ಕಾವೇರಿ ನಿರ್ವಹಣೆಗೆ ಕೇಂದ್ರ ಪ್ರಾಧಿಕಾರ?

By Suvarna Web deskFirst Published Mar 25, 2018, 8:34 AM IST
Highlights

ಈ ಸಂಬಂಧ ಕರಡು ಸಂಪುಟ ಟಿಪ್ಪಣಿಯನ್ನು ಕೇಂದ್ರ ಜಲಸಂಪನ್ಮೂಲ ಸಚಿವಾಲಯ ಸಿದ್ಧಪಡಿಸಿದೆ. ಇದನ್ನು ಶೀಘ್ರದಲ್ಲೇ ಕೇಂದ್ರ ಸಚಿವ ಸಂಪುಟಕ್ಕೆ ರವಾನಿಸುವ ನಿರೀಕ್ಷೆಯಿದೆ.

ನವದೆಹಲಿ: ಕಾವೇರಿ ನಿರ್ವಹಣಾ ಮಂಡಳಿ ರಚನೆ ಬಿಕ್ಕಟ್ಟು ಪರಿಹರಿಸಲು ನೀರು ಬಿಡುಗಡೆ ಉಸ್ತುವಾರಿ ತಾನೇ ವಹಿಸುವ ಪ್ರಾಧಿಕಾರವೊಂದನ್ನು ರಚಿಸಲು ಕೇಂದ್ರ ಸರ್ಕಾರ ಮುಂದಾಗಿದೆ ಎಂದು ತಿಳಿದು ಬಂದಿದೆ. ಕರ್ನಾಟಕ ಮತ್ತು ತಮಿಳುನಾಡಿನ ನಡುವೆ ಹೊಸ ಬಿಕ್ಕಟ್ಟಿಗೆ ಕಾರಣವಾಗುತ್ತಿರುವ ಕಾವೇರಿ ನಿರ್ವಹಣಾ ಮಂಡಳಿ ರಚನೆಗೆ ಪರಿಹಾರ ಕಂಡುಕೊಳ್ಳುವ ಯತ್ನವನ್ನು ಕೇಂದ್ರ ಸರ್ಕಾರ ಆರಂಭಿಸಿದೆ. ಕೇಂದ್ರ ಸರ್ಕಾರವೇ ನಿರ್ವಹಿಸುವ ಪ್ರಾಧಿಕಾರವೊಂದನ್ನು ಸ್ಥಾಪಿಸಿ ಕಾವೇರಿ ನೀರು ಬಿಡುಗಡೆಯ ಮೇಲುಸ್ತುವಾರಿ ವಹಿಸಲು ಕೇಂದ್ರ ಸರ್ಕಾರ ಮುಂದಾಗಿದೆ.

ಈ ಸಂಬಂಧ ಕರಡು ಸಂಪುಟ ಟಿಪ್ಪಣಿಯನ್ನು ಕೇಂದ್ರ ಜಲಸಂಪನ್ಮೂಲ ಸಚಿವಾಲಯ ಸಿದ್ಧಪಡಿಸಿದೆ. ಇದನ್ನು ಶೀಘ್ರದಲ್ಲೇ ಕೇಂದ್ರ ಸಚಿವ ಸಂಪುಟಕ್ಕೆ ರವಾನಿಸುವ ನಿರೀಕ್ಷೆಯಿದೆ. ಆದರೆ ಇದಕ್ಕೆ ಕಾವೇರಿ ನಿರ್ವಹಣಾ ಮಂಡಳಿ ಎಂದೇನೂ ಟಿಪ್ಪಣಿಯಲ್ಲಿ ಹೆಸರಿಸಲಾಗಿಲ್ಲ. ಕೇಂದ್ರ ಸರ್ಕಾರಕ್ಕೆ ಕಾವೇರಿ ನೀರು ಬಿಡುಗಡೆ ನೋಡಿಕೊಳ್ಳಲು ಒಂದು ಪ್ರಾಧಿಕಾರ ರಚಿಸದೇ ಬೇರೆ ವಿಧಿಯಿಲ್ಲ ಎಂದು ಸರ್ಕಾರದ ಮೂಲಗಳು ಸ್ಪಷ್ಟಪಡಿಸಿವೆ ಎಂದು ‘ಹಿಂದುಸ್ತಾನ್ ಟೈಮ್ಸ್’ ಪತ್ರಿಕೆ ಶನಿವಾರ ವರದಿ ಮಾಡಿದೆ.

ಆದರೆ ಇದು ಯಾವಾಗ ಸ್ಥಾಪನೆಯಾಗಲಿದೆ ಎಂಬ ಬಗ್ಗೆ ಈಗಲೇ ಹೇಳಲಾಗದು. ಮಾರ್ಚ್ 26ರೊಳಗೆ ಕಾವೇರಿ ನದಿ ನಿರ್ವಹಣೆಗೆ ‘ಸ್ಕೀಮ್’ ರಚನೆಯಾಗಬೇಕು ಎಂಬ ಸುಪ್ರೀಂ ಕೋರ್ಟ್‌ನ ಗಡುವಿನೊಳಗೆ ರಚನೆ ಆಗದೇ ಹೋಗಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ.

click me!