
ಗಂಗಾವತಿ (ಅ.18) ಕನ್ನಡಿಗರಲ್ಲಿ ಹಾಸ್ಯದ ಹೊನಲು ಹರಿಸುತ್ತಾ ದೇಶ ವಿದೇಶದಲ್ಲಿ ಅತ್ಯಂತ ಜನಪ್ರಿಯವಾಗಿರುವ ಹಾಸ್ಯ ಭಾಷಣಕಾರ ಗಂಗಾವತಿ ಪ್ರಾಣೇಶ್ ತಾಯಿ ಇಂದು ನಿಧನರಾಗಿದ್ದಾರೆ. ತಾಯಿ ಸತ್ಯವತಿಬಾಯಿ ಅಗಲಿಗೆ ನೋವನ್ನು ಗಂಗಾವತಿ ಪ್ರಾಣೇಶ್ ತೋಡಿಕೊಂಡಿದ್ದಾರೆ. ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರುವ ಗಂಗಾವತಿ ಪ್ರಾಣೇಶ್, ನಾನು ಕಲಾವಿದನಾಗಿದ್ದು ತಾಯಿಯಿಂದ. ನನ್ನ ಬದುಕಿನ ಸ್ಪೂರ್ತಿ ನನ್ನ ತಾಯಿ. ಆದರೆ ತಾಯಿ ನಮ್ಮನ್ನು ಅಗಲಿದ್ದಾರೆ ಎಂದು ಗಂಗಾವತಿ ಪ್ರಾಣೇಶ್ ಹೇಳಿದ್ದಾರೆ.
ನನ್ನ ತಾಯಿ ಇಂದು ದೈಹಿಕವಾಗಿ ನಮ್ಮನ್ನು ಅಗಲಿದ್ದಾರೆ. ಕೈಹಿಡಿದು ನಡೆಸಿ, ಬದುಕಿನ ಪಾಠ ಹೇಳಿಕೊಟ್ಟಿದ್ದ ನನ್ನಮ್ಮ ನನ್ನ ಸ್ಪೂರ್ತಿ. ಅವರಿಂದಲೇ ನಾನು ಓದುವ ಆಸಕ್ತಿ ಬೆಳೆಸಿಕೊಂಡಿದ್ದು, ಮಾತನಾಡಲು ಕಲಿತಿದ್ದು ,ಕಲಾವಿದನೆನಿಸಿಕೊಂಡಿದ್ದು ಎಂದು ಗಂಗಾವತಿ ಪ್ರಾಣೇಶ್ ಪೋಸ್ಟ್ ಮಾಡಿದ್ದಾರೆ.
ಗಂಗಾವತಿ ಪ್ರಾಣೇಶ್ ಹಲವು ಬಾರಿ ವೇದಿಕೆಗಳಲ್ಲಿ ತಾವು ಬೀಚಿಸಾಹಿತ್ಯದಿಂದ ಪ್ರಬಾವಿತರಾಗಿರುವುದಾಗಿ ಹೇಳಿಕೊಂಡಿದ್ದಾರೆ. ಹಳ್ಳಿ ಸೊಗಡು, ಆಧುನಿಕತೆ, ಜಂಜಾಟದ ಜೀವನಗಳ ನಡುವಿನ ಹಾಸ್ಯವನ್ನು ಜನರಿಗೆ ಉಣಬಡಿಸುತ್ತಿರುವ ಗಂಗಾವತಿ ಪ್ರಾಣೇಶ್ ಕನ್ನಡದ ಅತ್ಯಂತ ಜನಪ್ರಿಯ ಕಲಾವಿದ. ಕರ್ನಾಟಕದಲ್ಲಿ ಮಾತ್ರವಲ್ಲ, ದೇಶ ವಿದೇಶಗಳಲ್ಲಿ ಕಾರ್ಯಕ್ರಮ ನೀಡುತ್ತಾ ಜನರನ್ನು ಹಾಸ್ಯದ ಕಡಲಲ್ಲಿ ತೇಲಿಸುವ ಗಂಗಾವತಿ ಪ್ರಾಣೇಶ್, ಹೊಸ ಅಲೆ ಸೃಷ್ಟಿಸಿದ್ದಾರೆ.
ಉತ್ತರ ಕರ್ನಾಟಕದಲ್ಲಿ ಹಾಸ್ಯ ಕಾರ್ಯಕ್ರಮಗಳನ್ನು ಆಯೋಜಿಸಿ, ಇದೀಗ ದೇಶ ವಿದೇಶದಲ್ಲೇ ಪ್ರಖ್ಯಾತಿಗಳಿಸಿರುವ ಗಂಗಾವತಿ ಪ್ರಾಣೇಶ್ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೂ ಭಾಜನರಾಗಿದ್ದಾರೆ. ಗಂಗಾವತಿ ಪ್ರಾಣೇಶ್ ಅವರ ಹಾಸ್ಯದ ಹಲವು ಕ್ಯಾಸೆಟ್, ಸಿಡಿ ಹಾಗೂ ಡಿವಿಡಿಗಳು ಲಭ್ಯವಿದೆ. ನಗಿಸುವ ನೋವುಗಳು ಅನ್ನೋ ಪುಸ್ತಕವನ್ನು ಬರೆದಿದ್ದಾರೆ.