
ಬೆಂಗಳೂರು: ರಾಜ್ಯದಲ್ಲಿ ತಲೆದೋರಿರುವ ಬರ ಪರಿಸ್ಥಿತಿ ಅಧ್ಯಯನ ಮಾಡಲು ಬಂದಿರುವ ಕೇಂದ್ರ ತಂಡ ಮೊದಲ ದಿನವಾದ ಗುರುವಾರ ಮೂರು ತಂಡಗಳಲ್ಲಿ ಚಿಕ್ಕಬಳ್ಳಾಪುರ, ತುಮಕೂರು, ರಾಮನಗರ, ಚಾಮರಾಜನಗರ ಹಾಗೂ ಚಿತ್ರದುರ್ಗದಲ್ಲಿ ಬೆಳೆ ಹಾನಿ ಸಮೀಕ್ಷೆ ನಡೆಸಿತು.
ಚಿಕ್ಕಬಳ್ಳಾಪುರ ಜಿಲ್ಲೆಗೆ ಮಧ್ಯಾಹ್ನ 3 ಗಂಟೆಗೆ ಬರಬೇಕಿದ್ದ ಇಂಧನ ಇಲಾಖೆಯ ಕಮಲ್ ಚೌಹಾಣ್, ನೀತಿ ಆಯೋಗದ ಸಂಶೋಧನಾಧಿಕಾರಿ ಗಣೇಶರಾಮ್ ಹಾಗೂ ಭಾರತೀಯ ಆಹಾರ ನಿಗಮದ ಎಲ್. ಚಾತ್ರೂನಾಯ್ಕ ನೇತೃತ್ವದ ಕೇಂದ್ರ ತಂಡದ ಅಧಿಕಾರಿಗಳು ಸಂಜೆ 5.30ಕ್ಕೆ ಆಗಮಿಸಿದರು. ನಂತರ ಆದಿಗಾನಹಳ್ಳಿಯಲ್ಲಿ 10 ನಿಮಿಷ ಮಾಹಿತಿ ಪಡೆದರೇ ಹೊರತು ಬೆಳೆ ಹಾನಿ ಯಾದ ಪ್ರದೇಶ ವೀಕ್ಷಿಸಲಿಲ್ಲ.
ನಂತರ ಗುಂಡ್ಲಪಲ್ಲಿಗೆ ಬರುವಷ್ಟರಲ್ಲಿ ಕತ್ತಲು ಆವರಿಸಿದ್ದರಿಂದ ಯಲ್ಲಂಪಲ್ಲಿ ಕೆರೆ ಏರಿ ಮೇಲೆ ನಿಂತು ಕಾರುಗಳ ಹೆಡ್'ಲೈಟ್ ಬೆಳಕಿನಲ್ಲಿ ಒಣಗಿದ ಕೆರೆ ಹಾಗೂ ಬಾಡಿರುವ ಜೋಳದ ಬೆಳೆಯನ್ನು ಎರಡನೇ ನಿಮಿಷದಲ್ಲಿ ವೀಕ್ಷಿಸಿ ನಿರ್ಗಮಿಸಿದರು. ಗುಡಿಬಂಡೆ ತಾಲೂಕಿನ ಸೋಮೇಶ್ವರ ಗ್ರಾಮದಲ್ಲಿ ಕೇವಲ ಎರಡು ನಿಮಿಷವಷ್ಟೇ ಬರ ಅಧ್ಯಯನ ನಡೆಸಿ ಮುಂದೆ ಸಾಗಿದರು.
ವಿದರ್ಭ ಮಾದರಿ ಪ್ಯಾಕೇಜ್ ನೀಡಿ:
ಚಿತ್ರದುರ್ಗ ಜಿಲ್ಲೆಯ ಹಿರಿಯೂರು, ಚಳ್ಳಕೆರೆ ಮತ್ತು ಮೊಳಕಾಲ್ಮುರು ತಾಲೂಕುಗಳಲ್ಲಿ ಕೇಂದ್ರ ಕೃಷಿ ಇಲಾಖೆ ಜಂಟಿ ಕಾರ್ಯದರ್ಶಿ ಹಾಗೂ ಕೇಂದ್ರ ತಂಡದ ಮುಖ್ಯಸ್ಥೆ ನೀರಜಾ ಅದಿದಾಮ್, ಪಶು ಸಂಗೋಪನಾ ಇಲಾಖೆ ಸಹಾಯಕ ಆಯುಕ್ತ ಡಾ.ಅಶೋಕ ಗುಪ್ತ, ಹಣಕಾಸು ಜಂಟಿ ನಿರ್ದೇಶಕ ಎಸ್.ಸಿ. ಮೀನಾ, ಕುಡಿಯುವ ನೀರಿನ ಕನ್ಸಲ್ಟೆಂಟ್ ಜಿ.ಆರ್. ಜಾರಗರ್ ಬರ ಅಧ್ಯಯನ ನಡೆಸಿದರು. ತಂಡದ ಜತೆಗಿದ್ದ ಸಚಿವ ಆಂಜನೇಯ ಜಿಲ್ಲೆಗೆ ವಿದರ್ಭ ಮಾದರಿಯಲ್ಲಿ ವಿಶೇಷ ಪ್ಯಾಕೇಜ್ ನೀಡುವಂತೆ ಮನವಿ ಮಾಡಿದರು.
ಗಡಿ ಜಿಲ್ಲೆಗೆ ಭೇಟಿ: ಈ ನಡುವೆ, ರಾಮನಗರದಲ್ಲಿ ಬರವೀಕ್ಷಣೆ ನಡೆಸಿದ ಬಳಿಕ ಗಡಿ ಜಿಲ್ಲೆ ಚಾಮರಾಜನಗರಕ್ಕೆ ಭೇಟಿ ನೀಡಿದ ತಂಡ ಮಳೆಯ ಕೊರೆತೆಯಿಂದ ಒಣಗಿ ನಿಂತಿರುವ ಬೆಳೆ ವೀಕ್ಷಿಸಿದರು. ನಂತರ ಕೊಳ್ಳೇಗಾಲ ತಾಲೂಕಿನ ಕೆಲ ಪ್ರದೇಶದಲ್ಲಿ ಒಣಗಿ ನಿಂತಿರುವ ಬತ್ತದ ಗದ್ದೆಗೆ ಭೇಟಿ ನೀಡಿ ರೈತರೊಂದಿಗೆ ಚರ್ಚಿಸಿದರು.
(ಕನ್ನಡಪ್ರಭ ವಾರ್ತೆ)
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.