Cricket: ಒಂದೇ ದಿನ ಎರಡು ದೇಶಗಳಲ್ಲಿ ಕಣಕ್ಕಿಳಿಯಲಿದೆ ಭಾರತ! 28 ವರ್ಷಗಳ ಬಳಿಕ ಮರುಕಳಿಸಲಿದೆ ಅಪರೂಪದ ಇತಿಹಾಸ!

Published : Sep 07, 2026, 08:13 PM IST
Team India

ಸಾರಾಂಶ

ಭಾರತೀಯ ಕ್ರೀಡಾಭಿಮಾನಿಗಳಿಗೆ ಅಪರೂಪದ ದಿನ ಎದುರಾಗಲಿದೆ. ಅಂದು ಭಾರತ ಒಂದೇ ದಿನ ಎರಡು ವಿಭಿನ್ನ ದೇಶಗಳಲ್ಲಿ ಕಣಕ್ಕಿಳಿಯಲಿದೆ. ಈ ಅಪರೂಪದ ವೇಳಾಪಟ್ಟಿಯ ಸಂಪೂರ್ಣ ವಿವರನ್ನೊಮ್ಮೆ ನೋಡಿಕೊಂಡು ಬರೋಣ ಬನ್ನಿ.

ಅಕ್ಟೋಬರ್ 3, 2026 ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಸುವರ್ಣ ಅಕ್ಷರಗಳಲ್ಲಿ ಬರೆದಿಡುವ ದಿನವಾಗಲಿದೆ. ಈ ಒಂದೇ ದಿನದಂದು ಭಾರತದ ಎರಡು ಪ್ರತ್ಯೇಕ ಪುರುಷರ ಕ್ರಿಕೆಟ್ ತಂಡಗಳು ಎರಡು ವಿಭಿನ್ನ ದೇಶಗಳಲ್ಲಿ ಮೈದಾನಕ್ಕಿಳಿದು ಪಂದ್ಯಗಳನ್ನು ಆಡಲಿವೆ. ಒಂದು ತಂಡ ಭಾರತದ ಚಂಡೀಗಢ ಸಮೀಪದ ಮುಲ್ಲನ್‌ಪುರದಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಪಂದ್ಯದಲ್ಲಿ ಸೆಣಸಿದರೆ, ಮತ್ತೊಂದು ತಂಡ ಜಪಾನ್‌ನಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್‌ನ ಪದಕದ ಪಂದ್ಯದಲ್ಲಿ ಭಾರತವನ್ನು ಪ್ರತಿನಿಧಿಸಲಿದೆ.

ಯಾವಾಗ ಮ್ಯಾಚ್? 

ವೆಸ್ಟ್ ಇಂಡೀಸ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯ ಅಂತಿಮ ಹಾಗೂ ನಿರ್ಣಾಯಕ ಪಂದ್ಯವು ಅಕ್ಟೋಬರ್ 3 ರಂದು ಮಧ್ಯಾಹ್ನ 2 ಗಂಟೆಗೆ ಮುಲ್ಲನ್‌ಪುರದಲ್ಲಿ ಪ್ರಾರಂಭವಾಗಲಿದೆ. ಅದೇ ದಿನ ಜಪಾನ್‌ನಲ್ಲಿ ನಡೆಯುತ್ತಿರುವ ಏಷ್ಯನ್ ಕ್ರೀಡಾಕೂಟದ ಪುರುಷರ ಕ್ರಿಕೆಟ್ ವಿಭಾಗದ ಕಂಚಿನ ಮತ್ತು ಚಿನ್ನದ ಪದಕಕ್ಕಾಗಿ ಪಂದ್ಯಗಳು ನಡೆಯಲಿವೆ. ಭಾರತ ತಂಡವು ಫೈನಲ್ ತಲುಪಿದರೆ ಚಿನ್ನದ ಪದಕಕ್ಕಾಗಿ, ಇಲ್ಲವಾದರೆ ಕಂಚಿನ ಪದಕಕ್ಕಾಗಿ ಅಕ್ಟೋಬರ್ 3 ರಂದೇ ಕಣಕ್ಕಿಳಿಯಲಿದೆ. ಹಾಲಿ ಚಾಂಪಿಯನ್ ಆಗಿರುವ ಭಾರತ ತಂಡವು ನೇರವಾಗಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದು, ಸೆಪ್ಟೆಂಬರ್ 28 ರಂದು ತನ್ನ ಮೊದಲ ಪಂದ್ಯವನ್ನು ಆಡಲಿದೆ.

ತಂಡವ್ನು ಯಾರು ಮುನ್ನಡೆಸಲಿದ್ದಾರೆ?

ಏಷ್ಯನ್ ಗೇಮ್ಸ್‌ಗಾಗಿ ಭಾರತೀಯ ಕ್ರಿಕೆಟ್ ಮಂಡಳಿಯು ಬಲಶಾಲಿ ಪಡೆ ಹಾಗೂ ಹೊಸ ನಾಯಕನನ್ನು ಘೋಷಿಸಿದೆ. ಶ್ರೇಯಸ್ ಅಯ್ಯರ್ ಈ ತಂಡವನ್ನು ಮುನ್ನಡೆಸಲಿದ್ದು, ತಂಡದಲ್ಲಿ ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್, ಇಶಾನ್ ಕಿಶನ್, ತಿಲಕ್ ವರ್ಮಾ, ಶಿವಂ ದುಬೆ, ನಿತೀಶ್ ಕುಮಾರ್ ರೆಡ್ಡಿ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ವರುಣ್ ಚಕ್ರವರ್ತಿ, ರವಿ ಬಿಷ್ಣೋಯ್, ಜಸ್ಪ್ರೀತ್ ಬುಮ್ರಾ ಮತ್ತು ಹರ್ಷಿತ್ ರಾಣಾ ಅವರಂತಹ ಸ್ಟಾರ್ ಆಟಗಾರರಿದ್ದಾರೆ.

