿಸಿ 14 ತಿಂಗ​ಳಾ​ಗಿದ್ದು ಮತ್ತೊಮ್ಮೆ ಕಂಟಕ ಎದು​ರಾ​ಗಿದೆ.

ಮುಖ್ಯ​ಮಂತ್ರಿ-ಆರಂಭ-ಮುಕ್ತಾಯ-ರಾಜ​ಕೀಯ ಪಕ್ಷ-ವಿಧಾ​ನ​ಸಭೆ

ಕೆಂಗಲ್‌ ಹನು​ಮಂತಯ್ಯ-1952 ಮಾ.30-1956 ಆ.19-ಕಾಂಗ್ರೆಸ್‌-1ನೇ ವಿಧಾ​ನ​ಸಭೆ

ರಾಮ​ಕೃಷ್ಣ ಹೆಗಡೆ-1983 ಜ.10-1984 ಡಿ.29-ಜನತಾ ಪಕ್ಷ 7ನೇ ವಿಧಾ​ನ​ಸಭೆ

ಎಚ್‌.ಡಿ.​ದೇ​ವೇ​ಗೌಡ-1994 ಡಿ.11-1996 ಮೇ 31-ಜನತಾ ದಳ-10ನೇ ವಿಧಾ​ನ​ಸಭೆ

ಎಚ್‌.ಡಿ.​ಕು​ಮಾ​ರ​ಸ್ವಾಮಿ-2006 ಫೆ.3-2007 ಅ.8-ಜನತಾ ದಳ​(​ಜಾ)-12ನೇ ವಿಧಾ​ನ​ಸಭೆ

ಎಚ್‌.ಡಿ.​ಕು​ಮಾ​ರ​ಸ್ವಾಮಿ-2018 ಮೇ 23ರಿಂದ.......- ಜನತಾ ದಳ(ಜಾ)-15ನೇ ವಿಧಾ​ನ​ಸಭೆ

- ಎಂ ಅಫ್ರೋಜ್ ಖಾನ್ 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬಡವನಿರಬಹುದು ಆದರೆ ಭಿಕಾರಿ ಅಲ್ಲ: ಸ್ವಾಭಿಮಾನಿ ವೃದ್ಧನ ವೀಡಿಯೋ ಭಾರಿ ವೈರಲ್
ಅಪ್ಪನ ಅಂತ್ಯಕ್ರಿಯೆ ಮುಗಿಸಿ ಮನೆಗೆ ಬರುತ್ತಿದ್ದ ಮಗ, ಅರ್ಧದಾರಿ ಮಧ್ಯದಲ್ಲೇ ದುರ್ಮರಣ!