ಈಶಾನ್ಯ ಪ್ರದೇಶದಲ್ಲಿ ಮೂಲಭೂತ ಸೌಕರ್ಯ ಯೋಜನೆಗೆ ಭಾರತ-ಜಪಾನ್ ಹೂಡಿಕೆ ಮಾಡಲು ಮುಂದಾಗಿರುವುದಕ್ಕೆ ಚೀನಾ ಅಸಮಾಧಾನ ವ್ಯಕ್ತಪಡಿಸಿದೆ.
ನವದೆಹಲಿ (ಸೆ.15): ಈಶಾನ್ಯ ಪ್ರದೇಶದಲ್ಲಿ ಮೂಲಭೂತ ಸೌಕರ್ಯ ಯೋಜನೆಗೆ ಭಾರತ-ಜಪಾನ್ ಹೂಡಿಕೆ ಮಾಡಲು ಮುಂದಾಗಿರುವುದಕ್ಕೆ ಚೀನಾ ಅಸಮಾಧಾನ ವ್ಯಕ್ತಪಡಿಸಿದೆ.
ಭಾರತ-ಚೀನಾ ಗಡಿ ಪ್ರದೇಶವಾದ ಅರುಣಾಚಲ ಪ್ರದೇಶದ ಕೆಲ ಗಡಿಭಾಗಗಳು ವಿವಾದಿತ ಪ್ರದೇಶವಾಗಿದೆ. ಅದನ್ನು ಸಂಪೂರ್ಣವಾಗಿ ವಿಂಗಡಿಸಲಾಗಿಲ್ಲ. ಎರಡೂ ಕಡೆಗಳಲ್ಲಿ ಒಪ್ಪಿತವಾಗುವಂತೆ ಸಮಸ್ಯೆಯನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಲು ನಾವು ಪ್ರಯತ್ನಿಸುತ್ತಿದ್ದೇವೆ. ಇದನ್ನೂ ಎಲ್ಲರೂ ಗೌರವಿಸಬೇಕು. ವಿವಾದ ಬಗೆಹರಿಸಿಕೊಳ್ಳುವ ನಮ್ಮ ಪ್ರಯತ್ನದಲ್ಲಿ ಮೂರನೆಯವರು ಮೂಗು ತೂರಿಸಬಾರದು ಎಂದು ಚೀನಾ ಹೇಳಿದೆ.
ಈಶಾನ್ಯ ರಾಜ್ಯಗಳಿಗೆ ರಸ್ತೆ ಸಂಪರ್ಕ, ವಿದ್ಯುತ್ ಸಂಪರ್ಕ ಸೇರಿದಂತೆ ಇನ್ನಿತರ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಭಾರತ-ಜಪಾನ್ ಸಹಭಾಗಿತ್ವದಲ್ಲಿ ಹೂಡಿಕೆ ಮಾಡಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹಾಗೂ ಜಪಾನ್ ಪ್ರಧಾನಿ ಶಿಂಜೋ ಅಬೆ ಘೋಷಿಸಿದ್ದರು. ಈ ಹಿನ್ನಲೆಯಲ್ಲಿ ಭಾರತ-ಚೀನಾ ಗಡಿಭಾಗಗಳಲ್ಲಿ ಎಚ್ಚರಿಕೆಯಿಂದಿರಬೇಕು ಎಂದು ಚೀನಾ ಹೇಳಿದೆ.