
ಮಡಿಕೇರಿ[ಸೆ.13] ನಿಮ್ಮಂಥವರಿಂದ ಪಕ್ಷ ಉದ್ದಾರ ಆಗಲ್ಲ.. ನಿಮ್ಮನ್ನ ಆಯ್ಕೆ ಮಾಡಿ ಕಳಿಸಿದ್ದೇ ನಮ್ಮ ದುರಂತ, ಜಿಲ್ಲೆಯ ದುರಂತ. ತಪ್ಪು ಮಾಹಿತಿ ನೀಡಿ ಜನರನ್ನ ಒಕ್ಕಲೆಬ್ಬಿಸಲು ಯತ್ನಿಸುತ್ತಿದ್ದೀರಾ..? ಬೆಂದ ಗಾಯಕ್ಕೆ ಪುನಃ ಉಪ್ಪಿನ ನೀರು ಹುಯ್ಯುತ್ತಿದ್ದೀರಾ..? ಪಕ್ಷದಲ್ಲಿ ನನ್ನ ವಿರುದ್ಧ ಏನ್ ಕ್ರಮ ತೆಗೆದುಕೊಳ್ತಿರೋ ತಗೊಳ್ಳಿ. ನಾನ್ ಫೇಸ್ ಮಾಡ್ತೀನಿ..
ಅಬ್ಬಬ್ಬಾ..!! ಇದೇನೋ ರಾಜಕೀಯ ಪ್ರಚಾರನೋ.. ಅಥವಾ ರಾಜಕೀಯ ಸಂಬಂಧಿತ ಗಲಾಟೆಯೋ ಅನ್ಕೋಬೇಡಿ.. ಇದು ಪ್ರಾಕೃತಿಕ ವಿಕೋಪಕ್ಕೆ ನಲುಗಿದ ಕೊಡಗು ಜಿಲ್ಲೆಯ ಪ್ರದೇಶಗಳಲ್ಲಿ ಕೇಂದ್ರ ಅಧ್ಯಯನ ತಂಡ ಪರಿಶೀಲನೆ ನಡೆಸೋ ವೇಳೆ ಕೇಳಿಬಂದ ಮಾತಿನ ಬಾಂಬ್.. ಹೀಗೆ ಸಂಸದ ಪ್ರತಾಪ್ ಸಿಂಹರನ್ನ ಮಾತಾನಾಡಲು ಬಿಡದಂತೆ ಮೌತ್ ಬಾಂಬ್ ಸಿಡಿಸಿದ್ದು ಬೇರ್ಯಾರು ಅಲ್ಲ. ಸ್ವತಃ ಕೊಡಗು ಜಿಲ್ಲೆ ಬಿಜೆಪಿಯ ಹಿರಿಯ ಮುಖಂಡ ಎಂ.ಬಿ ದೇವಯ್ಯ.
ಮಡಿಕೇರಿ ಸಮೀಪದ ಹೆಬ್ಬೆಟ್ಟಗೇರಿಯಲ್ಲಿ ಕೇಂದ್ರ ತಂಡ ಪರಿಶೀಲನೆ ನಡೆಸುವಾಗ ಈ ರೀತಿಯ ಮಾತಿನ ಬಾಣಗಳು ಪ್ರತಾಪ್ ಸಿಂಹರನ್ನ ತಿವಿಯುತ್ತಿದ್ದವು. ಕೇಂದ್ರ ತಂಡಕ್ಕೆ ಸಂಸದರು ತಪ್ಪು ಮಾಹಿತಿ ಕೊಡುತ್ತಿದ್ದಾರೆ, ಈ ಭಾಗದಲ್ಲಿ ಭೂ ಪರಿವರ್ತನೆ ಆಗಿದೆ, ಹೈ ಟೆನ್ಷನ್ ವೈರ್ ಬಂದಿದೆ ಅದು ಇದು ಅಂತ್ಹೇಳಿ ಸೆಂಟ್ರಲ್ ಟೀಂನ ದಿಕ್ಕು ತಪ್ಪಿಸುತ್ತಿದ್ದಾರೆ. ನಮ್ಮನ್ನ ಒಕ್ಕಲೆಬ್ಬಿಸುವ ಹುನ್ನಾರ ಅಡಗಿದೆ ಅಂತಾ ಆಕ್ರೋಶ ವ್ಯಕ್ತಪಡಿಸಿದ್ರು. ಇನ್ನೂ ಈ ಮಧ್ಯೆ ಕೇಂದ್ರ ತಂಡ ಇಂದು ಹೆಬ್ಬೆಟ್ಟಗೇರಿ, ದೇವಸ್ತೂರು, ತಂತಿಪಾಲ, ಕಾಲೂರು ಸೇರಿದಂತೆ ಅನೇಕ ಗ್ರಾಮಗಳಿಗೆ ತೆರಳಿ ಪರಿಸ್ಥಿತಿ ಅವಲೋಕಿಸಿತು.
ಮಹಾಮಳೆಯಿಂದ ತತ್ತರಿಸಿರುವ ಕೊಡಗು ಜಿಲ್ಲೆಯ ವಿವಿಧ ಪ್ರದೇಶಗಳಿಗೆ ನಿನ್ನೆಯಿಂದಲೂ ಕೇಂದ್ರ ಅಧ್ಯಯನ ತಂಡ ಭೇಟಿ ನೀಡಿತು. ಮನೆಹಾನಿ, ಬೆಳೆ ಹಾನಿ, ಕೊಚ್ಚಿಕೊಂಡು ಹೋಗಿರೋ ರಸ್ತೆಗಳನ್ನ ಕಂಡು ಬೆರಗಾಯಿತು. ಇವತ್ತು ಕೊಡಗಿನಿಂದ ಹಿಂದಿರುಗಿರೋ ಸೆಂಟ್ರಲ್ ಟೀಂ, ಕೇಂದ್ರ ಸರ್ಕಾರಕ್ಕೆ ಸದ್ಯದಲ್ಲೇ ವರದಿಯನ್ನ ಸಲ್ಲಿಸಲಿದೆ. ಕೊಡಗು ಜಿಲ್ಲೆಯಲ್ಲಿ ಒಂದು ಸಾವಿರ ಕೋಟಿಗೂ ಅಧಿಕ ನಷ್ಟ ಸಂಭವಿಸಿದ್ದು, ಕೇಂದ್ರದ ಸಮೀಕ್ಷೆ ಕೊನೆಗೂ ಅಂತಿಮವಾದಂತಾಗಿದೆ. ಇನ್ನೇನಿದ್ರೂ ಬದುಕನ್ನು ಕಳೆದುಕೊಂಡು ಕುಸಿದು ಹೋಗಿರೋ ಜನರ ಜೀವನವನ್ನ ಮತ್ತೆ ಕಟ್ಟಲು ಕೇಂದ್ರದಿಂದ ಎಷ್ಟು ಅನುದಾನ ಬರುತ್ತೆ ಅನ್ನುವುದರ ಮೇಲೆ ಎಲ್ಲರ ದೃಷ್ಟಿ ನೆಟ್ಟಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.