ನವದೆಹಲಿ(ಸೆ.30): ಕಾವೇರಿ ನೀರು ಹಂಚಿಕೆ ವಿವಾದ ಕರ್ನಾಟಕ ಸರ್ಕಾರಕ್ಕೆ ಮತ್ತೊಂದು ಸಂಕಷ್ಟವನ್ನು ತಂದಿಟ್ಟಿದೆ. ನಿನ್ನೆಯ ಕೇಂದ್ರದ ಮಧ್ಯಸ್ಥಿಕೆ ಸಭೆ ಮುರಿದುಬಿದ್ದಿದೆ. ತಮಿಳುನಾಡಿನ ವಾದಕ್ಕೆ ಓಗೊಟ್ಟಿದ್ದರಿಂದ ಸಂಧಾನ ವಿಫಲವಾಗಿದೆ. ದುರಾದೃಷ್ಟ ಅಂತಂದ್ರೆ ಮಧ್ಯಸ್ಥಿಕೆ ಸಭೆಯಲ್ಲಿ ಕರ್ನಾಟಕ ವಿರುದ್ಧ ತಮಿಳ್ನಾಡು ಅಧಿಕಾರಿಗಳು ಆರೋಪಗಳ ಸುರಿಮಳೆಗೈದಿದೆ. ಅಲ್ದೆ, ನೆರೆಯ ರಾಜ್ಯದ ವಾದವನ್ನೆಲ್ಲಾ ಒಪ್ಪಿದ ಕೇಂದ್ರ ಸಚಿವೆ ಉಮಾಭಾರತಿ ಮರುಮಾತಾಡದೆ ಸಂಧಾನ ವಿಫಲ ಅಂತ ಘೋಷಿಸಿದೆ.
ಕಾವೇರಿ ವಿವಾದ ಸಂಬಂಧ ಕೇಂದ್ರದ ಮಧ್ಯಸ್ಥಿಕೆಯಲ್ಲಿ ನಡೆದ ಸಂಧಾನ ಸಭೆ ಸಫಲವಾಗಲೇ ಇಲ್ಲ. ಸುಪ್ರೀಂಕೋರ್ಟ್ ಸೂಚನೆ ಮೇರೆಗೆ ಡೆಲ್ಲೀಲಿ ಕೇಂದ್ರ ಜಲಸಂಪನ್ಮೂಲ ಸಚಿವೆ ಉಮಾಭಾರತಿ ನೇತೃತ್ವದಲ್ಲಿ ಕರ್ನಾಟಕ ಮತ್ತು ತಮಿಳುನಾಡು ಸರ್ಕಾರದ ಅಧಿಕಾರಿಗಳ ಸಭೆ ನಡೆಸಿದರು. ಸುದೀರ್ಘ ಚರ್ಚೆಯ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉಭಯ ರಾಜ್ಯಗಳಿಗೂ ಕೇಂದ್ರದ ತಂಡ ಕಳುಹಿಸಿ ವಾಸ್ತವಾಂಶ ತಿಳಿದುಕೊಳ್ಳಬೇಕೆಂದು ಮನವಿ ಮಾಡಿದರು. ಆದರೆ ತಜ್ಞರ ತಂಡ ಕಳುಹಿಸುವ ಪ್ರಸ್ತಾಪಕ್ಕೆ ತಮಿಳುನಾಡು ತೀವ್ರವಾಗಿ ಆಕ್ಷೇಪ ವ್ಯಕ್ತಪಡಿಸಿದ ಕಾರಣ ಸಭೆ ವಿಫಲವಾಗಿದೆ. ಸಭೆಯ ಬಳಿಕ ಮಾತಾಡಿದ ಸಿದ್ರಾಮಯ್ಯ. ಅಧ್ಯಯನ ತಂಡ ಕಳುಹಿಸುವ ನಮ್ಮ ಮನವಿ ಸಹಕಾರ ಸಿಗಲಿಲ್ಲ. ನೀರು ಹರಿಸುವ ಪ್ರಶ್ನೆಯೇ ಇಲ್ಲ ಅಂತ ಹೇಳಿದ್ದಾರೆ.
ಅಸಲಿಗೆ ಅಧ್ಯಯನ ತಂಡ ಕಳುಹಿಸುವುದು ಬೇಡ ಎನ್ನುವ ತಮಿಳ್ನಾಡು ವಾದವನ್ನು ಸಚಿವೆ ಉಮಾಭಾರತಿ ನಿರಾಕರಿಸಬಹುದಿತ್ತು. ಆದ್ರೆ, ಕೇಂದ್ರ ಜಲಸಂಪನ್ಮೂಲ ಸಚಿವೆ ಹಾಗ್ ಮಾಡದೆ ಸಂಧಾನ ವಿಫಲವಾಗಿದೆ ಅಂತ ಘೋಷಿಸಿಬಿಟ್ರು. ಈ ಮಧ್ಯೆ ಕರ್ನಾಟಕ ವಿರುದ್ಧ ತಮಿಳುನಾಡು ದೂರುಗಳ ಸುರಿಮಳೆಗೈದಿದೆ.
ಕರ್ನಾಟಕದ ವಿರುದ್ಧ ದೂರುಗಳು!
- ಕಾವೇರಿ ವಿವಾದದ ವೇಳೆ ತಮಿಳರ ಮೇಲೆ ದೌರ್ಜನ್ಯ ನಡೆದಿದೆ
- ಕರ್ನಾಟಕದಲ್ಲಿ ವಾಸಿಸುವ ತಮಿಳರ ಮೇಲೆ ಹಿಂಸಾಚಾರ
- ಕರ್ನಾಟಕದ ಹಲವೆಡೆ ತಮಿಳರ ಆಸ್ತಿಪಾಸ್ತಿಗೆ ಬೆಂಕಿ ಹಚ್ಚಲಾಗಿದೆ
- ಹಿಂಸಾಚಾರ ನಡೆದರೂ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ
ಇಷ್ಟೆಲ್ಲಾ ದೂರುಗಳನ್ನು ಹೇಳಿದ ತಮಿಳುನಾಡು ಅಧಿಕಾರಿಗಳು, ನ್ಯಾಯಾಧೀಕರಣದ ಅಂತಿಮ ಆದೇಶದಂತೆ ಸೆಪ್ಟೆಂಬರ್ 26ರವರೆಗೆ 76.042 ಟಿಎಂಸಿ ನೀರು ಬಿಡುಗಡೆ ಮಾಡಬೇಕು ಅಂತ ಪಟ್ಟು ಹಿಡಿದರು. ಇದಕ್ಕೆಲ್ಲಾ ತಲೆಯಾಡಿಸಿದ ಮಧ್ಯಸ್ಥಿಕೆ ಸಭೆಯಲ್ಲಿದ್ದ ಕೇಂದ್ರ ಸಚಿವೆ ಯಾವುದೇ ನಿರ್ಧಾರ ತೆಗೆದುಕೊಳ್ಳದೆ ಸಮಸ್ಯೆಯನ್ನು ಮತ್ತಷ್ಟು ಜಟಿಲ ಮಾಡಿ ಮತ್ತೆ ಸುಪ್ರೀಂ ಅಂಗಳಕ್ಕೆ ಚೆಂಡನ್ನ ಎಸೆದಿದ್ದಾರೆ.