ಸರಿಯಾಗಿ ಕೆಲಸ ಮಾಡಿ, ಇಲ್ಲ ಮನೆಗೆ ಹೋಗಿ: ಅಧಿಕಾರಿಗಳಿಗೆ ಶಾಸಕ ರಾಜು ಕಾಗೆ ಖಡಕ್‌ ಎಚ್ಚರಿಕೆ

By Kannadaprabha NewsFirst Published Jun 26, 2024, 11:58 PM IST
Highlights

ನೀವೇ ಅಕ್ರಮ ಮಾರಾಟಗಾರರಿಗೆ ಮಾಹಿತಿ ನೀಡಿ, ಅವರನ್ನು ಬಚಾವ್ ಮಾಡುತ್ತಿದ್ದೀರಿ, ಇನ್ನಾದರೂ ಎಚ್ಚೆತ್ತುಕೊಳ್ಳದಿದ್ದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಲಾಗುವುದು ಎಂದು ಶಾಸಕ ರಾಜು ಕಾಗೆ ಅಧಿಕಾರಿಗಳಿಗೆ ಖಡಕ್‌ ಎಚ್ಚರಿಕೆ ನೀಡಿದರು.

ಕಾಗವಾಡ (ಜೂ.26): ಕಾಗವಾಡ ಮತಕ್ಷೇತ್ರದ ಹಳ್ಳಿ ಹಳ್ಳಿಗಳಲ್ಲಿ ಹೊಟೇಲ್, ಪಾನ್‌ ಶಾಪ್‌ಗಳಲ್ಲಿ ಮಹಾರಾಷ್ಟ್ರದ ಸಾರಾಯಿಯನ್ನು ರಾಜಾರೋಷವಾಗಿ ಮಾರಾಟ ಮಾಡಲಾಗುತ್ತಿದ್ದು, ಅದನ್ನು ತಡೆಯಲು ಅಬಕಾರಿ ಇಲಾಖೆಯ ಅಧಿಕಾರಿಗಳು ಸಂಪೂರ್ಣ ವಿಫಲರಾಗಿದ್ದಾರೆ. ನೀವೇ ಅಕ್ರಮ ಮಾರಾಟಗಾರರಿಗೆ ಮಾಹಿತಿ ನೀಡಿ, ಅವರನ್ನು ಬಚಾವ್ ಮಾಡುತ್ತಿದ್ದೀರಿ, ಇನ್ನಾದರೂ ಎಚ್ಚೆತ್ತುಕೊಳ್ಳದಿದ್ದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಲಾಗುವುದು ಎಂದು ಶಾಸಕ ರಾಜು ಕಾಗೆ ಅಧಿಕಾರಿಗಳಿಗೆ ಖಡಕ್‌ ಎಚ್ಚರಿಕೆ ನೀಡಿದರು.

ಕಾಗವಾಡದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡುವ ಮೂಲಕ ಅಕ್ರಮ ತಡೆಯುವಂತೆ ಸೂಚನೆ ನೀಡಿದರು. ನೆರೆಯ ಮಹಾರಾಷ್ಟ್ರದಲ್ಲಿ ಕೆಲ ಬ್ರ್ಯಾಂಡ್‌ಗಳು ಕರ್ನಾಟಕಕ್ಕಿಂತಲೂ ದರ ಕಡಿಮೆ ಇರುವದರಿಂದ ಹೊಟೇಲ, ಪಾನ್‌ಶಾಪ್‌ ಹಾಗೂ ಇತರೆ ಮಾರಾಟಗಾರರು ಕಡಿಮೆ ದರದಲ್ಲಿ ಮದ್ಯ ತಂದು ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿದ್ದಾರೆ. ಇದರಿಂದ ನಮ್ಮ ರಾಜ್ಯದ ಬೊಕ್ಕಸಕ್ಕೆ ಅಪಾರ ಪ್ರಮಾಣದಲ್ಲಿ ನಷ್ಟವುಂಟಾಗುತ್ತಿದೆ. ಇದು ಅಧಿಕಾರಿಗಳಿಗೆ ಗೊತ್ತಿದ್ದರೂ ಜಾಣ ಕುರುಡರಂತೆ ವರ್ತಿಸುತ್ತಿರುವುದು ಸರಿಯಲ್ಲ. ನೀವು ಕ್ರಮ ಜರುಗಿಸದಿದ್ದರೆ, ನಿಮ್ಮ ಮೇಲೆ ನಾವು ಕ್ರಮ ಜರುಗಿಸಬೇಕಾಗುತ್ತದೆ ಎಂದು ಅಬಕಾರಿ ಅಧಿಕಾರಿಗಳಿಗೆ ಸಂದೇಶ ನೀಡಿದರು.