28 ವರ್ಷಗಳ ನಂತರ ಬಂದ ಆ ದಿನ!

ಭಾರತೀಯ ಕ್ರಿಕೆಟ್‌ನಲ್ಲಿ ಒಂದೇ ದಿನ ಎರಡು ಬೇರೆ ಬೇರೆ ದೇಶಗಳಲ್ಲಿ ಎರಡು ಪಂದ್ಯಗಳನ್ನು ಆಡುತ್ತಿರುವ ಈ ಅಪರೂಪದ ಕಾಕತಾಳೀಯವು ಬರೋಬ್ಬರಿ 28 ವರ್ಷಗಳ ನಂತರ ಮರುಕಳಿಸುತ್ತಿದೆ. ಇದಕ್ಕೂ ಮೊದಲು ಸೆಪ್ಟೆಂಬರ್ 12, 1998 ರಂದು ಭಾರತೀಯ ಕ್ರಿಕೆಟ್ ತಂಡವು ಒಂದೇ ದಿನದಲ್ಲಿ ಇಂತಹ ಎರಡು ಭಿನ್ನ ಪಂದ್ಯಗಳನ್ನು ಆಡಿತ್ತು. ಅಂದು ಸಚಿನ್ ತೆಂಡೂಲ್ಕರ್, ಅನಿಲ್ ಕುಂಬ್ಳೆ, ಅಜಯ್ ಜಡೇಜಾ ಹಾಗೂ ವಿ.ವಿ.ಎಸ್. ಲಕ್ಷ್ಮಣ್ ಅವರನ್ನೊಳಗೊಂಡ ತಂಡವು ಕೌಲಾಲಂಪುರದಲ್ಲಿ ನಡೆದ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಕೆನಡಾ ವಿರುದ್ಧ ಆಡಿ 112 ರನ್‌ಗಳ ಭರ್ಜರಿ ಗೆಲುವು ಸಾಧಿಸಿತ್ತು. ಅನಿಲ್ ಕುಂಬ್ಳೆ ಕೇವಲ 11 ರನ್ ನೀಡಿ 4 ವಿಕೆಟ್ ಕಬಳಿಸಿ ಕೆನಡಾವನ್ನು 45 ರನ್‌ಗಳಿಗೆ ಆಲೌಟ್ ಮಾಡಿದ್ದರು.

ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದೆ ಕ್ರಿಕೆಟ್‌ ಲೋಕ!

ಅದೇ ದಿನ, ಮೊಹಮ್ಮದ್ ಅಜರುದ್ದೀನ್ ನಾಯಕತ್ವದ ಮತ್ತೊಂದು ಭಾರತ ತಂಡವು ಕೆನಡಾದ ಟೊರೊಂಟೊದಲ್ಲಿ ನಡೆದ ಸಹಾರಾ ಫ್ರೆಂಡ್‌ಶಿಪ್ ಕಪ್‌ನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಸೆಣಸಾಡಿತ್ತು. ಸೌರವ್ ಗಂಗೂಲಿ, ನವಜೋತ್ ಸಿಂಗ್ ಸಿಧು, ಜಾವಗಲ್ ಶ್ರೀನಾಥ್ ಮತ್ತು ಅಜಿತ್ ಅಗರ್ಕರ್ ಅವರಿದ್ದ ಈ ಪಡೆಯು ಪಾಕಿಸ್ತಾನವನ್ನು 6 ವಿಕೆಟ್‌ಗಳಿಂದ ಧೂಳೀಪಟ ಮಾಡಿತ್ತು. ಇದೀಗ 2026 ರಲ್ಲಿ ಮತ್ತೆ ಅದೇ ಮಾದರಿಯ ಐತಿಹಾಸಿಕ ಕ್ಷಣಕ್ಕೆ ಕ್ರಿಕೆಟ್ ಲೋಕ ಸಾಕ್ಷಿಯಾಗಲಿದೆ.

PREV
Read more Articles on
click me!

Recommended Stories

FD: ಬ್ಯಾಂಕ್ ಆಫ್ ಬರೋಡಾ ಎಫ್‌ಡಿ ದರಗಳ ವಿವರ: 444 ದಿನಗಳ ಯೋಜನೆಯಲ್ಲಿ ಗ್ರಾಹಕರಿಗೆ ಸಿಗಲಿದೆ ಆಕರ್ಷಕ ಬಡ್ಡಿ!
Long Time Investment: ಈ ವರ್ಷ 1 ಲಕ್ಷ ರೂಪಾಯಿ ಚಿನ್ನ ತೆಗೆದುಕೊಂಡದರೆ 2050ರಲ್ಲಿ ಎಷ್ಟು ಹಣ ಆಗುತ್ತೆ?