ವೈದ್ಯೆಗೆ ವಂಚಿಸಿದವನೀಗ ಪೊಲೀಸರ ಅತಿಥಿ

By Kannadaprabha NewsFirst Published Feb 9, 2020, 7:42 AM IST
Highlights

ವೈದ್ಯೆಯೋರ್ವರನ್ನು ಪರಿಚಯಿಸಿಕೊಂಡು ವಂಚಿಸಿದವನು ಈಗ ಪೊಲೀಸರ ಅತಿಥಿಯಾಗಿದ್ದಾನೆ.  ಮಾಗಡಿ ರಸ್ತೆ ಠಾಣೆ ಪೊಲೀಸರು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಬೆಂಗಳೂರು [ಫೆ.09]:  ವೈದ್ಯರೊಬ್ಬರಿಗೆ ಹೆಚ್ಚುವರಿ ವಿದ್ಯಾಭ್ಯಾಸಕ್ಕೆ ಬೆಂಗಳೂರಿನಲ್ಲಿ ವೈದ್ಯಕೀಯ ಸೀಟು ಕೊಡಿಸುವುದಾಗಿ ವ್ಯಕ್ತಿಯೊಬ್ಬ ಐದು ಲಕ್ಷ ಹಣ ಪಡೆದು ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.

ಈ ಸಂಬಂಧ ವೈದ್ಯೆ ರಂಜಿನಿ (ಹೆಸರು ಬದಲಾಯಿಸಲಾಗಿದೆ) ಎಂಬುವರು ಕೊಟ್ಟದೂರಿನ ಮೇರೆಗೆ ರಾಜ್‌ದೇಬಾನರ್‌ (35) ಎಂಬಾತನನ್ನು ಮಾಗಡಿ ರಸ್ತೆ ಠಾಣೆ ಪೊಲೀಸರು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಆರೋಪಿ ರಾಜ್‌ದೇಬಾನರ್‌ ಮೂಲತಃ ಪಶ್ಚಿಮ ಬಂಗಾಳ ರಾಜ್ಯದವನಾಗಿದ್ದು, ಕೆಲ ವರ್ಷಗಳಿಂದ ಸರ್ಜಾಪುರದಲ್ಲಿ ನೆಲೆಸಿದ್ದಾನೆ. ‘ಡಿ ಫಾಮ್‌ರ್‍’ ಮಾಡಿಕೊಂಡಿರುವ ಆರೋಪಿ ಇವೆಂಟ್‌ ಮ್ಯಾನೇಜ್‌ಮೆಂಟ್‌ ಕೆಲಸ ಮಾಡಿಕೊಂಡಿದ್ದ. ರಂಜಿನಿ ಅವರು ಖಾಸಗಿ ಆಸ್ಪತ್ರೆಯಲ್ಲಿ ವೈದ್ಯೆಯಾಗಿದ್ದು, ಹೆಚ್ಚಿನ ವಿದ್ಯಾಭ್ಯಾಸ ಡಿಎನ್‌ಬಿ ವ್ಯಾಸಂಗ ಮಾಡಲು ಮುಂದಾಗಿದ್ದರು. ಈ ವಿಚಾರ ತಿಳಿದ ಆರೋಪಿ ರಂಜಿನಿ ಅವರನ್ನು ಪರಿಚಯಿಸಿಕೊಂಡಿದ್ದ. 

ಮತ್ತೊಬ್ಬನ ಜೊತೆ ಪ್ರೇಯಸಿ ಎಂಗೇಜ್ಡ್ : ಡೆತ್ ನೋಟ್ ಬರೆದಿಟ್ಟು ಪ್ರಿಯಕರ ಸೂಸೈಡ್.

ಬೆಂಗಳೂರಿನಲ್ಲಿ ಸೀಟು ಕೊಡಿಸುವುದಾಗಿ ನಂಬಿಸಿದ್ದ ಆರೋಪಿ 2018ರಲ್ಲಿ  30 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದ. ಮುಂಗಡವಾಗಿ ಆರೋಪಿ ವೈದ್ಯರಿಂದ ಐದು ಲಕ್ಷ ಹಣ ಪಡೆದಿದ್ದ. ವೈದ್ಯರು ಪ್ರವೇಶಾತಿ ಪರೀಕ್ಷೆ ಬರೆದಿದ್ದು, ಫಲಿತಾಂಶ ಹೊರ ಬಿದ್ದಿತ್ತು. ಪರೀಕ್ಷೆಯಲ್ಲಿ ಉತ್ತೀರ್ಣ ಮಾಡಿಸಿ ಸೀಟು ಕೊಡಿಸುವುದಾಗಿ ಹೇಳಿದ್ದಂತೆ ವೈದ್ಯೆ ಉತ್ತೀರ್ಣ ಆಗಿರಲಿಲ್ಲ. ಆರೋಪಿಯನ್ನು ಹಣ ವಾಪಸ್‌ ಕೇಳಲು ಮಾಡಿದಾಗ ಸಂಪರ್ಕಕ್ಕೆ ಸಿಗುತ್ತಿರಲಿಲ್ಲ. 

ಹೀಗಾಗಿ ವಂಚನೆಯಾಗಿರುವುದನ್ನು ತಿಳಿದು ದೂರು ನೀಡಿದ್ದಾರೆ. ಅದರಂತೆ ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿಗೆ ಇಂಗ್ಲಿಷ್‌ ಭಾಷೆಯಲ್ಲಿ ಹಿಡಿತವಿದೆ. ಆತನಿಗೆ ಯಾವ ಸಂಪರ್ಕವೂ ಇಲ್ಲ. ಸುಲಭವಾಗಿ ಹಣ ಸಂಪಾದನೆ ಮಾಡುವ ಉದ್ದೇಶದಿಂದ ಕೃತ್ಯಕ್ಕೆ ಇಳಿದಿದ್ದ ಎಂದು ಪೊಲೀಸರು ತಿಳಿಸಿದರು.

click me!