ಬೆಂಗಳೂರು[ಜೂ.17]: ನನ್ನನ್ನು ಮಾಧ್ಯಮಗಳು ತೆಗಳುತ್ತಲೆ ಇರಬೇಕು ಅದೇ ನನಗೆ ಖುಷಿ ಎಂದು ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಮಾಧ್ಯಮಗಳ ಕಾಲೆಳೆದರು.
ಬೆಂಗಳೂರಿನಲ್ಲಿ ಪತ್ರಕರ್ತ ಜಿ.ಬಿ. ಹರೀಶ್ ಅವರ ವೀರ ಸಾವರ್ಕರ್ ಅವರ ಹಿಂದುತ್ವ ಕನ್ನಡ ಅನುವಾದಿತ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ಮಾಧ್ಯಮಗಳು ನನ್ನನ್ನು ಹೊಗಳಿ ಬರೆದರೆ ಹೊಂದಾಣಿಕೆ ಮಾಡಿಕೊಂಡಿದ್ದೀರಾ ಎಂದು ಜನ ನನ್ನನ್ನು ಕೇಳುತ್ತಾರೆ.
ನಾನು ವಿಷಕಂಠ ಪರಂಪರೆಯವನು. ಮಾಧ್ಯಮದವರು ನನ್ನನ್ನು ಬೈಯಲೇ ಬೇಕು. ಬೈಗುಳವನ್ನು ನನ್ನ ಆರಾಧನೆ ಎಂದುಕೊಳ್ಳುವೆ. ಹೆದರಿ ಮಾತು ನಿಲ್ಲಿಸುವ ರಣಹೇಡಿ ನಾನಲ್ಲ. ಅಂತಹ ತಂದೆತಾಯಿಗೆ ನಾನು ಹುಟ್ಟಿಲ್ಲ ಎಂದು ಆಕ್ರೋಶಭರಿತವಾಗಿ ಮಾತನಾಡಿದರು.
ನಾನು ಹಿಂದು ಧೈರ್ಯವಾಗಿ ಸತ್ಯ ಒಪ್ಪಿಕೊಳ್ಳುವೆ
ನಾನು ಹಿಂದೂ, ಯಾರಿಗೂ ಹೆದರಲ್ಲ. ಧೈರ್ಯವಾಗಿ ಸತ್ಯ ಒಪ್ಪಿಕೊಳ್ಳುವೆ. ಬುದ್ಧಿ ಜೀವಿಗಳು ತಮ್ಮ ಬುದ್ದಿಯನ್ನು ವಿದೇಶಗಳಿಗೆ ಮಾರಾಟ ಮಾಡಿಕೊಂಡಿದ್ದಾರೆ. ನಾನು ಜಾತ್ಯಾತೀತ ಅಂದ್ರೆ ಖುಷಿ ಆಗುತ್ತೆ. ಅದೇ ನೀವು ಹಿಂದುಗಳು ಅಂದ್ರೆ ಸಂವಿಧಾನಕ್ಕೆ ಅವಮಾನ.
ಕ್ರಿಶ್ಚಿಯನ್ ಕ್ರಿಶ್ಚಿಯನ್ ಅನ್ನಬಹುದು ,ಮುಸ್ಲಿಮರನ್ನು ಮುಸ್ಲಿಮ ಅಂದ್ರೆ ಖುಷಿ. ಆದರೆ ನಾವು ಹಿಂದೂ ಅನ್ನಬಾರದು. ಹಿಂದುತ್ವದ ಬಗ್ಗೆ ಮಾತನಾಡಿದ್ರೆ ಬುದ್ಧಿಜೀವಿಗಳು ಸಂವಿಧಾನಕ್ಕೆ ಅವಮಾನ ಅಂತಾರೆ. ಬುದ್ಧಿ ಜೀವಿಗಳು ಹಿಂದುತ್ವ ಒಪ್ಪಲ್ಲ.
ಕುರಿಗಳು ನಾವು. ಕುಯ್ ಕುಯ್ ಅಂತ ಮಾತ್ರ ಅನ್ನಬೇಕು. ಬೇರೆ ಶಬ್ಧ ಮಾಡಿದ್ರೆ ಪ್ರಾಣಿ ತರಹ ನಮ್ಮನ್ನ ಕಾಣ್ತಾರೆ. ಒಳ್ಳೆಯದನ್ನ ಕಾಣುವುದೇ ಹಿಂದುಗಳು ಎಂದು ಬುದ್ಧಿಜೀವಿಗಳ ವಿರುದ್ಧ ವಾಗ್ದಾಳಿ ನಡೆಸಿದರು.
ಸಿಂಧು ಹೋಗಿ ಹಿಂದೂ ಆಯ್ತು ಅಂತಾರೆ
ಬುದ್ಧಿಜೀವಿಗಳು ನಾಲಿಗೆ ಹೊರಳದಿದ್ದಕ್ಕೆ ಸಿಂಧೂ ಹೋಗಿ ಹಿಂದೂ ಆಯ್ತು ಅಂತಾರೆ. ಯಾರಿಗೋ ನಾಲಿಗೆ ಹೊರಳಲಿಲ್ಲ ಅಂದ ಮಾತ್ರಕ್ಕೆ ನಾವು ಹಿಂದೂಗಳಾಗ್ತೀವಾ?
ಯಾವಾಗಲೋ ಒಂದು ಬಾರಿ ಅಮೆರಿಕಕ್ಕೆ ಹೋಗಿ ಬರುತ್ತಾರೆ. ಅಲ್ಲಿ ಒಂದು ನಾಲ್ಕು ಪದ ಕಲಿತುಕೊಂಡು ಬಂದು ಮಾತನಾಡುತ್ತಾರೆ.
ಕ್ಯಾಪಟಿಟಿ ಅಂತ ಮಾತನಾಡುವವರು ನಮ್ಮ ದೇಶದ ಬಗ್ಗೆ ಮಾತನಾಡುತ್ತಾರೆ. ಅಂತವರು ನಮ್ಮ ಹಿಂದೂಗಳ ಬಗ್ಗೆ ಮಾತನಾಡ್ತಾರೆ ಈ ಪಂಡಿತರು. ಆರ್ಯರು ಬಂದ್ರು ಅಂತ ಕಾಕಕ್ಕ ಗುಬಕ್ಕನ ಕಥೆ ಹೇಳುತ್ತಾರೆ. ಅದೇ ಕಾಕಣ್ಣ ಗುಬ್ಬಣ್ಣನ ಕಥೆಯನ್ನೇ ಕೇಳಿ ಬೆಳೆದಿದ್ದೇನೆ.
ನಾವು ಎಲ್ಲಿಂದಲೂ ಬಂದವರಲ್ಲ, ಆರ್ಯ ಸಂಸ್ಕೃತಿ ಇಲ್ಲಿಯೇ ಹುಟ್ಟಿದ್ದು. ರಾಜಕಾರಣದಲ್ಲಿ ಹಿಂದುತ್ವವನ್ನು ಬಳಸಿ ವೋಟ್ ಗಳಿಸುತ್ತಿದ್ದಾರೆ ಅನ್ನೋದು ಸರಿಯಲ್ಲ. ಹಿಂದೂ ಧರ್ಮ ರಾಜಕಾರಣಕೊಸ್ಕರ ಇರುವುದಲ್ಲ' ಎಂದು ಬುದ್ಧಿಜೀವಿಗಳ ವಿರುದ್ಧ ಕೆಂಡಕಾರಿದರು.