
ತಿರುವನಂತಪುರಂ (ಆ. 28): ಬಿಜೆಪಿ ಸಚಿವರು ಮತ್ತು ಸಂಸದರು ಕೇರಳ ನೆರೆ ಪರಿಹಾರಕ್ಕಾಗಿ 25 ಕೋಟಿ ರು. ದೇಣಿಗೆ ನೀಡಿದ್ದಾರೆ ಎಂಬ ಒಕ್ಕಣೆಯೊಂದಿನ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಬಿಜೆಪಿ ಸಂಸದರನ್ನೂ ಒಳಗೊಂಡಂತೆ ನಾಲ್ವರು 25 ಕೋಟಿ ರು. ಚೆಕ್ ನೀಡುತ್ತಿರುವ ಫೋಟೋದೊಂದಿಗೆ ‘ಬಿಜೆಪಿ ಸಚಿವರು ಮತ್ತು ಸಂಸದರು ಕೇರಳಕ್ಕೆ 25 ಕೋಟಿ ರು. ದೇಣಿಗೆ ನೀಡಿದ್ದಾರೆ. ಹಾಗಾಗಿ ಪಕ್ಷದಿಂದ ಏನನ್ನೂ ಪಡೆದಿಲ್ಲ ಎಂದು ಹೇಳಬೇಡಿ’ ಎಂಬ ಒಕ್ಕಣೆಯನ್ನು ಬರೆಯಲಾಗಿದೆ.
ಮೊದಲಿಗೆ ಶ್ರೀಕುಮಾರ್ ಶ್ರೀಧರ್ ನಾಯರ್ ಎಂಬ ಹೆಸರಿನ ಫೇಸ್ಬುಕ್ ಪೇಜ್ ಇದನ್ನು ಪೋಸ್ಟ್ ಮಾಡಿದ್ದು, 10 ಸಾವಿರ ಬಾರಿ ಶೇರ್ ಆಗಿದೆ. ಆದರೆ ನಿಜಕ್ಕೂ ಬಿಜೆಪಿ ಸಚಿವರು ಮತ್ತು ಸಂಸದರು ಕೇರಳ ನೆರೆ ಪರಿಹಾರವಾಗಿ 25 ಕೋಟಿ ರು. ನೀಡಿದ್ದು ನಿಜವೇ ಎಂದು ಪರಿಶೀಲಸಿದಾಗ ಇದೊಂದು ಸುಳ್ಳು ಸುದ್ದಿ ಎಂಬುದು ಪತ್ತೆಯಾಗಿದೆ.
ವಾಸ್ತವವಾಗಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಫೋಟೋ ಬಿಜೆಪಿ ಸಚಿವರು ಮತ್ತು ಸಂಸದರು ಕೇರಳಕ್ಕೆ ನೀಡುತ್ತಿರುವ ದೇಣಿಗೆಯಲ್ಲ, ಬದಲಾಗಿ ಕೇಂದ್ರ ಸಾರ್ವಜನಿಕ ವಲಯದ ಪೆಟ್ರೋಲಿಯಂ ಕಂಪನಿಗಳು ನೆರೆಪ್ರವಾಹ ಪೀಡಿತ ಕೇರಳಕ್ಕಾಗಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ 25 ಕೋಟಿ ರು. ನೀಡುತ್ತಿರುವ ಫೋಟೋ. ಪೆಟ್ರೋಲಿಯಂ ಕಂಪನಿಗಳ ಪರವಾಗಿ ಆ ಚೆಕ್ ಅನ್ನು ಬಿಜೆಪಿ ಸಂಸದರು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ನೀಡಿದ್ದರು.
ಇದೇ ಫೋಟೋವನ್ನು ಬಳಸಿಕೊಂಡು ಬಿಜೆಪಿ ಸಚಿವರು ಮತ್ತು ಸಂಸದರು ಕೇರಳಕ್ಕಾಗಿ ೨೫ ಕೋಟಿ ರು. ದೇಣಿಗೆ ನೀಡಿದ್ದಾರೆ ಎಂದು ಬಿಂಬಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಮಾಡಲಾಗಿದೆ.
-ವೈರಲ್ ಚೆಕ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.