
ಬಾಗಲಕೋಟೆ : ವೀರಶೈವ ಮತ್ತು ಪ್ರತ್ಯೇಕ ಲಿಂಗಾಯತ ಧರ್ಮ ವಿಚಾರ ತಣ್ಣಗಾದ ಬೆನ್ನಲ್ಲೇ ಇದೀಗ ಸ್ವಾಮಿಗಳ ಮಧ್ಯೆ ಮತ್ತೊಂದು ವಿವಾದ ಹುಟ್ಟಿಕೊಂಡಿದ್ದು, ಸ್ವಾಮೀಜಿಗಳ ಮದ್ಯೆ ಆರೋಪ - ಪ್ರತ್ಯಾರೋಪ ಶುರುವಾಗಿದೆ. ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಶಿವಯೋಗಮಂದಿರದಲ್ಲಿ ಜಂಗಮರಿಗೆ ಮಾತ್ರ ಮಠಾಧೀಶರಾಗಲು ಹಾಗೂ ಅರ್ಚಕರಾಗುವ ತರಬೇತಿ ನೀಡುತ್ತಿದ್ದಾರೆನ್ನುವ ಆರೋಪವೊಂದು ಕೇಳಿ ಬಂದಿದೆ.
ಹೀಗಾಗಿ ಬಾದಾಮಿಯ ಶಿವಯೋಗ ಮಂದಿರಕ್ಕೆ ಪರ್ಯಾಯವಾಗಿ ಮಹಾರಾಷ್ಟ್ರ ಮೂಲದ ಸಿದ್ಧ ಸಂಸ್ಥಾನಗಿರಿಯ ಕನೇರಿ ಮಠದಲ್ಲಿ ಜಂಗಮೇತರ ಎಲ್ಲ ಜಾತಿ, ಪಂಥಗಳ ಜನರ ತರಬೇತಿಗಾಗಿ ಗುರುಕುಲ ಆರಂಭಿಸಲಾಗಿದೆ. ಈ ಬಗ್ಗೆ ಸ್ಫಷ್ಟನೆ ನೀಡಿರುವ ಕನೇರಿಯ ಸಿದ್ಧ ಸಂಸ್ಥಾನಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ, ಶಿವಯೋಗಮಂದಿರದಲ್ಲಿ ಬಹುತೇಕ ಜಂಗಮರಿಗೆ ಮಾತ್ರ ಕಲಿಯಲು ಅವಕಾಶ ನೀಡಿದ್ದು, ಇಲ್ಲಿಯವರೆಗೆ ಜಂಗಮೇತರರಿಗೆ ಕಲಿಯಲು ಅವಕಾಶ ನೀಡಲಾಗಿದೆಯಾ ಎನ್ನೋದನ್ನ ಬಹಿರಂಗಪಡಿಸಿಬೇಕೆಂದು ಶಿವಯೋಗಮಂದಿರದ ಡಾ, ಸಂಗನಬಸವ ಸ್ವಾಮೀಜಿಗಳಿಗೆ ಸವಾಲು ಹಾಕಿದ್ದಾರೆ.
ಇನ್ನು ಲಿಂಗಾಯತ ಮತ್ತು ಅದ್ವೈತ ಪಂಥ ಪಾಲಿಸುವ ಸುಮಾರು 400 ಮಠಾಧೀಶರು ಒಂದೆಡೆ ಸೇರಿ ಸಹೃದಯಿ ಮಠಾಧಿಪತಿಗಳ ಒಕ್ಕೂಟ ಈಗಾಗಲೇ ತನ್ನ ಕಾರ್ಯ ಆರಂಭಿಸಿದೆ. ರಾಜ್ಯ ದಲ್ಲಿ ಸುಮಾರು ಎರಡು ಸಾವಿರಕ್ಕೂ ಅಧಿಕ ಜಂಗಮೇತರ ಮಠಾಧೀಶರಿದ್ದು ಅವರೆಲ್ಲರನ್ನು ಈ ಒಕ್ಕೂಟದ ಅಡಿ ತರಲು ಪ್ರಯತ್ನಿಸಲಾಗುತ್ತಿದೆ ಎಂದಿದ್ದರು.
ಇನ್ನು ಕನೇರಿಯ ಸಿದ್ದಿ ಸಂಸ್ಥಾನ ಮಠದ ಶ್ರೀಗಳ ಹೇಳಿಕೆಗೆ ತಿರುಗೇಟು ನೀಡಿರುವ ಶಿವಯೋಗ ಮಂದಿರದ ಡಾ, ಸಂಗನ ಬಸವ ಸ್ವಾಮೀಜಿ, ಶಿವಯೋಗಮಂದಿರದಲ್ಲಿ ವೀರಶೈವ ತತ್ವ ಒಪ್ಪಿ ಬರುವವರಿಗೆ ವಟುದೀಕ್ಷೆ, ತರಬೇತಿ ನೀಡಲಾಗುತ್ತಿದೆ.
ಶಿವಯೋಗಮಂದಿರದ ಬಗ್ಗೆ ತಿಳಿದುಕೊಳ್ಳಲಾರದೆ ಕನೇರಿ ಸ್ವಾಮೀಜಿ ಮಾತನಾಡುವದು ಸರಿಯಲ್ಲ. ಜಂಗಮೇತರ ಸ್ವಾಮೀಜಿಗಳು ಶಿವಯೋಗಮಂದಿರದಲ್ಲಿ ಕಲಿತು ಪ್ರತಿಷ್ಠಿತ ಮಠಗಳಿಗೆ ಪೀಠಾಧಿಪತಿಗಳಾಗಿದ್ದಾರೆ. ಇಲ್ಲಿ ಕಲಿತವರು ಸಾಗರದಷ್ಟಿದ್ದಾರೆ.
ಇನ್ನು ಕನೇರಿ ಸ್ವಾಮೀಜಿ ಲಿಂಗಧಾರಣೆ ಮಾಡಿಲ್ಲ . ಅವರೊಬ್ಬರು ವೇದಾಂತಿ, ಶಿವಯೋಗಮಂದಿರದ ಕುರಿತು ಮಾತನಾಡುವ ನೈತಿಕತೆ ಇಲ್ಲ ಎಂದು ಟಾಂಗ್ ನೀಡಿದ್ದಾರೆ. ಒಟ್ನಲ್ಲಿ ಇಬ್ಬರ ಸ್ವಾಮೀಜಿ ಗಳ ನಡುವೆ ಮತ್ತೊಂದು ವಿವಾದ ವಿಚಾರಕ್ಕೆ ಆರೋಪ ಪ್ರತ್ಯಾರೋಪ ಶುರುವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.