
ಬೆಂಗಳೂರು(ಅ. 03): ಯಕ್ಷಗಾನದ ಮೇರು ಕಲಾವಿದ ಚಿಟ್ಟಾಣಿ ರಾಮಚಂದ್ರ ಹೆಗಡೆ ಅವರು ತೀವ್ರ ಅಸ್ವಸ್ಥಗೊಂಡಿದ್ದಾರೆ. ತೀರಾ ಇತ್ತೀಚಿನವರೆಗೂ ಯಕ್ಷಗಾನದಲ್ಲಿ ಸಕ್ರಿಯವಾಗಿದ್ದ 84 ವರ್ಷದ ರಾಮಚಂದ್ರ ಹೆಗಡೆ ಕೆಲವಾರು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಉಡುಪಿಯ ಆಸ್ಪತ್ರೆಯಲ್ಲಿ ಸದ್ಯ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
1933ರ ಜನವರಿ 1ರಂದು ಜನಿಸಿದ ಚಿಟ್ಟಾಣಿ ರಾಮಚಂದ್ರ ಹೆಗಡೆಯವರು ಉತ್ತರಕನ್ನಡ ಜಿಲ್ಲೆಯ ಹೊನ್ನಾವರದವರು. ಏಳು ವರ್ಷ ವಯಸ್ಸಿದ್ದಾಗಲೇ ಯಕ್ಷಗಾನಕ್ಕೆ ಧುಮುಕಿದ ಹೆಗಡೆಯವರು, 14ನೇ ವಯಸ್ಸಿಗೆ ಪ್ರಮುಖ ಪಾತ್ರಗಳನ್ನು ಮಾಡಲು ಆರಂಭಿಸಿದ್ದರು. 84 ವರ್ಷದ ಇಳಿ ವಯಸ್ಸಿನಲ್ಲೂ ಅವರು ಯಕ್ಷಗಾನದ ಕುಣಿತ ಹಾಕುವುದನ್ನು ತಪ್ಪಿಸಿಲ್ಲ.
ಚಿಟ್ಟಾಣಿ ರಾಮಚಂದ್ರ ಹೆಗಡೆಯವರದ್ದು ಬಡಗು ತಿಟ್ಟು ಯಕ್ಷಗಾನ ಶೈಲಿ. ಆದರೆ, ರಾಮಚಂದ್ರ ಹೆಗಡೆಯವರ ಕುಣಿತ ಎಷ್ಟು ಜನಪ್ರಿಯತೆ ಪಡೆದಿದೆ ಎಂದರೆ ಅವರ ಕುಣಿತವನ್ನು ಚಿಟ್ಟಾಣಿ ಘರಾನಾ ಎಂದೇ ಕರೆಯಲಾಗುತ್ತಿದೆ. ಚಿಟ್ಟಾಣಿ ಮಾಡಿರುವ 'ಕೌರವ', ದುಷ್ಟಬುದ್ಧಿ', 'ಭಸ್ಮಾಸುರ', 'ಕೀಚಕ', 'ಕರ್ಣ', 'ರುದ್ರಕೋಪ', 'ಕಂಸ' ಮೊದಲಾದ ಪಾತ್ರಗಳು ಯಕ್ಷಗಾನ ವಲಯದಲ್ಲಿ ಬಹಳ ಜನಪ್ರಿಯವಾಗಿವೆ.
ಚಿಟ್ಟಾಣಿ ರಾಮಚಂದ್ರ ಹೆಗಡೆಯವರಿಗೆ ಪದ್ಮಶ್ರೀ ಪ್ರಶಸ್ತಿ ಸಿಕ್ಕಿದೆ. ವಿಶೇಷವೆಂದರೆ, ಈ ಪ್ರಶಸ್ತಿ ಪಡೆದ ಮೊದಲ ಯಕ್ಷಗಾನ ಕಲಾವಿದರು ಅವರಾಗಿದ್ದಾರೆ.
ಪ್ರಶಸ್ತಿ-ಪುರಸ್ಕಾರಗಳು:
2009 - ಶಿವರಾಮ್ ಕಾರಂತ್ ಪ್ರಶಸ್ತಿ
2012 - ಪದ್ಮಶ್ರೀ
2004 - ಜನಪದಶ್ರೀ
2013 - ಕೆರೆಮನೆ ಶಿವರಾಮ ಹೆಗಡೆ ಪ್ರಶಸ್ತಿ
1991 - ರಾಜ್ಯೋತ್ಸವ ಪ್ರಶಸ್ತಿ
2009 - ಕಾರ್ಕಿ ವೆಂಕಟರಮಣ ಶಾಸ್ತ್ರಿ ಪ್ರಶಸ್ತಿ
2012 - ಆಳ್ವಾಸ್ ನುಡಿಸಿರಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.