ಕೊನೆಯ ಪೂರ್ಣ ಪ್ರಮಾಣದ ಬಜೆಟ್ ಮಂಡನೆಗೆ ಸಜ್ಜಾಗುತ್ತಿರುವ ಎನ್ಡಿಎ ನೇತೃತ್ವದ ಕೇಂದ್ರ ಸರ್ಕಾರ, ಮಧ್ಯಮ ವರ್ಗದ ಮತದಾರರನ್ನು ಹಿಡಿದಿಟ್ಟುಕೊಳ್ಳಲು ಆದಾಯ ತೆರಿಗೆ ಮಿತಿ ಹೆಚ್ಚಳ ಮಾಡುವ ಕುರಿತು ಪರಿಶೀಲನೆ ಆರಂಭಿಸಿದೆ.
ನವದೆಹಲಿ(ಜ.09): ಕೊನೆಯ ಪೂರ್ಣ ಪ್ರಮಾಣದ ಬಜೆಟ್ ಮಂಡನೆಗೆ ಸಜ್ಜಾಗುತ್ತಿರುವ ಎನ್ಡಿಎ ನೇತೃತ್ವದ ಕೇಂದ್ರ ಸರ್ಕಾರ, ಮಧ್ಯಮ ವರ್ಗದ ಮತದಾರರನ್ನು ಹಿಡಿದಿಟ್ಟುಕೊಳ್ಳಲು ಆದಾಯ ತೆರಿಗೆ ಮಿತಿ ಹೆಚ್ಚಳ ಮಾಡುವ ಕುರಿತು ಪರಿಶೀಲನೆ ಆರಂಭಿಸಿದೆ. 2019ಕ್ಕೆ ಲೋಕಸಭೆ ಚುನಾವಣೆ ನಡೆಯುವ ಹಿನ್ನೆಲೆಯಲ್ಲಿ ಮುಂದಿನ ವರ್ಷ ಸರ್ಕಾರ ಲೇಖಾನುದಾನವನ್ನಷ್ಟೇ ಮಂಡಿಸಬೇಕಾಗುತ್ತದೆ.
ಹೀಗಾಗಿ ಬರುವ ಫೆ.1ರಂದು ಮಂಡನೆಯಾಗಲಿರುವ ಬಜೆಟ್, ನರೇಂದ್ರ ಮೋದಿ ಸರ್ಕಾರದ ಕೊನೆಯ ಪೂರ್ಣಪ್ರಮಾಣದ ಮುಂಗಡ ಪತ್ರವಾಗಲಿದೆ. ಆದ ಕಾರಣ, ಮಧ್ಯಮ ವರ್ಗದ ಮತದಾರರನ್ನು ಸೆಳೆಯುವ ಉದ್ದೇಶದಿಂದ ಆದಾಯ ತೆರಿಗೆ ಮಿತಿ ಹೆಚ್ಚಳ, ಆರೋಗ್ಯ ವಿಮೆಯಲ್ಲಿ ಹೆಚ್ಚುವರಿ ಸೌಲಭ್ಯ, ಆಕರ್ಷಣೆ ಕಳೆದುಕೊಂಡಿರುವ ಸ್ಥಿರ ಠೇವಣಿ ಹೂಡಿಕೆಗೆ ಪ್ರೋತ್ಸಾಹ, ಮ್ಯೂಚುವಲ್ ಫಂಡ್ಗಳಲ್ಲಿ ಮಾಡುವ ಹೊಸ ಕೊಡುಗೆಗಳನ್ನು ನೀಡುವ ನಿಟ್ಟಿನಲ್ಲಿ ಸಿದ್ಧತೆ ನಡೆಸಿದೆ.
ಜನರ ಕೈಯಲ್ಲೇ ಹೆಚ್ಚು ಹಣ ಉಳಿಸುವ ಮೂಲಕ ಅವರು ಹೆಚ್ಚು ಹೆಚ್ಚು ವೆಚ್ಚ ಹಾಗೂ ಹೂಡಿಕೆ ಮಾಡುವಂತೆ ಮಾಡುತ್ತೇವೆ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಈ ಹಿಂದೆಯೇ ಹೇಳಿದ್ದರು. ಆದರೆ ಬಜೆಟ್ನಲ್ಲಿ ಕೊಡುಗೆ ಪ್ರಕಟಿಸುವ ಸರ್ಕಾರದ ಉತ್ಸಾಹಕ್ಕೆ ಸಂಪನ್ಮೂಲದ್ದೇ ಸಮಸ್ಯೆಯಾಗಿದೆ. ಈ ವರ್ಷ ನಿರೀಕ್ಷೆಗೂ ಮೀರಿ ಕಡಿಮೆ ಪ್ರಮಾಣದಲ್ಲಿ ಕಾರ್ಪೋರೆಟ್ ತೆರಿಗೆ ಸಂಗ್ರಹವಾಗಿದೆ.
ಜಿಎಸ್ಟಿ ಬಾಬ್ತಿನ ಹಣ ಮುಂದಿನ ವರ್ಷ ಬರುವುದರಿಂದ ಸಂಪ ನ್ಮೂಲಕ್ಕಾಗಿ ಸರ್ಕಾರ ಶೋಧ ನಡೆಸಬೇಕಾಗಿದೆ. ಷೇರುಪೇಟೆ ವ್ಯವಹಾರಗಳ ಮೇಲೆ ಕ್ಯಾಪಿಟಲ್ ಗೇನ್ ಟ್ಯಾಕ್ಸ್ ಮರು ಜಾರಿ ಮಾಡಬೇಕು. ಆದರೆ ಎಲ್ಲ ರೀತಿಯ ಷೇರು ವ್ಯವಹಾರಕ್ಕೂ ಇದನ್ನು ಹೇರುವ ಬದಲು ನಿರ್ದಿಷ್ಟ ಉದಾಹರ ಣೆಗೆ 5 ಲಕ್ಷ ರು. ಮೇಲ್ಪಟ್ಟ ವ್ಯವಹಾರಕ್ಕೆ ಮಾತ್ರ ನಿಗದಿಪಡಿಸಬೇಕು ಎಂಬ ಸಲಹೆಗಳಿವೆ.