ಕೊಪ್ಪಳ ರೈತನ ಹೊಲದಲ್ಲಿ ಬೆಳೆದ ಜಪಾನಿನ ಪ್ರಸಿದ್ಧ ಮಿಯಾ ಜಾಕಿ ಮಾವು, ದುಬಾರಿ ಹಣ್ಣಿಗೆ ಮಾರುಕಟ್ಟೆಯದ್ದೇ ಚಿಂತೆ!

Published : Apr 25, 2026, 03:27 PM IST
Miyazaki Mango

ಸಾರಾಂಶ

ಕೊಪ್ಪಳ ತಾಲೂಕಿನ ರೈತ ನಾಗಪ್ಪ ಬಗನಾಳ ಅವರು, ಜಪಾನ್ ಮೂಲದ ಮತ್ತು ವಿಶ್ವದ ಅತ್ಯಂತ ದುಬಾರಿ ಎನಿಸಿದ ಮಿಯಾ ಜಾಕಿ ಮಾವನ್ನು ತಮ್ಮ ಹೊಲದಲ್ಲಿ ಯಶಸ್ವಿಯಾಗಿ ಬೆಳೆದಿದ್ದಾರೆ. ತೋಟಗಾರಿಕಾ ಇಲಾಖೆಯ ಪ್ರೇರಣೆಯಿಂದ ಸಸಿಗಳನ್ನು ತರಿಸಿ ಬೆಳೆಸಿದ ಅವರು, ಈಗ ಉತ್ತಮ ಫಸಲು ಪಡೆದಿದ್ದು, ಅಂತರಾಷ್ಟ್ರೀಯ ಮಾರುಕಟ್ಟೆಯ ಹುಡುಕಾಟದಲ್ಲಿದ್ದಾರೆ.

ವರದಿ: ಸೋಮರಡ್ಡಿ ಅಳವಂಡಿ ಕೊಪ್ಪಳ

ಜಗತ್ತಿನ ದುಬಾರಿ ಮಾವು ಎಂದೇ ಪ್ರಸಿದ್ಧಿಯಾಗಿರುವ ಜಪಾನ್ ಮೂಲದ ಮಿಯಾ ಜಾಕಿ ಮಾವು ಕೊಪ್ಪಳದ ರೈತನೋರ್ವ ಬೆಳೆದಿದ್ದು, ಅದು ಈಗ ಬಂಪರ್ ಬೆಳೆ ಬಂದಿದೆ. ಕೊಪ್ಪಳ ತೋಟಗಾರಿಕಾ ಇಲಾಖೆ ಹಣ್ಣು ಮಾರಾಟ ಮೇಳದಲ್ಲಿ ಪ್ರದರ್ಶನಕ್ಕೆ ಇಟ್ಟಿದ್ದ ಮಿಯಾಜಾಕಿ ಮಾವು ನೋಡಿ ಪ್ರೇರಣೆಗೊಂಡ ರೈತ ನಾಗಪ್ಪ ಬಗನಾಳ ಕೊಪ್ಪಳ ತಾಲೂಕಿನ ಕಲ್‌ ತಾವರಗೇರಾ ಗ್ರಾಮದಲ್ಲಿರುವ ತಮ್ಮ ಹೊಲದಲ್ಲಿ ಬೆಳೆದಿದ್ದಾರೆ.

ಜಪಾನ್ ಮೂಲದ ಮಾವು ಕೊಪ್ಪಳ ತಾಲೂಕಿನಲ್ಲಿ ಯಶಸ್ವಿಯಾಗಿ ಬೆಳೆದಿರುವ ವಿಚಾರ ತೋಟಗಾರಿಕಾ ವಲಯದಲ್ಲಿ ಭಾರಿ ಚರ್ಚೆಯಾಗುತ್ತಿದೆ. ಬೇರೆ ಬೇರೆ ರೈತರು ನಾಗಪ್ಪ ಬಗನಾಳ ಅವರ ಹೊಲಕ್ಕೆ ಬಂದು ನೋಡಿಕೊಂಡು ಹೋಗುತ್ತಿದ್ದಾರೆ.

ಒಂದು ಗಿಡಕ್ಕೆ ₹1300 ರೂ

ಮೂರು ವರ್ಷಗಳ ಹಿಂದೆ ದೆಹಲಿಯಿಂದ ರೈಲು ಮೂಲಕ 200 ಮಿಯಾಜಾಕಿ ಮಾವು ಸಸಿಯನ್ನು ನಾಗಪ್ಪ ಬಗನಾಳ ತರಿಸಿದ್ದರು. ಪ್ರತಿ ಸಸಿಗೆ ₹1300 ನೀಡಿದ್ದಾರೆ. ನಾಟಿ ಮಾಡಿದ ಬಳಿಕ 20 ಸಸಿಗಳು ಸತ್ತವು. 180 ಮಿಯಾಜಾಕಿ ಮಾವಿನ ಗಿಡಗಳು ಭರ್ಜರಿಯಾಗಿ ಬೆಳೆದು ನಿಂತಿವೆ. ಈ ಪೈಕಿ ಈ ವರ್ಷ ಒಂದಷ್ಟು ಗಿಡಗಳು ಫಸಲು ನೀಡಿವೆ.

