ತೂಕ ಹೆಚ್ಚಿಸಿಕೊಂಡ ದಸರಾ ಆನೆಗಳು!

By Web DeskFirst Published Oct 10, 2019, 12:04 PM IST
Highlights

ವಿಶ್ರಾಂತಿಯಲ್ಲಿದ್ದ ದಸರಾ ಗಜಪಡೆ ಇಂದು ಕಾಡಿಗೆ| ಹುಲಿ ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳಲಿವೆ 3 ಆನೆಗಳು| ತೂಕ ಹೆಚ್ಚಿಸಿಕೊಂಡ ಅಭಿಮನ್ಯು

ಬಿ.ಶೇಖರ್‌ ಗೋಪಿನಾಥಂ

ಮೈಸೂರು[ಅ.10]: ಅಂತೂ ಇಂತೂ 409ನೇ ದಸರಾ ಮಹೋತ್ಸವದ ವಿಜಯದಶಮಿ ಮೆರವಣಿಗೆಯನ್ನು ಯಶಸ್ವಿಗೊಳಿಸಿದ ಗಜಪಡೆಯು ಮೈಸೂರು ಅರಮನೆ ಆವರಣದ ಆನೆ ಬಿಡಾರದಲ್ಲಿ ಬುಧವಾರ ವಿಶ್ರಾಂತಿಯಲ್ಲಿದ್ದವು. ಆನೆ ಮಾವುತರು, ಕಾವಾಡಿಗಳ ಕುಟುಂಬದವರು ಗುರುವಾರ ಮತ್ತೆ ಕಾಡಿಗೆ ಹೋಗುವ ತವಕ, ಸಂತೋಷದಲ್ಲಿ ಇದ್ದರು. ಮರಳಿ ಹಾಡಿಗಳಲ್ಲಿರುವ ತಮ್ಮ ಮನೆಗಳತ್ತ ಹೋಗಲು ಸಿದ್ಧತೆ ಸಹ ಮಾಡಿಕೊಂಡರು.

ಅರಮನೆ ಆವರಣದ ನೀರಿನ ತೊಟ್ಟಿಯಲ್ಲಿ ಆನೆಗಳನ್ನು ಒಂದೊಂದಾಗಿ ಅದರ ಮಾವುತರು ಮತ್ತು ಕಾವಾಡಿಗಳು ತಂದು ಸ್ನಾನ ಮಾಡಿಸುತ್ತಿದ್ದರು. ಸತತ 8 ಬಾರಿ ಅಂಬಾರಿ ಹೊತ್ತ ಅರ್ಜುನ ಆನೆಯನ್ನು ಮಾವುತ ವಿನು ನೀರಿನ ತೊಟ್ಟಿಗೆ ಕರೆದುಕೊಂಡು ಹೋಗಿ ಸ್ನಾನ ಮಾಡಿಸಿದರು. ಇದೇ ಮೊದಲ ಬಾರಿಗೆ ಕಾಡಿನಿಂದ ನಾಡಿಗೆ ದಸರೆಯಲ್ಲಿ ಭಾಗವಹಿಸಲು ಆಗಮಿಸಿದ್ದ ಈಶ್ವರ, ಜಯಪ್ರಕಾಶ್‌ ಮತ್ತು ಲಕ್ಷ್ಮಿ ಆನೆಗಳಿಗೆ ಜಂಬೂಸವಾರಿಯಲ್ಲಿ ಭಾಗವಹಿಸುವ ಅವಕಾಶ ಸಿಗದೇ ಅರಮನೆ ಆನೆ ಬಿಡಾರದಲ್ಲಿ ಉಳಿದುಕೊಂಡಿದ್ದವು.

ಇನ್ನು ಜಂಬೂಸವಾರಿ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಆನೆಗಳಿಗೆ ತೊಡಿಸಲಾಗಿದ್ದ ಛತ್ರಿ, ಆನೆ ಹಣೆಪಟ್ಟಿ, ಜುಲಾ, ಮಾವಿನ ಸರ, ಅರಳಿ ಎಲೆ ಸರ, ಆನೆಗಳ ನಾಮಫಲಕ ಸೇರಿದಂತೆ ವಿವಿಧ ಅಲಂಕಾರಿಕ ವಸ್ತುಗಳನ್ನು, ಮಾವುತರು ಮತ್ತು ಕಾವಾಡಿಗಳ ಸಮವಸ್ತ್ರ , ಟೋಪಿಗಳನ್ನು ಆನೆ ಬಿಡಾರದಲ್ಲಿ ಜೋಡಿಸಿ, ಎಲ್ಲ ವಸ್ತುಗಳ ಇರುವಿಕೆ ಖಚಿತ ಪಡಿಸಿಕೊಂಡ ಬಳಿಕ ಅರಮನೆ ಮಂಡಳಿಗೆ ಅರಣ್ಯ ಇಲಾಖೆಯ ಸಿಬ್ಬಂದಿ ತಲುಪಿಸಿದರು.

3 ಆನೆ ಹೋದವು, ಉಳಿದವು ಇಂದು

ಜಂಬೂಸವಾರಿ ಮುಗಿದ ಮಾರನೆಗೆ ಅಂದರೆ ಬುಧವಾರವೇ ಮೂರು ಆನೆಗಳು ಕಾಡಿಗೆ ಮರಳಿದವು. ಬಂಡೀಪುರ ಅರಣ್ಯ ಪ್ರದೇಶದಲ್ಲಿ ಹುಲಿ ಕಾರ್ಯಾಚರಣೆಯಲ್ಲಿ ಭಾಗವಹಿಸಲು ಅಭಿಮನ್ಯು, ಗೋಪಾಲಸ್ವಾಮಿ ಮತ್ತು ಜಯಪ್ರಕಾಶ್‌ ಆನೆಗಳನ್ನು ಬುಧವಾರ ಸಂಜೆ ಲಾರಿ ಏರಿ ತೆರಳಿದವು. ಉಳಿದ ಹತ್ತು ಆನೆಗಳು ಗುರುವಾರ ಕಾಡಿಗೆ ಹೊರಡಲಿವೆ.

ತೂಕ ಹೆಚ್ಚಳದಲ್ಲಿ ಅಭಿಮನ್ಯು-ಈಶ್ವರ ಸಮಬಲ

ದಸರೆಗೆ ಆಗಮಿಸುವ ಆನೆಗಳನ್ನು ಅರಣ್ಯ ಇಲಾಖೆ ವತಿಯಿಂದ ಬರುವಾಗ ಹಾಗೂ ಹೊಗುವಾಗ ತೂಕ ಪರಿಶೀಲಿಸಲಾಗುತ್ತದೆ. ಈ ಬಾರಿ ಮೊದಲ ತಂಡದಲ್ಲಿ ಆಗಮಿಸಿದ 6 ಆನೆಗಳನ್ನು ಬಂದಾಗ ತೂಕ ಪರಿಶೀಲಿಸಲಾಗಿತ್ತು. ಗರ್ಭಿಣಿಯಾದ ವರಲಕ್ಷ್ಮಿ ಆನೆಯು ಕಾಡಿಗೆ ವಾಪಸ್‌ ಆಗಿದ್ದರಿಂದ ಮೊದಲ ತಂಡದ 5 ಆನೆಗಳ ತೂಕ ಪರೀಕ್ಷಿಸಲಾಯಿತು.

ಗಜಪಡೆಯ ತೂಕ ವಿವರ (ಕೆ.ಜಿ.ಗಳಲ್ಲಿ)

 

click me!