ನೆಹರು ಕುರಿತ ಹೇಳಿಕೆ : ನನ್ನ ಮಾತಿಗೆ ಈಗಲೂ ಬದ್ಧವೆಂದ ಸಂತೋಷ್

By Web DeskFirst Published Aug 25, 2019, 12:01 PM IST
Highlights

ಭಾರತೀಯ ಸೈನಿಕರಲ್ಲಿ ಕಂಡು ಬರುವ ಧೈರ್ಯವನ್ನು ಜಗತ್ತಿನ ಯಾವ ದೇಶದ ಸೈನಿಕರಲ್ಲೂ ಕಾಣಲು ಸಾಧ್ಯವಿಲ್ಲ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ರಾಷ್ಟ್ರೀಯ ಹೆದ್ದಾರಿಗಳ ರಾಜ್ಯ ಸಚಿವ ನಿವೃತ್ತ ಜನರಲ್ ವಿ.ಕೆ.ಸಿಂಗ್ ಹೇಳಿದರು.

ಬೆಂಗಳೂರು [ಆ.25]:  ಭಾರತೀಯ ಸೈನಿಕರಲ್ಲಿ ಕಂಡು ಬರುವ ಧೈರ್ಯವನ್ನು ಜಗತ್ತಿನ ಯಾವ ದೇಶದ ಸೈನಿಕರಲ್ಲೂ ಕಾಣಲು ಸಾಧ್ಯವಿಲ್ಲ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ರಾಷ್ಟ್ರೀಯ ಹೆದ್ದಾರಿಗಳ ರಾಜ್ಯ ಸಚಿವ ನಿವೃತ್ತ ಜನರಲ್ ವಿ.ಕೆ.ಸಿಂಗ್ ಹೇಳಿದರು. ನಗರದ ಪುರಭವನದಲ್ಲಿ ಶನಿವಾರ ಲೇಖಕ ಸಂತೋಷ್ ತಮ್ಮಯ್ಯ ಅವರ ‘ಸಮರ ಭೈರವಿ’ ಪುಸ್ತಕ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಭಾರತೀಯ ಸೈನ್ಯಕ್ಕೆ ಕರ್ನಾಟಕದ ಕೊಡುಗೆ ಅಪಾರವಾಗಿದೆ. ಫೀಲ್ಡ್‌ಮಾರ್ಷಲ್ ಕೆ.ಎಂ.ಕಾರ್ಯಪ್ಪ ಮತ್ತು ಜನರಲ್ ಕೆ.ಎಸ್.ತಿಮ್ಮಯ್ಯ ಭಾರತೀಯ ಸೈನ್ಯಕ್ಕೆ ನಾಯಕತ್ವ ನೀಡಿದ್ದರು. ಧೈರ್ಯ ಎಂಬುದು ದೈಹಿಕವಾದುದ್ದಲ್ಲ. ಅದು ಮನಸ್ಸಿನಲ್ಲಿ ಮೂಡುವಂತದ್ದು ಎಂದರು. ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್, ಮಾಜಿ ಐಪಿಎಸ್ ಅಧಿಕಾರಿ ಕೆ.ಅಣ್ಣಾಮಲೈ, ಸುವರ್ಣ ಸುದ್ದಿ ವಾಹಿನಿಯ ಸುದ್ದಿ ಮತ್ತು ಕಾರ್ಯಕ್ರಮ ವಿಭಾಗದ ಮುಖ್ಯಸ್ಥ ಅಜಿತ್ ಹನಮಕ್ಕನವರ್ ಉಪಸ್ಥಿತರಿದ್ದರು.

ನನ್ನ ಮಾತಿಗೆ ಈಗಲೂ ಬದ್ಧ

ಇದೇ ವೇಳೆಮಾತನಾಡಿದ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್,  ದೇಶದ ಮೊದಲ ಪ್ರಧಾನಿ ನೆಹರು ಮಾಡಿದ ಯಡವಟ್ಟುಗಳನ್ನು ಸರಿಪಡಿಸಲು ಪ್ರಧಾನಿ ಮೋದಿ ಬರಬೇಕಾಯಿತು ಎಂಬ ತಮ್ಮ ಹೇಳಿಕೆಗೆ ಬದ್ಧನಾಗಿರುವು ದಾಗಿ  ಹೇಳಿದರು. 

ಕಾರ್ಯಕ್ರಮ ಒಂದರಲ್ಲಿ ಪ್ರಧಾನಿ ನೆಹರು ಜಮ್ಮು- ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿ ರದ್ದುಗೊಳಿಸಲು ಮೋದಿ ಬರಬೇಕಾಯಿತು ಎಂದಿದ್ದೆ. ಇದಕ್ಕೆ ಕಾಂಗ್ರೆಸ್ ನಾಯಕರು ಆರ್‌ಆರ್‌ಎಸ್ ಹಾಗೂ ಸಂತೋಷ್ ಇತಿಹಾಸ ತಿಳಿಯಲಿ ಎಂದಿದ್ದಾರೆ. ಅವರಿಂದ ತಿಳಿಯುವ ಅಗತ್ಯವಿಲ್ಲ ಎಂದು ತಿರುಗೇಟು ನೀಡಿದರು.

click me!