ರಾಜ್ಯದ 125 ತಾಲೂಕಲ್ಲಿ ಈಗಲೂ ಬರದ ಪರಿಸ್ಥಿತಿ!

Published : Aug 08, 2019, 09:10 AM IST
ರಾಜ್ಯದ 125 ತಾಲೂಕಲ್ಲಿ ಈಗಲೂ ಬರದ ಪರಿಸ್ಥಿತಿ!

ಸಾರಾಂಶ

ರಾಜ್ಯದ 125 ತಾಲೂಕಲ್ಲಿ ಈಗಲೂ ಬರದ ಪರಿಸ್ಥಿತಿ|  30 ಬರಪೀಡಿತ ತಾಲೂಕುಗಳಲ್ಲಿ ಈಗ ಪ್ರವಾಹ

ಬೆಂಗಳೂರು[ಆ.08]: ರಾಜ್ಯದಲ್ಲಿ 2018-19ನೇ ಸಾಲಿನಲ್ಲಿ ರಾಜ್ಯಾದ್ಯಂತ ಮಳೆ ಅಭಾವದಿಂದ ಮುಂಗಾರು ಹಾಗೂ ಹಿಂಗಾರಿನಲ್ಲಿ ಬರಪೀಡಿತ ತಾಲೂಕುಗಳಾಗಿ ಘೋಷಿಸಲಾಗಿದ್ದ 162 ತಾಲೂಕುಗಳಲ್ಲಿ ಸುಮಾರು 30 ತಾಲೂಕುಗಳಲ್ಲಿ ಪ್ರಸ್ತುತ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಹೀಗಿದ್ದರೂ, ಸುಮಾರು 125 ತಾಲೂಕುಗಳಲ್ಲಿ ಈಗಲೂ ಮಳೆ ಅಭಾವ ಮುಂದುವರೆದಿದೆ ಎಂದು ಕಂದಾಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ 100 ತಾಲೂಕು ಹಾಗೂ ಹಿಂಗಾರು ಹಂಗಾಮಿನಲ್ಲಿ 156 ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಿಸಲಾಗಿದೆ. ಹಿಂಗಾರು ಹಾಗೂ ಮುಂಗಾರು ಸೇರಿದಂತೆ ಒಟ್ಟು 162 ತಾಲೂಕುಗಳು ರಾಜ್ಯದಲ್ಲಿ ಪ್ರಸಕ್ತ ಸಾಲಿನಲ್ಲಿ ತೀವ್ರ ಬರ ಪರಿಸ್ಥಿತಿ ಎದುರಿಸಿದ್ದವು.

ಪ್ರಸಕ್ತ ಹಿಂಗಾರು ಹಂಗಾಮಿನಲ್ಲಿ ಬರಪೀಡಿತ ಎಂದು ಘೋಷಿಸಲ್ಪಟ್ಟ156 ತಾಲೂಕುಗಳ ಪೈಕಿ ಪ್ರಸ್ತುತ ಪ್ರವಾಹಕ್ಕೆ ತುತ್ತಾಗಿರುವ ಜಿಲ್ಲೆಗಳಾದ ಬೆಳಗಾವಿಯಲ್ಲಿ 14 ತಾಲೂಕು, ಬಾಗಲಕೋಟೆ 6, ವಿಜಯಪುರ 5, ರಾಯಚೂರು 5, ಉತ್ತರ ಕನ್ನಡ 5, ಶಿವಮೊಗ್ಗ 4, ಕೊಡಗು 3, ಚಿಕ್ಕಮಗಳೂರು 7 ತಾಲೂಕು, ಹಾಸನ 8 ತಾಲೂಕುಗಳೂ ಇದ್ದವು.

