
ಬೆಂಗಳೂರು (ಜು.20): ಬಹುಭಾಷೆಯಲ್ಲಿ ಬೆಳ್ಳಿ ತೆರೆ ಮೇಲೆ ಮಿಂಚುತ್ತಿರುವ ನಟ ಕಿಶೋರ್. ರಜನಿಕಾಂತ್, ಕಮಲ್ ಹಾಸನ್, ಪ್ರಕಾಶ್ ರೈ, ಹಾಗು ಕನ್ನಡದ ಬಹುತೇಕ ಸ್ಟಾರ್ ಗಳ ಜೊತೆ ಅಭಿನಯಿಸಿ ತನ್ನದೇ ಐಡೆಂಟಿಟಿ ಕ್ರಿಯೇಟ್ ಮಾಡಿಕೊಂಡಿರುವ ನಟ. ಗಡಸು ಧ್ವನಿ, ಖಡಕ್ ಲುಕ್ ನಿಂದಲೇ ಸ್ಕ್ರೀನ್ ಮೇಲೆ ಮೋಡಿ ಮಾಡುವ ಕಿಶೋರ್, ರಿಯಲ್ ಲೈಫ್ ನಲ್ಲಿ ತುಂಬಾ ಸಿಂಪಲ್. ತಾನೊಬ್ಬ ಸ್ಟಾರ್ ಆಗಿದ್ರೂ ಸರಳವಾಗಿ ಜೀವನವನ್ನ ರೂಪಿಸಿಕೊಂಡಿರುವ ಸಿಂಪಲ್ ನಟ.
ಕನ್ನಡ ಲೆಕ್ಚರರ್ ಆಗಿದ್ದ ಕಿಶೋರ್ ಮೂಲತಃ ರಂಗಭೂಮಿ ಕಲಾವಿದ. ಈ ರಂಗಭೂಮಿಯ ಗೀಳೇ ಸಿನಿಮಾಕ್ಕೆ ಬರೋದಿಕ್ಕೆ ಕಾರಣವಾಗಿದ್ದು. ದೊಡ್ಡ ದೊಡ್ಡ ಸ್ಟಾರ್ ನಟರ ಜೊತೆ ಅಭಿನಯಿಸಿರುವ ಕಿಶೋರ್ ಗೆ ಕೃಷಿ ಅಂದ್ರೆ ಪಂಚಪ್ರಾಣ. ತಮ್ಮ ಬೆಳೆಯನ್ನ ತಾವೇ ಬೆಳೆದುಕೊಳ್ಳಬೇಕು ಅನ್ನೋ ಛಲ. ಈ ಛಲವೇ ಕಿಶೋರ್ ಒಬ್ಬ ಸ್ಟಾರ್ ನಟನಾಗಿದ್ರು ಕೂಡ, ಸಾಮನ್ಯ ರೈತನಂತೆ ವ್ಯವಸಾಯ ಮಾಡುವ ಹಾಗೇ ಮಾಡಿದೆ.
ಕಳೆದ ವರ್ಷ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಕಬಾಲಿ ಸಿನಿಮಾದಲ್ಲಿ, ತಲೈವಾಗೆ ವಿಲನ್ ಆಗಿ ಸಿಲ್ವರ್ ಸ್ಕ್ರೀನ್ ಮೇಲೆ ಅಬ್ಬರಿಸಿದ ಕಿಶೋರ್ ಗೆ ವ್ಯವಸಾಯ ಮಾಡೋದು ಅಂದ್ರೆ ಪಂಚಪ್ರಾಣ. ಮೂಲತಃ ಚನ್ನ ಪಟ್ಟಣದವರಾದ ಕಿಶೋರ್ ರೈತ ಕುಟುಂಬದಿಂದ ಬಂದ ನಟ ಅನ್ನೋದು ಖುಷಿ ಪಡೋ ವಿಷ್ಯ. ಚಿಕ್ಕ ವಯಸ್ಸಿನಿಂದಲೇ ಕೃಷಿ ಮಾಡುವ ಗೀಳು ಅಂಟಿಸಿಕೊಂಡ ಕಿಶೋರ್, ಒಬ್ಬ ಸ್ಟಾರ್ ನಟ ಆದ್ರೂ ಕೂಡ ವ್ಯವಸಾಯ ಮಾಡೋದನ್ನ ಬಿಡಲಿಲ್ಲ. ಅದಕ್ಕೆ ಸಾಕ್ಷಿ ಬನ್ನೇರುಘಟ್ಟ ಸಮೀಪದ ಕರಿಯಪ್ಪನ ದೊಡ್ಡಿ ಗ್ರಾಮದಲ್ಲಿ ಕಿಶೋರ್ ವ್ಯವಸಾಯ ಮಾಡ್ತಾ ಇರೋದು. ನಾನು ಸ್ಟಾರ್ ಅನ್ನೊ ಹಂಗು ಇಲ್ಲದೆ ಕಿಶೋರ್ ಈ ಭೂಮಿಯಲ್ಲಿ ವ್ಯವಸಾಯ ಮಾಡ್ತಾ ಇದ್ದಾರೆ. ಕಿಶೋರ್ ವ್ಯವಸಾಯ ಪ್ರೀತಿಗೆ ಅವರ ಪತ್ನಿ ವಿಶಾಲಾಕ್ಷಿ ಪದ್ಮನಾಭ್ ಕೂಡ ಸಾಥ್ ನೀಡಿದ್ದಾರೆ. ಬಹುಭಾಷ ನಟನಾಗಿದ್ದರೂ ಕಿಶೋರ್ ಕೃಷಿ ಬಗ್ಗೆ ಪಿಎಚ್'ಡಿ ಮಾಡಿದ್ದಾರೇನೊ ಅನ್ನಿಸುತ್ತೆ. ಯಾಕಂದ್ರೆ ವ್ಯವಸಾಯ ಮತ್ತು ರೈತರ ಬಗ್ಗೆ ಕಿಶೋರ್ ಗೆ ಇರೋ ಕಾಳಜಿ, ಎಲ್ಲಿಲ್ಲದ ಪ್ರೀತಿ ಅಂತಾದ್ದು.
