
ಬೆಂಗಳೂರು (ಜೂ.15): ವಿಶ್ವವಿದ್ಯಾಲಯ ಕುಲಪತಿ ಹುದ್ದೆಗೆ ಸಚಿವರೊಬ್ಬರಿಗೆ ವರಸೆಯಲ್ಲಿ ಸಂಬಂಧಿ ಆಗಿರೋ ಪ್ರಾಧ್ಯಾಪಕರ ಹೆಸರನ್ನು ಸರ್ಕಾರ ಸೂಚಿಸಿದ್ದ ಹೆಸರನ್ನು ರಾಜ್ಯಪಾಲ ವಜುಭಾಯ್ ವಾಲಾ ಅವರು ತಿರಸ್ಕರಿಸಿದ್ದಾರೆ. ರಾಜ್ಯಪಾಲರ ಈ ನಿರ್ಧಾರದಿಂದ ಸರ್ಕಾರಕ್ಕೆ ಮುಖಭಂಗವಾದಂತಾಗಿದೆ. ಆದರೂ ಈ ಹಿಂದೆ ಕಳಿಸಿದ್ದ ಪ್ರಾಧ್ಯಾಪಕರ ಹೆಸರನ್ನೇ ಪುನಃ ರಾಜ್ಯಪಾಲರಿಗೆ ಸೂಚಿಸಲು ಸರ್ಕಾರ ಮುಂದಾಗಿದೆ. ಇದು ಸರ್ಕಾರ ಮತ್ತು ರಾಜಭವನ ಜತೆ ಸಂಘರ್ಷಕ್ಕೆಡೆ ಮಾಡಿಕೊಡುವ ಸಾಧ್ಯತೆಗಳಿವೆ.
ರಾಜಭವನ ಜತೆ ಸಂಘರ್ಷ ಸಾಧ್ಯತೆ?
ಬಹುದಿನಗಳಿಂದ ನೆನೆಗುದಿಗೆ ಬಿದ್ದಿರುವ ಬೆಂಗಳೂರು ವಿಶ್ವವಿದ್ಯಾಲಯ ಕುಲಪತಿ ನೇಮಕ ವಿಚಾರ ಮತ್ತಷ್ಟು ಕಗ್ಗಂಟಾಗಿದೆ. ಸರ್ಚ್ ಕಮಿಟಿ ಶಿಫಾರಸ್ಸು ಮಾಡಿದ್ದ ಹೆಸರುಗಳ ಪೈಕಿ ರಾಜ್ಯ ಸರ್ಕಾರ ಸೂಚಿಸಿದ್ದ ಹೆಸರಿಗೆ ರಾಜ್ಯಪಾಲರು ಸಮ್ಮತಿ ವ್ಯಕ್ತಪಡಿಸಿಲ್ಲ. ಪ್ಯಾನಲ್ನಲ್ಲಿದ್ದ ಮತ್ತೊಬ್ಬ ಪ್ರಾಧ್ಯಾಪಕರ ಹೆಸರನ್ನು ರಾಜ್ಯಪಾಲರು ಸೂಚಿಸಿ ಸರ್ಕಾರಕ್ಕೆ ಕಡತ ವಾಪಸ್ ಕಳಿಸಿದ್ದಾರೆ. ಈ ಬಗ್ಗೆ ರಾಜಭವನ ಮತ್ತು ಸರ್ಕಾರದ ಉನ್ನತ ಮೂಲಗಳು ಸುವರ್ಣನ್ಯೂಸ್ಗೆ ಖಚಿತಪಡಿಸಿವೆ. ರಾಜ್ಯಪಾಲರ ಈ ನಿರ್ಧಾರ ಸರ್ಕಾರದೊಂದಿಗೆ ಸಂಘರ್ಷಕ್ಕೆಡೆ ಮಾಡಿಕೊಡುವ ಸಾಧ್ಯತೆಗಳಿವೆ.