Latest Videos

ಕಿರಿಯ ವಯಸ್ಸಿನಲ್ಲಿ ಜನಸೇವೆ ಮಾಡುವ ಅವಕಾಶ ನನಗೆ ದೊರಕಿದೆ: ಸಂಸದೆ ಪ್ರಿಯಾಂಕಾ ಜಾರಕಿಹೊಳಿ

ನನಗೆ ಗೊತ್ತಿದೆ, ನಿಮಗೆ ಗೊತ್ತಿಲ್ವಾ?: ಮಹಾರಾಷ್ಟ್ರದ ಗಡಿ ಖಿಳೇಗಾಂವ, ಪಾಂಡೇಗಾಂವ, ಆಜೂರ, ಶಿರೂರ, ಸಂಬರಗಿ, ಅನಂತಪೂರ, ಕೆಂಪವಾಡ, ನವಲಿಹಾಳ, ಮೋಳೆ, ಶೇಡಬಾಳ, ಶೇಡಬಾಳ ಸ್ಟೇಷನ್, ಕತ್ರಾಳ, ಕೃಷ್ಣಾ ಕಿತ್ತೂರ, ಬಣಜವಾಡ, ಕೌಲಗುಡ್ಡ ಸೇರಿದಂತೆ ಎಲ್ಲೆಲ್ಲಿ ಸಾರಾಯಿ ಮಾರಾಟವಾಗುತ್ತದೆ ಎಂಬುದು ನನಗೆ ಗೊತ್ತಿದೆ. ಇದು ನಿಮಗೆ ಗೊತ್ತಿಲ್ವಾ? ಯಾವ ಯಾವ ಊರಲ್ಲಿ ಯಾವ್ಯಾವ ಪಾನ್ ಶಾಪ್, ಹೊಟೇಲಗಳಲ್ಲಿ ಮಾರಾಟವಾಗುತ್ತದೆ ಎಂಬುದನ್ನ ನಾ ಸ್ವತಃ ಬಂದು ತೋರಿಸುತ್ತೇನೆ ನಡೆಯಿರಿ ಎಂದು ಶಾಸಕ ರಾಜು ಕಾಗೆ ಅಕಾರಿ ಇಲಾಖೆಯ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.

ಮೂಲಭೂತ ಸೌಲಭ್ಯಕ್ಕೆ ಆದ್ಯತೆ ನೀಡಿ: ಗ್ರಾಮೀಣ ಭಾಗದಲ್ಲಿರುವ ಜನರಿಗೆ ಶುದ್ದ ಹಾಗೂ ನಿರಂತರ ನೀರು ನೀಡುವ ಯೋಜನೆಯಾದ ಜಲಜೀವನ ಮಿಷನ್ ಯೋಜನೆಯು ಸರಿಯಾಗಿ ಕಾಮಗಾರಿ ಮಾಡದ್ದರಿಂದ ಹಳ್ಳ ಹಿಡಿದಿದೆ. ಈ ಯೋಜನೆ ನಾಲ್ಕು ವರ್ಷವಾದರೂ ಪೂರ್ಣಗೊಂಡಿಲ್ಲ. ಅಧಿಕಾರಿಗಳು ಇತ್ತ ಗಮನ ಹರಿಸುವಂತೆ ಸೂಚನೆ ನೀಡಿದರು.

