
ಬ್ರಹ್ಮಾವರ: ಮುಖ್ಯಮಂತ್ರಿ ಸಿದ್ದರಾಮಯ್ಯ ಆಧುನಿಕ ಭಸ್ಮಾಸುರ, ಅವರೇ ಕಾಂಗ್ರೆಸನ್ನು ನಾಶ ಮಾಡುತ್ತಿದ್ದಾರೆ ಎಂದು ಕೇಂದ್ರ ರಸಗೊಬ್ಬರ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಅನಂತಕುಮಾರ್ ಟೀಕಿಸಿದ್ದಾರೆ.
ಸೋಮವಾರ ಇಲ್ಲಿ ಜಿಲ್ಲಾ ಬಿಜೆಪಿ ವತಿಯಿಂದ ನಡೆದ ಪರಿವರ್ತನಾ ಸಮಾವೇಶದಲ್ಲಿ, ಮಾಜಿ ಸಂಸದ ಕೆ.ಜಯಪ್ರಕಾಶ್ ಹೆಗ್ಡೆ ಅವರ ನೂರಾರು ಬೆಂಬಲಿಗರನ್ನು ಬಿಜೆಪಿಗೆ ಬರ ಮಾಡಿಕೊಂಡು, ದಿಕ್ಸೂಚಿ ಭಾಷಣ ಮಾಡಿದರು.
ಸಿದ್ದರಾಮಯ್ಯ ಎಂದರೆ ಅಹಂಕಾರ, ಅವ್ಯವಹಾರ ಮತ್ತು ಅಸಡ್ಡೆಯ ಪ್ರತಿರೂಪ. ಪ್ರತಿಯೊಂದರಲ್ಲೂ ಅಹಂಕಾರ ತೋರಿಸುವ ಅವರು ಕೈ ಇಟ್ಟಲ್ಲೆಲ್ಲಾ ಅವ್ಯವಹಾರ ನಡೆಯುತ್ತಿದೆ, ಅದನ್ನು ಸುಧಾರಿಸುವಲ್ಲಿ ಅಸಡ್ಡೆ ತೋರಿಸುತ್ತಿದ್ದಾರೆ. ಬೆಂಗಳೂರು ನಗರದ ರಸ್ತೆಗಳಲ್ಲಿ 33 ಸಾವಿರ ಗುಂಡಿಗಳಿವೆ ಎಂದು ಅಧಿಕಾರಿಗಳೇ ಲೆಕ್ಕ ನೀಡಿದ್ದಾರೆ. ಇದನ್ನು ಸರಿಪಡಿಸುವುದು ಈ ಸರ್ಕಾರದಿಂದ ಸಾಧ್ಯ ಆಗುತ್ತಿಲ್ಲ, ಇನ್ನೂ ಕಾಂಗ್ರೆಸ್ ಸರ್ಕಾರ, ಅದರ ಆಡಳಿತ, ಬೊಕ್ಕಸ ಎಲ್ಲವೂ ಗುಂಡಿಮಯವಾಗಿದೆ.
ಇದನ್ನು ಸರಿಪಡಿಸುವುದು ಅವರಿಂದಂತೂ ಸಾಧ್ಯವಿಲ್ಲ, ಅದು ಬಿಜೆಪಿಯಿಂದ ಮಾತ್ರ ಸಾಧ್ಯ ಎಂದು ಅನಂತಕುಮಾರ್ ಹೇಳಿದರು.
ಪರಿವರ್ತನೆ ನಿರೀಕ್ಷೆ: ಬ್ರಹ್ಮಾವರ ಮತ್ತು ಉಡುಪಿಯ ಪಂಚಾಯಿತಿಗಳಿಂದ ಇಷ್ಟು ಸಂಖ್ಯೆಯಲ್ಲಿ ಕಾಂಗ್ರೆಸ್ ನಾಯಕರು ಕಾರ್ಯಕರ್ತರು ಬಿಜೆಪಿ ಸೇರಿದ್ದಾರೆ ಎಂದರೆ ಜನರು ರಾಜ್ಯದಲ್ಲಿ ಪರಿವರ್ತನೆ ಬಯಸುತ್ತಿದ್ದಾರೆ ಎಂಬುದಕ್ಕೆ ಸ್ಪಷ್ಟ ಸಂಕೇತ ಎಂದು ಅವರು ಅಭಿಪ್ರಾಯಪಟ್ಟರು.
ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಮಾತನಾಡಿ, ಸಿದ್ದರಾಮಯ್ಯ ಅವರು ಅಭಿವೃದ್ಧಿ ಕೆಲಸ ಮಾಡುತ್ತಿಲ್ಲ, ಅವರು ವೀರಶೈವ, ಲಿಂಗಾಯತ ಅಂತೆಲ್ಲಾ ಜಾತಿ ಜಾತಿ ಮಧ್ಯೆ ಬೆಂಕಿ ಹಚ್ಚುವ ಕೆಲಸ ಮಾತ್ರ ಮಾಡುತ್ತಿದ್ದಾರೆ. ಕನ್ನಡ ಬಾವುಟದ ವಿಷಯದಲ್ಲಿಯೂ ಬೆಂಕಿ ಹಚ್ಚುವ ಕೆಲಸ ಮಾಡಿದರು,
ಬಿಜೆಪಿ ಸರ್ಕಾರವು ಜಾತಿಧರ್ಮ ಬೇಧ ಇಲ್ಲದೇ ಜಾರಿಗೆ ತಂದಿದ್ದ ಭಾಗ್ಯಲಕ್ಷ್ಮೀ ಯೋಜನೆಯನ್ನು ನಡೆಸಲಾಗದೆ, ಕೇವಲ ಮುಸ್ಲಿಂ ಮಹಿಳೆಯರಿಗಾಗಿ ಶಾದಿ ಭಾಗ್ಯವನ್ನು ತಂದು ಅಲ್ಲಿಯೂ ಬೆಂಕಿ ಹಚ್ಚಿದರು. ಈಗ ಬೆಂಗಳೂರಿನಲ್ಲಿ ಸ್ಟೀಲ್ ಫ್ಲೈಓವರ್ ನಿರ್ಮಾಣ ಎನ್ನುವ ಬೆಂಕಿಯನ್ನು ಹಚ್ಚುತ್ತಿದ್ದಾರೆ. ಅದೇ ಬೆಂಕಿಯಿಂದ ಅವರೇ ಸುಟ್ಟು ಹೋಗಲಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ರಘುಪತಿ ಭಟ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಂಸದೆ ಶೋಭಾ ಕರಂದ್ಲಾಜೆ, ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ, ಮಾಜಿ ಶಾಸಕ ಕೆ.ಶಾಸಕ ಸುನಿಲ್ ಕುಮಾರ್, ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಪಕ್ಷದ ನಾಯಕರಾದ ಉದಯಕುಮಾರ್ ಶೆಟ್ಟಿ, ಶ್ಯಾಮಲಾ ಕುಂದರ್, ರೇಷ್ಮಾ ಉದಯ, ಸುಕುಮಾರ್ ಶೆಟ್ಟಿ, ದಿನಕರ ಬಾಬು, ಶೀಲಾ ಶೆಟ್ಟಿ, ನಯನಾ ಗಣೇಶ್, ಲಾಲಾಜಿ ಮೆಂಡನ್, ಯಶಪಾಲ್ ಸುವರ್ಣ, ಸಂಧ್ಯಾ ರಮೇಶ್, ನಳಿನಿ ಪ್ರದೀಪ್, ಕೆ.ಸುರೇಶ್ ನಾಯಕ್, ಕೆ.ನವೀನ್ ಶೆಟ್ಟಿ ಇದ್ದರು.
ಬ್ರಹ್ಮಾವರದಲ್ಲಿ ನಡೆದ ಬಿಜೆಪಿ ಪರಿವರ್ತನಾ ಯಾತ್ರೆಯಲ್ಲಿ ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಅವರ ಬೆಂಬಲಿಗರು ಬಿಜೆಪಿಗೆ ಸೇರ್ಪಡೆಗೊಂಡರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.