ಕಾರಿನಲ್ಲಿ ಸಜೀವ ದಹನವಾಗಲು ಪೆಟ್ರೋಲ್ ಟ್ಯಾಂಕ್ ಸ್ಫೋಟವೇ ಕಾರಣ

By Suvarna Web DeskFirst Published Feb 4, 2018, 8:31 AM IST
Highlights

ತಾಂತ್ರಿಕ ದೋಷದಿಂದ ಬೆಂಕಿ ಕಾಣಿಸಿಕೊಂಡು ಕಾರಿನ ಪೆಟ್ರೋಲ್ ಟ್ಯಾಂಕ್ ಸ್ಫೋಟಗೊಂಡ ಪರಿಣಾಮ ತಾಯಿ-ಮಗು ಸಜೀವ ದಹನವಾಗಿದ್ದಾರೆ ಎಂದು ವಿಧಿ ವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು ಹೇಳಿದ್ದಾರೆ. ನೆಲ್ಲೂರಹಳ್ಳಿಯ ‘ಸುಮಧುರಂ ಆನಂದಂ ಅಪಾರ್ಟ್‌ಮೆಂಟ್’ನ ಪಾರ್ಕಿಂಗ್‌ನಲ್ಲಿ ಶುಕ್ರವಾರ ಮಾರುತಿ ರಿಡ್ಜ್ ಕಾರಿನಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ನೇಹಾ ವರ್ಮಾ ಹಾಗೂ ಅವರ ನಾಲ್ಕು ವರ್ಷದ ಮಗ ಪರಮ್ ಸಜೀವ ಸುಟ್ಟು ಹೋಗಿದ್ದರು.

ಬೆಂಗಳೂರು : ತಾಂತ್ರಿಕ ದೋಷದಿಂದ ಬೆಂಕಿ ಕಾಣಿಸಿಕೊಂಡು ಕಾರಿನ ಪೆಟ್ರೋಲ್ ಟ್ಯಾಂಕ್ ಸ್ಫೋಟಗೊಂಡ ಪರಿಣಾಮ ತಾಯಿ-ಮಗು ಸಜೀವ ದಹನವಾಗಿದ್ದಾರೆ ಎಂದು ವಿಧಿ ವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು ಹೇಳಿದ್ದಾರೆ. ನೆಲ್ಲೂರಹಳ್ಳಿಯ ‘ಸುಮಧುರಂ ಆನಂದಂ ಅಪಾರ್ಟ್‌ಮೆಂಟ್’ನ ಪಾರ್ಕಿಂಗ್‌ನಲ್ಲಿ ಶುಕ್ರವಾರ ಮಾರುತಿ ರಿಡ್ಜ್ ಕಾರಿನಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ನೇಹಾ ವರ್ಮಾ ಹಾಗೂ ಅವರ ನಾಲ್ಕು ವರ್ಷದ ಮಗ ಪರಮ್ ಸಜೀವ ಸುಟ್ಟು ಹೋಗಿದ್ದರು.

ಶನಿವಾರ ಬೆಳಗ್ಗೆ ಆಗಮಿಸಿ ಘಟನಾ ಸ್ಥಳವನ್ನು ಅಧಿಕಾರಿಗಳು ಪರಿಶೀಲಿಸಿದರು. ತಾಂತ್ರಿಕ ದೋಷದಿಂದ ಕಾದ ವೈರ್‌ಗಳು ಸುಟ್ಟು ಹೊಗೆ ಬಂದಿದೆ. ಕೆಲವೇ ಕ್ಷಣಗಳಲ್ಲಿ ವಾಹನ ಒಳಗೆಲ್ಲ ಹೊಗೆ ಆವರಿಸಿಕೊಂಡಿದೆ. ಇದರಿಂದ ಡೋರ್ ಗಳೂ ಜಾಮ್ ಆಗಿವೆ. ಹಾಗಾಗಿ ನೇಹಾ ಅವರಿಗೆ ಹೊರಬರಲು ಸಾಧ್ಯವಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದರು.

ಬೆಂಕಿ ಕೆನ್ನಾಲೆಗೆ ಆವರಿಸಿಕೊಳ್ಳುತ್ತಿದ್ದಂತೆ ಭಯಗೊಂಡಿರುವ ನೇಹಾ ಅವರು, ಆ ಕ್ಷಣದಲ್ಲಿ ಸೀಟ್ ಬೆಲ್ಟ್ ಸಹ ಕಳಚಿಕೊಳ್ಳಲು ಸಾಧ್ಯವಾಗಿಲ್ಲ. ಹೊಗೆ  ಆವರಿಸಿದ್ದರಿಂದ ಉಸಿರಾಡಲು ಸಾಧ್ಯವಾಗದೆ ತಾಯಿ-ಮಗು ಮೃತಪಟ್ಟಿದ್ದಾರೆ. ಆ ನಂತರ ಪೆಟ್ರೋಲ್ ಟ್ಯಾಂಕ್ ಸ್ಫೋಟಗೊಂಡ ಪರಿಣಾಮ ಕಾರಿನ ಅವರು ಆಹುತಿಯಾಗಿದ್ದಾರೆ ಎಂದು ಮೂಲಗಳು ವಿವರಿಸಿವೆ.

ಅಳಿಯ ರಾಜೇಶ್ ಮತ್ತು ನೇಹಾ ಮಧ್ಯೆ ಅಪಾರ ಪ್ರೀತಿ ಇತ್ತು. ಪರಮ್ ಹುಟ್ಟಿದ ಬಳಿಕ ಆತನ ಭವಿಷ್ಯದ ಬಗ್ಗೆ ಸಾಕಷ್ಟು ಕನಸುಗಳನ್ನು ಕಟ್ಟಿಕೊಂಡಿದ್ದರು. ತಾಯಿ-ಮಗನನ್ನು ಬಲಿ ಪಡೆದ ಕಾರು ಕಂಪನಿ ವಿರುದ್ಧ ನಿದಾರ್ಕ್ಷಿಣ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಮೃತಳ ನೇಹಾ ಚಿಕ್ಕಪ್ಪ ಮಧುರ್ ವರ್ಮಾ ಒತ್ತಾಯಿಸಿದರು. ಈ ಅಪಾರ್ಟ್ಮೆಟ್ ಅಗ್ನಿ ದುರಂತ ಕೇಳಿ ತಕ್ಷಣವೇ ರಾಜೇಶ್ ಬಂದಿದ್ದರು. ಮೊದಲು ಅವರಿಗೆ ಕಾರಿನ ಗುರುತು ಸಿಗಲಿಲ್ಲ. ಬಳಿಕ ನಂಬರ್ ಪ್ಲೇಟ್ ನೋಡಿ ಅವರು ಪತ್ತೆ ಹಚ್ಚಿದ್ದರು ಎಂದು ಹೇಳಿದ್ದಾರೆ.

click me!