ತಿವಾರಿಗೆ ವಿಷ ಹಾಕಿ ಕೊಂದರಾ ? ಸುವರ್ಣ ನ್ಯೂಸ್ Big Exclusive

By Suvarna Web DeskFirst Published May 21, 2017, 4:51 PM IST
Highlights

ಮರಣೋತ್ತರ ಹಾಗೂ ವಿಧಿವಿಧಾನ ಪರೀಕ್ಷೆಯ ವರದಿಯಲ್ಲೇ ತಿವಾರಿ ಸಾವಿಗೆ ಮಹತ್ವದ ತಿರುವು ಸಿಕ್ಕಿದೆ. ತಿವಾರಿ ಉಸಿರಾಟದ ತೊಂದರೆಯಿಂದ ಮೃತಪಟ್ಟಿಲ್ಲ. ವರದಿಯಲ್ಲಿ ಸಾಕಷ್ಟು ಅನುಮಾನ ಮೂಡಿಸುವ ಅಂಶಗಳಿವೆ ಎಂಬುದನ್ನು ವೈದ್ಯರೆ ತಿಳಿಸಿದ್ದಾರೆ.

ಬೆಂಗಳೂರು(ಮೇ.21): ರಾಷ್ಟ್ರಮಟ್ಟದಲ್ಲಿ ಬೆಚ್ಚಿ ಬೀಳಿಸಿದ ಕರ್ನಾಟಕ ಕೇಡರ್ ಐಎಎಸ್ ಅಧಿಕಾರಿ ಅನುರಾಗ್ ತಿವಾರಿ ಸಾವಿನ ಬಗ್ಗೆ ಸ್ಫೋಟಕ ಮಾಹಿತಿಗಳು ಸುವರ್ಣ ನ್ಯೂಸ್'ಗೆ ಲಭ್ಯವಾಗಿದೆ.

ಮರಣೋತ್ತರ ಹಾಗೂ ವಿಧಿವಿಧಾನ ಪರೀಕ್ಷೆಯ ವರದಿಯಲ್ಲೇ ತಿವಾರಿ ಸಾವಿಗೆ ಮಹತ್ವದ ತಿರುವು ಸಿಕ್ಕಿದೆ. ತಿವಾರಿ ಉಸಿರಾಟದ ತೊಂದರೆಯಿಂದ ಮೃತಪಟ್ಟಿಲ್ಲ. ವರದಿಯಲ್ಲಿ ಸಾಕಷ್ಟು ಅನುಮಾನ ಮೂಡಿಸುವ ಅಂಶಗಳಿವೆ ಎಂಬುದನ್ನು ವೈದ್ಯರೆ ತಿಳಿಸಿದ್ದಾರೆ.

ತಿವಾರಿ ಉಸಿರುಗಟ್ಟಿ ಸತ್ತರೇ? ಉಸಿರುಗಟ್ಟಿಸಿ ಸಾಯಿಸಿದರೇ ? ಸಾವಿನ ಸುತ್ತ ಅನುಮಾನದ ಹುತ್ತ ಹರಿದಾಡುತ್ತಿವೆ. ಉತ್ತರ ಪ್ರದೇಶ ವಿಶೇಷ ತನಿಖಾ ತಂಡಕ್ಕೂ ಕೂಡ ತಿವಾರಿ ಸಾವಿನ ರಹಸ್ಯದ ಮಾಹಿತಿ ದೊರಕಿದೆ. ತಿವಾರಿ ಅವರು ಇರುವ ಸಿಸಿ ಟೀವಿ ದೃಶ್ಯಗಳಲ್ಲಿ ಸಂಶಯಾತ್ಮಕವಾದ ವ್ಯಕ್ತಿಗಳು ಅವರ ಹಿಂದೆ ಓಡಾಡುತ್ತಿದ್ದಾರೆ. ಅಲ್ಲದೆ ತಿವಾರಿ ಉಳಿದುಕೊಂಡಿದ್ದ ಕೊಠಡಿಯಲ್ಲಿ ಕೆಲವು ವಸ್ತುಗಳು ಕಾಣೆಯಾಗಿವೆ. ಇವೆಲ್ಲವೂ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿವೆ.

ತಿವಾರಿ ಅವರು ಸೇವಿಸಿದ ಆಹಾರದಲ್ಲಿ ವಿಷವಿತ್ತೆ ?

ಅನುರಾಗ್ ತಿವಾರಿ ಸೇವಿಸಿದ ಆಹಾರದಲ್ಲಿ ವಿಷವಿತ್ತೆ ಎಂಬುದರ ಬಗ್ಗೆ ವಿಧಿವಿಧಾನ ತಜ್ಞರು ಅನುಮಾನ ವ್ಯಕ್ತಪಡಿಸಿದ್ದಾರೆ. ಅನುರಾಗ್ ತಿವಾರಿ ಸೇವಿಸಿದ್ದ ಆಹಾರ ಪಚನವೇ ಆಗಿರಲಿಲ್ಲ. ಸಾವಿನ ಹಿಂದಿನ ದಿನ ರಾತ್ರಿ 9 ಗಂಟೆಗೆ ಆಹಾರ ಸೇವಿಸಿದ್ದರು. ಪಚನವಾಗದ ಕಾರಣ ಯಾರಾದರೂ ವಿಷ ಪ್ರಾಷಣ ಮಾಡಿಸಿರುವ ಸಾಧ್ಯತೆಯು ಇದೆ ಎಂದು ವೈದ್ಯರ ಅನುಮಾನವಾಗಿದೆ.

ಸಾಮಾನ್ಯವಾಗಿ ಆರೋಗ್ಯವಂತ ಮನುಷ್ಯ ಆಹಾರ ಸೇವಿಸಿದರೆ  5 ರಿಂದ 9 ಗಂಟೆಯೊಳಗೆ ಪಚನವಾಗುತ್ತದೆ. ಆದರೆ ಮರಣೋತ್ತರ ಪರೀಕ್ಷೆಯಲ್ಲಿ ಆಹಾರ ಪಚನವಾಗಿರಲಿಲ್ಲ ಎಂದು ಮರಣೋತ್ತರ ಪರೀಕ್ಷೆ ನಡೆಸಿದ ಅಶುತೋಷ್ ದುಬೆ ವರದಿಯಲ್ಲಿ ತಿಳಿಸಿದ್ದಾರೆ. ರಾತ್ರಿ ಸೇವಿಸಿದ ಊಟದಲ್ಲಿ ವಿಷ ಪ್ರಾಷಣ ಮಾಡಲಾಗಿತ್ತಾ ಅಥವಾ ಬೇರೆ ಯಾವುದಾದರೂ ರಾಸಾಯನಿಕ ಸೇರಿಸಲಾಗಿತ್ತ ಎಂಬ ಸಂಶಯಗಳು ಕೂಡ ವ್ಯಕ್ತವಾಗಿವೆ.

 

click me!