ಕಾವೇರಿ ವಿವಾದ: ಆರ್‌ಎಸ್‌ಎಸ್‌ ಮೇಲಿನ ಆರೋಪ ನಿರಾಧಾರ

By Internet DeskFirst Published Sep 16, 2016, 4:07 PM IST
Highlights

ಚಿಕ್ಕಮಗಳೂರು (ಸೆ.16): ಕಾವೇರಿ ಗಲಾಟೆಯಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕೈವಾಡವಿದೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್‌ ಅಪವಾದ ಹೊರಿಸಿರುವುದು ದುರುದ್ದೇಶಪೂರಿತ ಹಾಗೂ ಬೇಜವಾಬ್ದಾರಿ ಪರಮಾವಧಿ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ, ಶಾಸಕ ಸಿ.ಟಿ. ರವಿ ಆರೋಪಿಸಿದ್ದಾರೆ.

ಕಾಂಗ್ರೆಸ್‌ ಸರ್ಕಾರ ಹಾಗೂ ಗೃಹ ಸಚಿವರು ಗಲಭೆ ನಿಯಂತ್ರಿಸಲು ವಿಫಲರಾಗಿದ್ದಾರೆ. ಗಲಭೆಗೆ 2 ದಿನ ಮೊದಲೇ ಕೆಲವು ರೌಡಿ ಶೀಟರ್‌ಗಳನ್ನು ಬಿಡುಗಡೆ ಮಾಡಿದ್ದಾರೆ ಎಂಬ ಅನುಮಾನವನ್ನು ರಾಷ್ಟ್ರೀಯ ಸುದ್ದಿವಾಹಿನಿಯೊಂದು ಬಿತ್ತರಿಸಿದೆ. ಇದರಿಂದ ತನ್ನ ವೈಫಲ್ಯವನ್ನು ಮುಚ್ಚಿಹಾಕಿಕೊಳ್ಳಲು ತನ್ನ ತಲೆದಂಡವಾಗುವುದನ್ನು ತಪ್ಪಿಸಿಕೊಳ್ಳಲು ಹಾಗೂ ವಿಷಯಾಂತರ ಮಾಡಲು ಈ ರೀತಿ ಹೇಳಿಕೆ ನೀಡಿದ್ದಾರೆ. ಇದನ್ನು ಬಿಜೆಪಿ ತೀವ್ರವಾಗಿ ಖಂಡಿಸುತ್ತದೆ ಎಂದು ತಿಳಿಸಿದ್ದಾರೆ.

Latest Videos

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತಲೆದಂಡವಾಗಲೆಂದು ಈ ಗಲಭೆಯನ್ನು ಪರಮೇಶ್ವರ್‌ ಸೃಷ್ಟಿಸಿರುವ ಸಾಧ್ಯತೆಯಿದೆ. ಈ ಹಿಂದೆ ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಲು ಹಾಗೂ ಕೊರಟಗೆರೆ ವಿಧಾನಸಭಾ ಕ್ಷೇತ್ರದಲ್ಲಿ ತನ್ನನ್ನು ಸೋಲಿಸಿದ ಸೇಡನ್ನು ತೀರಿಸಿಕೊಳ್ಳಲು ಸರ್ವ ಪ್ರಯತ್ನ ಮಾಡಿ ವಿಫಲರಾದ ಪರಮೇಶ್ವರ್‌ ಈ ಸಂಚು ಮಾಡಿರುವ ಸಾಧ್ಯತೆಯಿದೆ. ಸತ್ಯಾಸತ್ಯತೆ ತಿಳಿಯಲು ನ್ಯಾಯಾಲಯದ ಮಾರ್ಗದರ್ಶನದಲ್ಲಿ ತನಿಖೆ ನಡೆಸಿದರೆ ಸತ್ಯ ಹೊರಬರುತ್ತದೆ ಎಂದಿದ್ದಾರೆ.

