ಆಪರೇಷನ್ ಕಮಲದ ಮೂಲಕ 50 ಕೋಟಿ ರು. ಆಫರ್ ಬಂದಿದ್ದು ನಿಜ ಎಂದು ಜೆಡಿಎಸ್ ಶಾಸಕ ಹೊಸ ಬಾಂಬ್ ಸಿಡಿಸಿದ್ದಾರೆ. ಅಷ್ಟೇ ಅಲ್ಲದೇ ಎಚ್.ಡಿ. ರೇವಣ್ಣ ಅವರಿಗೆ ಬಿಜೆಪಿಯವರು ಉಪಮುಖ್ಯಮಂತ್ರಿ ಹುದ್ದೆ ಆಫರ್ ನೀಡಿದ್ದರು ಎಂದು ಗಂಭೀರ ಆರೋಪ ಮಾಡಿದ್ದಾರೆ.
ಹಾಸ, [ಸೆ.05]: ಆಪರೇಷನ್ ಕಮಲದಿಂದ ನನಗೂ ಆಫರ್ ಬಂದಿದ್ದು ನಿಜ. 5 ಕೋಟಿ ಅಲ್ಲ 50 ಕೋಟಿಗೆ ಕರೆದರು ಎಂದು ಬೇಲೂರು ಕ್ಷೇತ್ರ ಜೆಡಿಎಸ್ ಶಾಸಕ ಕೆ.ಎಸ್ ಲಿಂಗೇಶ್ ಹೊಸ ಬಾಂಬ್ ಸಿಡಿಸಿದ್ದಾರೆ.
ಹಾಸನ ಬೇಲೂರು ಜೆಡಿಎಸ್ ಕಾರ್ಯಕರ್ತರ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನನ್ನ ಜತೆಯಲ್ಲೇ ಎಚ್.ಡಿ. ರೇವಣ್ಣ ಅವರಿಗೆ ಬಿಜೆಪಿಯವರು ಉಪಮುಖ್ಯಮಂತ್ರಿ ಹುದ್ದೆ ಆಫರ್ ನೀಡಿದ್ದರು ಎಂದು ಗಂಭೀರ ಆರೋಪ ಮಾಡಿದರು.
ಅಷ್ಟ ಅಲ್ಲದೇ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಕೆ. ಕುಮಾರಸ್ವಾಮಿ ಅವರಿಗೆ ಪತ್ನಿ ಚಂಚಲ ಕುಮಾರಸ್ವಾಮಿ ಕಡೆಯಿಂದ ಆಫರ್ ನೀಡಿದ್ದರು. ಆದರೆ, ನಾವು ಯಾರೂ ಬಿಜೆಪಿ ಆಮಿಷಕ್ಕೆ ಬಲಿಯಾಗಲಿಲ್ಲ ಎಂದು ಸ್ಪಷ್ಟಪಡಿಸಿದರು.
ಇಷ್ಟೆಲ್ಲಾ ಹಣ ನೀಡುವುದಾಗಿ ನಮಗೆ ಆಫರ್ ನೀಡಿದ ಬಿಜೆಪಿಯಿವರನ್ನು ಯಾರೂ ಬಂಧಿಸುತ್ತಿಲ್ಲ. ಆದರೆ, ಕೇವಲ 8 ಕೋಟಿ ರು. ಗಾಗಿ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅವರನ್ನು ಬಂಧಿಸಿದ್ದಾರೆ ಇಡಿ ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.
ನಾನು ಬಿಜೆಪಿಗೆ ಹೋಗುತ್ತೇನೆ ಎಂದು ನನ್ನ ಹೆಸರು ಕೆಡಿಸುವ ಪ್ರಯತ್ನ ಮಾಡಿದ್ದರು. ಆದರೆ ನಾನು ಯಾವುದೇ ಕಾರಣಕ್ಕೂ ದೇವೇಗೌಡರನ್ನು ಬಿಟ್ಟು ಹೋಗುವುದಿಲ್ಲ. ನಾವು ಉತ್ತರ ಭಾರತದ ದಬ್ಬಾಳಿಕೆಯಿಂದ ಹೊರಬರಬೇಕಿದೆ. 25 ಸಂಸದರನ್ನು ಗೆಲ್ಲಿಸಿದರೂ ಕೇಂದ್ರದಿಂದ ಬಿಡಿಗಾಸು ನೆರೆ ಪರಿಹಾರ ಪಡೆಯಲು ಸಾಧ್ಯವಾಗಿಲ್ಲ ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.