ಕೇಂದ್ರೀಯ ನಾಗರಿಕ ಸೇವಾ ಪರೀಕ್ಷೆಗೆ ಸಲ್ಲಿಕೆಯಾಗುವ ಪ್ರತಿಯೊಂದು ಅರ್ಜಿಗಳನ್ನು ಪರೀಕ್ಷೆ ಎದುರಿಸಿದ್ದಾರೆ ಎಂದೇ ಪರಿಗಣಿಸಬೇಕು ಎನ್ನುವ ಪ್ರಸ್ತಾವನೆಯನ್ನು ಕೇಂದ್ರೀಯ ಲೋಕಸೇವಾ ಆಯೋಗ ಕೇಂದ್ರ ಸರ್ಕಾರದ ಮುಂದಿಟ್ಟಿದೆ.
ನವದೆಹಲಿ: ಕೇಂದ್ರೀಯ ನಾಗರಿಕ ಸೇವಾ ಪರೀಕ್ಷೆಗೆ ಸಲ್ಲಿಕೆಯಾಗುವ ಪ್ರತಿಯೊಂದು ಅರ್ಜಿಗಳನ್ನು ಪರೀಕ್ಷೆ ಎದುರಿಸಿದ್ದಾರೆ ಎಂದೇ ಪರಿಗಣಿಸಬೇಕು ಎಂಬ ಪ್ರಸ್ತಾವನೆಯನ್ನು ಕೇಂದ್ರೀಯ ಲೋಕಸೇವಾ ಆಯೋಗ(ಯುಪಿಎಸ್ಸಿ) ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಮುಂದಿಟ್ಟಿದೆ.
ಈ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ಮನ್ನಿಸಿದಲ್ಲಿ, ತಮ್ಮ ಸಂಪನ್ಮೂಲ, ಶ್ರಮ ಮತ್ತು ಸಮಯಾವಕಾಶವೂ ಉಳಿತಾಯವಾಗಲಿದೆ ಎಂದು ಯುಪಿಎಸ್ಸಿ ಪ್ರತಿಪಾದಿಸಿದೆ. ಪ್ರತೀ ವರ್ಷ ಯುಪಿಎಸ್ಸಿ ಪರೀಕ್ಷೆಗೆ ಸುಮಾರು 9 ಲಕ್ಷ ಅಭ್ಯರ್ಥಿಗಳು ಅರ್ಜಿ ಸಲ್ಲಿಸುತ್ತಾರೆ.
ಆದರೆ, ಇದರಲ್ಲಿ ಶೇ.50ರಷ್ಟುಅಭ್ಯರ್ಥಿಗಳು ಪರೀಕ್ಷೆಯನ್ನು ಎದುರಿಸುವುದೇ ಇಲ್ಲ. ಈ ಹಿನ್ನೆಲೆಯಲ್ಲಿ ಯುಪಿಎಸ್ಸಿ ಈ ನಿರ್ಧಾರಕ್ಕೆ ಬಂದಿದೆ. ಐಎಎಸ್ ಅಧಿಕಾರಿಯಾಗಲು ಇರುವ ಯುಪಿಎಸ್ ಪರೀಕ್ಷೆಯನ್ನು ಓರ್ವ ಅಭ್ಯರ್ಥಿ 6 ಬಾರಿ ಮಾತ್ರವೇ ಎದುರಿಸಬಹುದು. ಆದರೆ, ಈ ನಿಯಮ ಪರಿಶಿಷ್ಟಜಾತಿ ಮತ್ತು ಪಂಗಡಗಳಿಗೆ ಅನ್ವಯವಾಗುವುದಿಲ್ಲ.