ಬಳ್ಳಾರಿ(ಸೆ.01): ಕೆಲವರು ಮಿಲಿಟರಿ, ಆರ್ಮಿ ಸೇನೆಗೆ ಮಕ್ಕಳನ್ನು ಕಳಿಸೋಕೆ ಹಿಂಜರಿಯುತ್ತಾರೆ. ಒಬ್ಬ ಮಗ ಆದರೂ ತಮ್ಮ ಜೊತೆ ಇರಲಿ ಅಂತಾ ಪೋಷಕರು ಆಸೆ ಪಟ್ಟು ಜೊತೆಯಲ್ಲೇ ಇರಿಸಿಕೊಳ್ಳುತ್ತಾರೆ. ಇಲ್ಲೊಂದು ಕುಟುಂಬ ಮಾತ್ರ ಇದಕ್ಕೆ ತದ್ವಿರುದ್ಧ. ತನ್ನ ನಾಲ್ಕು ಮಕ್ಕಳನ್ನೂ ದೇಶ ಸೇವೆಗೆ ಕಳುಹಿಸಿದ್ದಾರೆ. ಈ ರಿಯಲ್ ಸೋಲ್ಜರ್ಸ್ ಬಗ್ಗೆ ಒಂದು ವರದಿ.
ಗಣಿನಾಡು ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ದೇಶನೂರು ಗ್ರಾಮದ ಡಿ.ನರಸಿಂಹಯ್ಯ ಮತ್ತು ವೆಂಕಮ್ಮ ಎಂಬುವವರ ನಾಲ್ವರು ಮಕ್ಕಳು ದೇಶ ಸೇವೆ ಮಾಡುತ್ತಿದ್ದಾರೆ. ನರಸಿಂಹಯ್ಯ ಕೂಡ ಸೇನೆಯಲ್ಲಿ ಕೆಲಸ ಮಾಡಿ ನಿವೃತ್ತಿ ಹೊಂದಿ ಸಹಜವಾಗಿ ಅಸುನೀಗಿದ್ದರು. ಪುತ್ರರಾದ ಡಿ.ಎನ್.ವೆಂಕಟಗಿರಿಯಪ್ಪ, ಡಿ.ಎನ್.ಕೊಲ್ಲಪುರಪ್ಪ, ಡಿ.ಎನ್.ವಸಂತರಾಜ್ ಹಾಗೂ ಡಿ.ಎನ್.ಮಂಜುನಾಥ ಸದ್ಯ ಸೇನೆಯಲ್ಲಿದ್ದಾರೆ. ನನ್ನ ಪತಿಯ ಆಸೆಯಂತೆ ಮಕ್ಕಳೂ ದೇಶ ಸೇವೆಯಲ್ಲಿದ್ದಾರೆ ಅಂತಾರೆ ಹೆತ್ತಮ್ಮ.
ಮೊಮ್ಮಕ್ಕಳ ಆರೈಕೆಗಾಗಿ ವರ್ಷದಲ್ಲಿ ಒಂದೆರಡು ತಿಂಗಳು, ತಲಾ ಒಬ್ಬ ಮಗನ ಬಳಿ ಇರುವ ತಾಯಿ ವೆಂಕಮ್ಮ ತವರೂರು ನೆನಪಾಗುತ್ತಿದ್ದಂತೆ ದೇಶನೂರು ಗ್ರಾಮಕ್ಕೆ ಮರಳುತ್ತಾರೆ. ಇಲ್ಲಿನ ತಮ್ಮ ಮನೆಯಲ್ಲಿ ಕೆಲವು ದಿನಗಳಿದ್ದು, ಮತ್ತೆ ಮಕ್ಕಳ ಬಳಿಗೆ ತೆರಳುತ್ತಾರೆ.
ಒಟ್ಟಿನಲ್ಲಿ ಇಡೀ ಕುಟುಂಬಕ್ಕೆ ಕುಟುಂಬವೇ ಭಾರತಮಾತೆಯ ಸೇವೆಯಲ್ಲಿ ತಲ್ಲೀನವಾಗಿದೆ. ಇಂತಹ ಕುಟುಂಬವಿರುವ ಈ ದೇಶನೂರ ಕುಗ್ರಾಮದ ಸೈನಿಕ ಕುಟುಂಬಕ್ಕೊಂದು ನಮ್ಮದೊಂದು ಸಲಾಂ.