
ಬೆಂಗಳೂರು(ಎ.22): ಆಸ್ಪತ್ರೆಗಳಲ್ಲಿ ಶಸ್ತ್ರಚಿಕಿತ್ಸೆಗೂ ಮುನ್ನ ನೀಡುವ ಅನಸ್ತೇಷಿಯಾ ಇತ್ತೀಚಿಗೆ ರೋಗಿಗಳ ಪಾಲಿಗೆ ಮೃತ್ಯುಪಾಶವಾಗಿ ಪರಿಣಮಿಸುತ್ತಿದೆ. ಇಂತಹದ್ದೊಂದು ಘಟನೆ ನಿನ್ನೆ ಹೆಚ್ ಎಸ್ ಆರ್ ಬಡಾವಣೆಯ ಅಣ್ಣಯ್ಯ ದಂತ ಕ್ಲಿನಿಕ್'ನಲ್ಲಿ ನಡೆದಿದ್ದು, 6 ವರ್ಷದ ಸಂತೋಷ್ ಎಂಬ ಬಾಲಕ ಮೃತಪಟ್ಟಿದ್ದಾನೆ. ಇದಕ್ಕೆ ವೈದ್ಯರು ಹಾಗೂ ಆಸ್ಪತ್ರೆ ಆಡಳಿತ ಮಂಡಳಿ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ ಬಾಲಕನ ಪೋಷಕರು ಹೆಚ್.ಎಸ್.ಆರ್ ಬಡಾವಣೆ ಪೊಲೀಸ್ ಠಾಣೆಯಲ್ಲಿ ದೂರು ನೀಡಲು ನಿರ್ಧರಿಸಿದ್ದಾರೆ.
ಈಜೀಪುರದ ನಿವಾಸಿ ನಿತ್ಯಾನಂದ ಹಾಗೂ ಮುಗೇಶ್ವರಿ ದಂಪತಿಯ ಏಕೈಕ ಪುತ್ರ ಸಂತೋಷ್ ಮೃತಪಟ್ಟ ಬಾಲಕ. ಮೂಗಿನಲ್ಲಿ ಮಾಂಸದ ಗಡ್ಡೆ ಬೆಳೆದಿದ್ದ ಕಾರಣ ಅಣ್ಣಯ್ಯ ದಂತ ಕ್ಲಿನಿಕ್ ನಲ್ಲಿ ಬಾಲಕನಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಕಳೆದ ಮೂರು-ನಾಲ್ಕು ತಿಂಗಳಿಂದ ಚಿಕಿತ್ಸೆ ನೀಡಿದರೂ ಗುಣವಾಗದ ಹಿನ್ನೆಲೆಯಲ್ಲಿ ನಿನ್ನೆ ಕ್ಲಿನಿಕ್ ವೈದ್ಯರು ಬಾಲಕ ಸಂತೋಷ್' ಗೆ ಶಸ್ತ್ರ ಚಿಕಿತ್ಸೆ ಮಾಡಿದ್ದಾರೆ. ಶಸ್ತ್ರ ಚಿಕಿತ್ಸೆಗೂ ಮುನ್ನ ವೈದ್ಯರು ಬಾಲಕ ಸಂತೋಷ್ ಗೆ ಅನಸ್ತೇಷಿಯಾ ನೀಡಿದ್ದಾರೆ. ಅದರ ಪ್ರಮಾಣ ಹೆಚ್ಚಾಗಿದ್ದರಿಂದ ಮಧ್ಯಾಹ್ನದ ವೇಳೆಗೆ ಬಾಲಕನಿಗೆ ಹೃದಯಾಘಾತವಾಗಿ ಮೆದುಳಿನ ಕಾರ್ಯ ಸ್ಥಗಿತವಾಗಿದೆ. ಇದರಿಂದ ಗಲಿಬಿಲಿಗೊಂಡ ವೈದ್ಯರೂ ಕೂಡಲೇ ವೆಂಟಿಲೇಟರ್ ಅಳವಡಿಸಿ ಬಾಲಕನನ್ನು ಕೋರಮಂಗಲದಲ್ಲಿರುವ ಸೆಂಟ್ ಜಾನ್ಸ್ ಆಸ್ಪತ್ರೆಗೆ ಸ್ಥಳಾಂತರಿಸಿದ್ದಾರೆ. ಆದರೆ ಬಾಲಕ ಅಷ್ಟೋತ್ತಿಗಾಗಲೇ ಮೃತಪಟ್ಟಿದ್ದು, ವೈದ್ಯರ ನಿರ್ಲಕ್ಷ್ಯದಿಂದ ಮಗ ಸಾವನ್ನಪ್ಪಿದ್ದಾನೆ ಎಂದು ಬಾಲಕನ ಪೋಷಕರು ದೂರಿದ್ದಾರೆ.
ಈ ಹಿಂದೆ 2013ರ ಫೆ.6 ರಂದು ಹಲ್ಲು ನೋವಿನ ಚಿಕಿತ್ಸೆಗೆ ಹೆಚ್ಚು ಅನಸ್ತೇಷಿಯಾ ನೀಡಿದ್ದರಿಂದ ನಾಲ್ಕು ವರ್ಷದ ಮಗು ಶಿರೀಶ್ ಇದೇ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.