ಪ್ರಸ್ತುತ ಈ ಜಿಲ್ಲೆಗಳ ಪ್ರವಾಹ ಪೀಡಿತ ತಾಲೂಕುಗಳ ಪೈಕಿ ಬೆಳಗಾವಿ 9, ಬಾಗಲಕೋಟೆ 4, ವಿಜಯಪುರ 2, ರಾಯಚೂರು 3, ಉತ್ತರ ಕನ್ನಡ 5, ಶಿವಮೊಗ್ಗ 1, ಕೊಡಗು 1, ಚಿಕ್ಕಮಗಳೂರು 4, ಹಾಸನ 3 ತಾಲೂಕುಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಉಳಿದಂತೆ ಬರಪೀಡಿತ ತಾಲೂಕುಗಳು ಎಂದು ಘೋಷಿಸಲಾಗಿದ್ದ ದಕ್ಷಿಣ ಕನ್ನಡ 5 ತಾಲೂಕು, ಉಡುಪಿ 3 ತಾಲೂಕುಗಳಲ್ಲೂ ಉತ್ತಮ ಮಳೆ ದಾಖಲಾಗಿದ್ದರೂ, ಪ್ರವಾಹ ಸ್ಥಿತಿ ಉಂಟಾಗಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಒಟ್ಟು 31 ತಾಲೂಕುಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದರೂ ಬರಪೀಡಿತ ತಾಲೂಕುಗಳ ಪಟ್ಟಿಯಿಂದ ಏಕಾಏಕಿ ತೆಗೆದು ಹಾಕಲು ಸಾಧ್ಯವಿಲ್ಲ. ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ಉಂಟಾಗಿದೆಯೇ ಅಥವಾ ಮಹಾರಾಷ್ಟ್ರದ ಮಳೆ, ಜಲಾಶಯಗಳಿಂದ ಬಿಡುಗಡೆಯಾದ ನೀರಿನ ಪ್ರವಾಹ, ತುಂಬಿ ಹರಿಯುತ್ತಿರುವ ನದಿಯಿಂದ ಉಂಟಾಗಿರುವ ಪ್ರವಾಹ ಉಂಟಾಗಿದೆಯೇ ಎಂಬುದನ್ನು ಅಧ್ಯಯನ ಮಾಡಲಾಗುವುದು. ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದರೆ ತಾಲೂಕಿನಾದ್ಯಂತ ಉತ್ತಮ ಮಳೆಯಾಗಿರುತ್ತದೆ. ಆದರೂ ಯಾವ ಹಂತದಲ್ಲಿ ಮಳೆಯಾಗಿದೆ? ವಾಡಿಕೆಯ ಮಳೆ ದಿನಗಳು ಹಾಗೂ ಮಳೆಯಾದ ದಿನಗಳನ್ನೂ ಅಧ್ಯಯನ ಮಾಡಲಾಗುವುದು. ಒಂದೇ ವರ್ಷದಲ್ಲಿ ಅತಿವೃಷ್ಟಿಹಾಗೂ ಅನಾವೃಷ್ಟಿಎರಡೂ ವಿಭಾಗದಲ್ಲೂ ಸಮಸ್ಯೆ ಎದುರಿಸಿರುವವರಿಗೆ ಪರಿಹಾರ ಕಲ್ಪಿಸಲು ನಿಯಮಗಳಲ್ಲಿ ಅವಕಾಶವಿದೆ ಎಂದು ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅಣ್ಣಾ, ಇನ್ನು ಎಷ್ಟೊತ್ತು ಎಂದ ಗ್ರಾಹಕನಿಗೆ ಇದು ಪ್ಲೇನ್ ಅಲ್ಲ ಅಂದ ಬೆಂಗ್ಳೂರು ಕ್ಯಾಬ್ ಡ್ರೈವರ್!
ಸೊಗಸಾದ ಬಜೆಟ್‌ ಫ್ರೆಂಡ್ಲಿ ಸ್ಮಾರ್ಟ್‌ಫೋನು ಬೇಕಾ? ಇಲ್ಲಿದೆ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ17 5ಜಿ!