ಇದಕ್ಕೆ ಪ್ರತ್ಯೇಕ ಉಪಚಾರವೇನೂ ಮಾಡಿಲ್ಲ, ಆದರೆ, ಮಾವು ಬೆಳೆಯಲು ಅನುಸರಿಸುವ ಕ್ರಮ ಕೈಗೊಂಡಿದ್ದೇವೆ. ಸರಿಯಾದ ಗೊಬ್ಬರ ಬಳಕೆ ಮಾಡಿ, ನಿರ್ವಹಣೆ ಮಾಡಿದ್ದರಿಂದ ನಮ್ಮ ನಿರೀಕ್ಷೆ ಮೀರಿ ಮಿಯಾ ಜಾಕಿ ಮಾವು ಬೆಳೆದಿದೆ ಎನ್ನುತ್ತಾರೆ ಅವರು.

ಮಾರುಕಟ್ಟೆ ಸವಾಲು:ಮಾರುಕಟ್ಟೆಯದ್ದೆ ದೊಡ್ಡ ಸವಾಲು ಆಗಿದೆ. ಈ ವರ್ಷವಷ್ಟೇ ಬೆಳೆದಿರುವ ಮಿಯಾಜಾಕಿ ಮಾವಿಗೆ ಸ್ಥಳೀಯವಾಗಿ ಮಾರುಕಟ್ಟೆ ಇಲ್ಲ. ಹೀಗಾಗಿ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿಯೇ ಇದನ್ನು ಮಾರಾಟ ಮಾಡಬೇಕಾಗಿದೆ. ರಫ್ತು ಮಾಡುವುದಕ್ಕಾಗಿ ರೈತ ದಾರಿ ಹುಡುಕುತ್ತಿದ್ದಾರೆ.

ಏನಿದು ಮಿಯಾ ಜಾಕಿ ಮಾವು?: 

ಜಪಾನ್ ದೇಶದ ಕ್ಯುಶು ಪ್ರಾಂತದ ಮಿಯಾಜಾಕಿ ನಗರದಲ್ಲಿ ಇದನ್ನು ಹೆಚ್ಚಾಗಿ ಬೆಳೆಯುವುದರಿಂದ ಇದಕ್ಕೆ ಮಿಯಾ ಜಾಕಿ ಮಾವು ಎಂದು ಹೆಸರು ಬಂದಿದೆ. ಸಾಮಾನ್ಯವಾಗಿ ಜಪಾನ್ ಸುತ್ತಮುತ್ತಲ ಪ್ರದೇಶದಲ್ಲಿಯೇ ಬೆಳೆಯುವ ಈ ಮಾವು ಜಗತ್ತಿನ ದುಬಾರಿ ಮಾವು ಎಂದೇ ಪ್ರಸಿದ್ಧಿಯಾಗಿದೆ. ಪ್ರತಿ ಕೆಜಿಗೆ ₹2.5 ಲಕ್ಷದಿಂದ ₹3 ಲಕ್ಷಕ್ಕೆ ಇದು ಮಾರಾಟವಾಗುತ್ತದೆ.

ಕೊಪ್ಪಳ ಹಣ್ಣು ಮಾರಾಟ ಮತ್ತು ಪ್ರದರ್ಶನದ ವೇಳೆಯಲ್ಲಿ ಜಗತ್ತಿನ ದುಬಾರಿ ಮಾವು ಮಿಯಾಜಾಕಿ ಕೊಪ್ಪಳದಲ್ಲಿ ಪ್ರದರ್ಶನ ಮಾಡಿ, ಪರಿಚಯ ಮಾಡಲಾಗಿತ್ತು. ಆದರಿಂದ ಪ್ರೇರಣೆಗೊಂಡು ರೈತನೋರ್ವ ಬೆಳೆದಿದ್ದು, ಯಶಸ್ವಿಯಾಗಿದೆ ಎಂದು ಕೊಪ್ಪಳ ತೋಟಗಾರಿಕಾ ಇಲಾಖೆ ಜೆಡಿ ಕೃಷ್ಣ ಉಕ್ಕುಂದ ತಿಳಿಸಿದ್ದಾರೆ.

ದುಬಾರಿ ಮಾವು ಎನ್ನುವ ಕಾರಣಕ್ಕಾಗಿ ಕಷ್ಟಪಟ್ಟು, ರಿಸ್ಕ್ ತೆಗೆದುಕೊಂಡು ಬೆಳೆದಿದ್ದೇವೆ. ನಿರೀಕ್ಷೆಯಂತೆ ಉತ್ತಮ ಫಸಲು ಬಂದಿದೆ. ಈಗ ಅದನ್ನು ಮಾರಾಟ ಮಾಡುವುದೇ ದೊಡ್ಡ ಸವಾಲಾಗಿದೆ ಎಂದು ರೈತ ನಾಗಪ್ಪ ಬಗನಾಳ ತಿಳಿಸಿದ್ದಾರೆ.

PREV
Read more Articles on
click me!

Recommended Stories

ಮೂರು ನಗರ, ಮೂರು ದುರಂತ: ಪೋಕ್ಸೋ ಕೇಸ್ ಖೈದಿ ಜೈಲಿನಲ್ಲಿ ಆತ್ಮ*ಹತ್ಯೆ, ಪ್ರಿಯತಮೆ ಹಲ್ಲೆ ಮಾಡಿದ್ದಕ್ಕೆ ಪ್ರೇಮಿ ಸಾವು!
ಶೂನ್ಯದಿಂದ ಶುರುಮಾಡಿ 28ನೇ ವಯಸ್ಸಿಗೆ ಬೆಂಗಳೂರಿನಲ್ಲಿ ಮನೆ ಕಟ್ಟಿದ ಯುವ ದಂಪತಿಯ ಯಶೋಗಾಥೆ