ರಾಷ್ಟ್ರೀಯ ಸ್ವಯಂ ಸೇವಕ ಸಂಘ, ದೇಶ ಭಕ್ತ ಸಂಘಟನೆ. 86 ವರ್ಷಗಳಿಂದ ಲಕ್ಷಾಂತರ ಸ್ವಯಂ ಸೇವಕರಿಗೆ ದೇಶಭಕ್ತಿಯ ಪ್ರೇರಣೆ ನೀಡಿ ಆಪತ್ಕಾಲದಲ್ಲಿ ದೇಶದ ನೆರವಿಗೆ ಬರುವುದರ ಜೊತೆಗೆ ನೂರಾರು ಶೈಕ್ಷಣಿಕ, ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ದೇಶಭಕ್ತ ಸಂಘಟನೆ ಮೇಲೆ ಅಪವಾದ ಹೊರಿಸಿದ್ದಾರೆ.

ದೇಶಭಕ್ತಿಯನ್ನೇ ಉಸಿರಾಗಿಸಿಕೊಂಡು ದೇಶಕ್ಕಾಗಿ ತಮ್ಮ ಬದುಕನ್ನೇ ಸಮರ್ಪಿಸಿಕೊಂಡು ಕೆಲಸ ಮಾಡುತ್ತಿರುವ ಸಂಘಟನೆಯ ಮೇಲೆ ಅಪವಾದ ಹೊರಿಸಿರುವುದು ಡಾ. ಪರಮೇಶ್ವರ್‌ ಅವರ ಕೀಳು ರಾಜಕೀಯ ತೋರಿಸುತ್ತದೆ. ಎಸ್‌.ಎಂ. ಕೃಷ್ಣ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಗೃಹಸಚಿವರಾಗಿದ್ದರು. ಆಗ ರಾಜ್ಯಾದ್ಯಂತ ಚಚ್‌ರ್‍ಗಳ ಮೇಲೆ ಬಾಂಬ್‌ ಸ್ಫೋಟಗಳು ನಡೆದಿದ್ದವು. ಆಗ ಪೂರ್ವಾಗ್ರಹ ಪೀಡಿತರಾಗಿ ಮಲ್ಲಿಕಾರ್ಜುನ ಖರ್ಗೆ ಇಂಥÜಹದೇ ಹೇಳಿಕೆ ನೀಡಿದ್ದರು. ಆದರೆ, ಅನಂತರ ಆಕಸ್ಮಿಕವಾಗಿ ಮಾರುತಿ ವ್ಯಾನ್‌ನಲ್ಲಿ ಬಾಂಬ್‌ ಸ್ಫೋಟಿಸಿ ಭಯೋತ್ಪಾದಕ ಸಂಘಟನೆ ದೀನ್‌ದಾರ್‌ ಅಂಜುಮನ್‌ ಸಿದ್ದಕಿಯ ಕೈವಾಡವಿರುವುದು ಬಯಲಾಯಿತು. ಸುಳ್ಳು ಆರೋಪ ಹೊರಿಸಿದ ಮಲ್ಲಿಕಾರ್ಜುನ ಖರ್ಗೆ ಮಾಧ್ಯಮದವರಿಗೆ ಉತ್ತರಿಸಲಾಗದೇ ತಲೆತಗ್ಗಿಸಬೇಕಾಗಿತ್ತು. ನಿಮಗೂ ತನಿಖೆಯ ನಂತರ ಅಂತಹದೇ ಪರಿಸ್ಥಿತಿ ಬರಲಿದೆ ಎಂದು ಎಚ್ಚರಿಸಿದ್ದಾರೆ. ಅಲ್ಲದೆ, ಉನ್ನತ ಜವಾಬ್ದಾರಿ ಸ್ಥಾನದಲ್ಲಿದ್ದು, ಬೇಜವಾಬ್ದಾರಿ ಹೇಳಿಕೆ ನೀಡುವುದನ್ನು ಖಂಡಿಸಲಾಗುವುದು ಎಂದು ಹೇಳಿದ್ದಾರೆ.

click me!