ಕಿಶೋರ್ ಮತ್ತು ಪತ್ನಿ ವಿಶಾಲಾಕ್ಷಿ ಪದ್ಮನಾಭ್ ಸರಳತೆ ನೋಡಿದ್ರೆ ಎಂಥವರು ಅಚ್ಚರಿ ಪಡುತ್ತಾರೆ. ಯಾಕಂದ್ರೆ ಈ ದಂಪತಿಗಳು ಸಾಮಾನ್ಯರಂತೆ ಕೃಷಿ ಭೂಮಿಯಲ್ಲಿ ಕೆಲಸ ಮಾಡುತ್ತಾರೆ. ರಾಸಾಯನಿಕದ ಬದಲು ನೈಸರ್ಗಿಕ ಗೊಬ್ಬರವನ್ನ ಬಳಸಿಕೊಳ್ಳೋದು ಹೇಗೆ ಅನ್ನೋದ್ರ ಬಗ್ಗೆ ಕಿಶೋರ್ ತುಂಬಾ ಚೆನ್ನಾಗಿ ಹೇಳುತ್ತಾರೆ. ಕಿಶೋರ್'ನಂತೆ ಅವರ ಪತ್ನಿ ವಿಶಾಲಾಕ್ಷಿ ಕೂಡ ಕೃಷಿಯಲ್ಲಿ ನೆಮ್ಮದಿ ಕಂಡುಕೊಂಡಿದ್ದಾರೆ. ಸಿ ಎ ಓದಿದ್ದರೂ ವಿಶಾಲಾಕ್ಷಿಗೆ ಕೃಷಿ ಬಗ್ಗೆ ಸಾಕಷ್ಟು ಜ್ಞಾನ ಇದೆ. ಅದನ್ನ ಕೃಷಿ ದಂಪತಿಗಳ ಮಾತಲ್ಲೇ ಕೇಳಬೇಕು. ಕಳೆದ ಏಳು ವರ್ಷಗಳಿಂದ ಕೃಷಿ ಮಾಡ್ತಾ ಬಂದಿರೋ ಕಿಶೋರ್ ಮತ್ತು ವಿಶಾಲಾಕ್ಷಿ. ಈ ಜಮೀನಿನಲ್ಲಿ ಹಲವು ಬಗೆಯ ತರಕಾರಿಗಳನ್ನ ಬೆಳೆಯುತ್ತಾರೆ. ಬಂಡೆ ಕಲ್ಲುಗಳಿಂದ ಕೂಡಿದ ಈ ಭೂಮಿಯನ್ನ ಕೃಷಿ ಭೂಮಿ ಮಾಡೋದಕ್ಕೆ ಕಿಶೋರ್ ಮತ್ತು ವಿಶಾಲಾಕ್ಷಿ ತುಂಬಾನೇ ಕಷ್ಟ ಪಟ್ಟಿದ್ದಾರೆ. ದೇಶದ 10 ಪರ್ಸೆಂಟ್ ರೈತರು ತಮ್ಮ ತೋಟದಲ್ಲಿ ಹಣ್ಣು ಹಂಪಲು ಬೆಳೆಯುತ್ತಾರೆ. ಆದ್ರೆ ಅವ್ರು ಬೆಳೆಯುವ ಹಣ್ಣುಗಳಲ್ಲಿ ಔಷಧಿ ಗುಣಗಳು ಇರುತ್ತೆ ಅನ್ನೋದು ಅದೆಷ್ಟೋ ರೈತರಿಗೆ ಗೊತ್ತಿಲ್ಲ.. ಆದ್ರೆ ಕಿಶೋರ್ ದಂಪತಿ ತೋಟದಲ್ಲಿ ಬೆಳೆಯುವ ಹಣ್ಣುಗಳಿಂದ ಔಷಧಿ ಮತ್ತು ವೈನ್ ತಯಾರಿಸುವ ರೀತಿ ನಿಜಕ್ಕು ಅಚ್ಚರಿ ಮೂಡಿಸಿತ್ತು.
ಒಟ್ಟಾರೆ ಕಿಶೋರ್ ಬಹುಭಾಷ ಸ್ಟಾರ್ ಅನ್ನೋ ಪಟ್ಟವನ್ನ ತಲೆಗೆ ಏರಿಸಿಕೊಳ್ಳದೇ, ತೋಟದಲ್ಲಿ ಸಾಮಾನ್ಯ ರೈತನಂತೆ ಕೆಲಸ ಮಾಡುವ ಮೂಲಕ ರೈತರಿಗೆ ಒಂದು ಮಾದರಿಯಾಗಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.