1990ರ ದಶಕದಲ್ಲಿ ನಿಲ್ಲಿಸಲಾಗಿದ್ದ ಪ್ರತಿ ಮನೆ-ಮನೆಗೂ ತೆರಳಿ ಭಯೋತ್ಪಾದಕರಿಗಾಗಿ ಶೋಧ ನಡೆಸುವ ಕಾರ್ಯಾಚರಣೆಯನ್ನು ಮತ್ತೆ ಆರಂಭಿಸಲಾಗಿದೆ.
ಶ್ರೀನಗರ(ಮೇ.05): ವಸತಿ ಪ್ರದೇಶಗಳಲ್ಲಿ ಅಡಗಿ ಭದ್ರತಾ ಪಡೆಗಳ ಮೇಲೆ ದಾಳಿ ನಡೆಸುತ್ತಿರುವ ಭಯೋತ್ಪಾದಕರನ್ನು ಹೊರಗೆಳೆದು ಮಟ್ಟಹಾಕಲು ಬೃಹತ್ ಪ್ರಮಾಣದ ಕಾರ್ಯಾಚರಣೆಯನ್ನು ಭದ್ರತಾ ಪಡೆಗಳು ಆರಂಭಿಸಿವೆ.
1990ರ ದಶಕದಲ್ಲಿ ನಿಲ್ಲಿಸಲಾಗಿದ್ದ ಪ್ರತಿ ಮನೆ-ಮನೆಗೂ ತೆರಳಿ ಭಯೋತ್ಪಾದಕರಿಗಾಗಿ ಶೋಧ ನಡೆಸುವ ಕಾರ್ಯಾಚರಣೆಯನ್ನು ಮತ್ತೆ ಆರಂಭಿಸಲಾಗಿದೆ. ಹೆಲಿಕಾಪ್ಟರ್, ಡ್ರೋನ್'ಗಳ ಸಹಾಯದಿಂದ 4 ಸಾವಿರ ಯೋಧರು ಶೋಪಿಯಾನ್ ಜಿಲ್ಲೆಯಲ್ಲಿ ಉಗ್ರರ ಪತ್ತೆ ಹಚ್ಚುವ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಸೇನೆ, ಪೊಲೀಸ್ ಹಾಗೂ ಸಿಆರ್'ಪಿಎಫ್ ಸಿಬ್ಬಂದಿಯನ್ನು ಒಳಗೊಂಡ ಭದ್ರತಾ ತಂಡ ಗುರುವಾರ ಮುಂಜಾನೆಯಿಂದ ಶೋಪಿಯಾನ್ ಜಿಲ್ಲೆಯ ಡಜನ್ ಹಳ್ಳಿಗಳಲ್ಲಿ ಕಾರ್ಯಾಚರಣೆ ನಡೆಸಿದೆ.
ಪ್ರತಿ ಹಳ್ಳಿಗೆ ತೆರಳುವ ಭದ್ರತಾ ಸಿಬ್ಬಂದಿ, ಗ್ರಾಮಸ್ಥರನ್ನು ಒಂದು ಕಡೆ ಕಲೆ ಹಾಕಿ, ಅವರ ಮನೆಯಲ್ಲಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಉಗ್ರರು ಶೋಪಿಯಾನ್ ಜಿಲ್ಲೆಯಲ್ಲಿದ್ದಾರೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಈ ಕಾರ್ಯಾಚರಣೆ ಆರಂಭಿಸಲಾಗಿದೆ. ಈ ನಡುವೆ ದಿನದ ಕಾರ್ಯಾಚರಣೆ ಮುಗಿಸಿ ಬರುವಾಗ ಉಗ್ರರು ಯೋಧರತ್ತ ಗುಂಡಿನ ದಾಳಿ ನಡೆಸಿದ್ದಾರೆ. ಈ ವೇಳೆ ಓರ್ವ ನಾಗರಿಕ ಬಲಿಯಾಗಿದ್ದಾನೆ ಎಂದು ವರದಿಯಾಗಿದೆ.