ಬೆಂಗಳೂರು ವಿಶ್ವವಿದ್ಯಾಲಯ ಕುಲಪತಿ ನೇಮಕ ಸಂಬಂಧ ರಚನೆಯಾಗಿದ್ದ ಸರ್ಚ್ ಕಮಿಟಿ ಒಟ್ಟು ಮೂವರ ಹೆಸರನ್ನೊಳಗೊಂಡ ಪ್ಯಾನಲ್ನ್ನು ಸರ್ಕಾರಕ್ಕೆ ಸಲ್ಲಿಸಿತ್ತು. ಯುವಿಸಿಇ ಪ್ರಿನ್ಸಿಪಾಲ್ ವೇಣುಗೋಪಾಲ್, ಕರ್ನಾಟಕ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಹಾಲಿ ಬಳ್ಳಾರಿಯ ಕೃಷ್ಣದೇವರಾಯ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಆಗಿರೋ ಸಂಗಮೇಶ್ವರ ಪಾಟೀಲ್, ಮೈಸೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ನಾಗಭೂಷಣ್ ಅವರ ಹೆಸರು ಪ್ಯಾನಲ್ನಲ್ಲಿತ್ತು. ಈ ಪೈಕಿ ಸರ್ಕಾರ ಸಂಗಮೇಶ್ವರ ಪಾಟೀಲ್ ಅವರ ಹೆಸರನ್ನು ಸೂಚಿಸಿ ರಾಜ್ಯಪಾಲರಿಗೆ ಕಡತ ಕಳಿಸಿತ್ತು.
ಏಕ್ಷೀಯವಾಗಿ ನಿರ್ಧಾರ ಕೈಗೊಂಡಿದ್ದೇಕೆ?
ಸರ್ಚ್ ಕಮಿಟಿ ಮಾಡಿದ್ದ ಶಿಫಾರಸ್ಸಿನ ಪೈಕಿ ಸರ್ಕಾರ ಸೂಚಿಸಿದ್ದ ಸಂಗಮೇಶ್ವರ ಪಾಟೀಲ್ ಅವರ ಹೆಸರಿಗೆ ರಾಜ್ಯಪಾಲ ವಜುಭಾಯ್ ವಾಲಾ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕುಲಪತಿ ಹುದ್ದೆಗೆ ನೇಮಕ ಮಾಡೋ ಮುನ್ನ ರಾಜ್ಯ ಸರ್ಕಾರದ ಜತೆ ಸಮಾಲೋಚನೆ ನಡೆಸ್ಬೇಕು. ಆದ್ರೆ, ಸರ್ಕಾರದ ಜತೆ ಸಮಾಲೋಚಿಸದೆಯೇ ಏಕಪಕ್ಷೀಯವಾಗಿ ನಿರ್ಧಾರ ಕೈಗೊಂಡಿರುವ ರಾಜ್ಯಪಾಲರ ವಿರುದ್ಧ ಸರ್ಕಾರ ಗರಂ ಆಗಿದೆ.
ವೇಣುಗೋಪಾಲ್ ಹೆಸರಿಗೆ ರಾಜ್ಯಪಾಲರ ಅನುಮೋದನೆ!
ಬೆಂಗಳೂರು ವಿಶ್ವವಿದ್ಯಾಲಯ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ವೇಣುಗೋಪಾಲ್ ಅವರ ಹೆಸರನ್ನು ರಾಜ್ಯಪಾಲ ವಜುಭಾಯ್ ವಾಲಾ ಅವರು ಅನುಮೋದಿಸಿದ್ದಾರೆ. ಸರ್ಕಾರದ ಜತೆ ಸಮಾಲೋಚಿಸದೆಯೇ ವೇಣುಗೋಪಾಲ್ ಅವರ ಹೆಸರನ್ನು ರಾಜ್ಯಪಾಲರು ಸೂಚಿಸಿದ್ದಾರೆ. ಹೀಗಾಗಿ ಅವರ ಹೆಸರಿಗೆ ಸರ್ಕಾರ ಸಮ್ಮತಿ ವ್ಯಕ್ತಪಡಿಸಿಲ್ಲ. ಸದ್ಯದಲ್ಲೇ ಸಂಗಮೇಶ್ವರ ಪಾಟೀಲ್ ಅವರ ಹೆಸರನ್ನೇ ಪುನಃ ರಾಜ್ಯಪಾಲರಿಗೆ ಕಳಿಸಲಿದೆ ಎಂದು ಮುಖ್ಯಮಂತ್ರಿ ಸಚಿವಾಲಯದ ಮೂಲಗಳು ತಿಳಿಸಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.