ಪ್ರವಾಹ ಎದುರಿಸಲು ಸಿದ್ದರಾಗಿ: ಮುಂದಿನ ದಿನಗಳಲ್ಲಿ ಸಂಭವನೀಯ ಪ್ರವಾಹ ಎದುರಿಸಲು ಎಲ್ಲ ಅಧಿಕಾರಿಗಳು ಸಿದ್ದರಾಗಿರಬೇಕು. ಆಯಾ ನೋಡಲ್ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದು ಪ್ರವಾಹ ಪೀಡಿತ ಗ್ರಾಮಗಳ ನೋಡಲ್ ಅಧಿಕಾರಿ, ಆಯಾ ಗ್ರಾಮದ ಲೆಕ್ಕಾಧಿಕಾರಿ, ಪಿಡಿಒ ಸಮನ್ವಯ ಸಾಧಿಸಿ, ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದರು. ಕಾಗವಾಡ ತಾಲೂಕಿನ ಜುಗೂಳ, ಮಂಗಾವತಿ, ಶಹಾಪುರ, ಕುಸನಾಳ, ಮೊಳವಾಡ, ಕಾತ್ರಾಳ, ಬಣಜವಾಡ ಹಾಗೂ ಕೃಷ್ಣಾ-ಕಿತ್ತೂರ ಗ್ರಾಮಗಳಿಗೆ ಹೆಚ್ಚಿನ ಸಮಸ್ಯೆಯಾಗುತ್ತದೆ. ಪ್ರವಾಹ ಬಂತೆಂದರೆ ಅಲ್ಲಿಯ ತೋಟ ಪಟ್ಟಿಯ ಜನರನ್ನು ಹೊರ ತಂದು ಜನ ಹಾಗೂ ಜಾನುವಾರುಗಳಿಗೆ ಮೇವು, ನೀರಿನ ವ್ಯವಸ್ಥೆ ಹಾಗೂ ಊಟದ ವ್ಯವಸ್ಥೆ ಕಲ್ಪಿಸಲು ಈಗಲೇ ಸಿದ್ಧತೆ ಮಾಡಿಕೊಳ್ಳಿ. ಇದು ನನ್ನ ಕೆಲಸವಲ್ಲ ಎಂದು ಆಲಸ್ಯ ತೋರದೆ ಎಲ್ಲ ಅಧಿಕಾರಿಗಳು ಯುದ್ದೋಪಾದಿಯಲ್ಲಿ ಕೆಲಸ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಸಭೆಯಲ್ಲಿ ಅರ್ಧಂಬರ್ಧ ಮಾಹಿತಿ ನೀಡಿದ ಅಧಿಕಾರಿಗಳ ವಿರುದ್ಧ ರಾಜು ಕಾಗೆ ಸಿಡಿಮಿಡಿಗೊಂಡರು. ಮುಂದಿನ ಸಭೆಗೆ ಬರುವಾಗ ಸರಿಯಾದ ಮಾಹಿತಿ ಪಡೆದು ಸಭೆಗೆ ಬರುವಂತೆ ಸೂಚನೆ ನೀಡಿದರು,

ಗುರಾಯಿಸಿದ್ದಕ್ಕೆ ಬಿತ್ತು ಹೆಣ: ಬನ್ನೇರುಘಟ್ಟ ರಸ್ತೆಯಲ್ಲಿ ಭೀಕರ ಹತ್ಯೆ!

ಈ ವೇಳೆ ತಹಸೀಲ್ದಾರ್ ರಾಜೇಶ ಬುರ್ಲಿ, ತಾಪಂ ಎಇಒ ವೀರಣ್ಣ ವಾಲಿ, ಜೆಜೆಎಂ ಅಧಿಕಾರಿ ರವೀಂದ್ರ ಮುರಗಾಲಿ, ಬಿಇಒ ಎಂ.ಆರ್.ಮುಂಜೆ, ಸಿಡಿಪಿಒ ಸಂಜಯಕುಮಾರ ಸದಲಗಿ, ಲೋಕೋಪಯೋಗಿ ಇಲಾಖೆಯ ಜಯಾನಂದ. ಹಿರೇಮಠ, ಅಥಣಿ ತಾಪಂ ಎಇಒ ಶಿವಾನಂದ, ಅಬಕಾರಿ ಇಲಾಖೆಯ ಮಹಾಂತೇಶ ಬಂಡಗರ, ಅರಣ್ಯ ಇಲಾಖೆಯ ಪ್ರಶಾಂತ ಗಾಣಿಗೇರ, ತಾಲೂಕ ವೈದ್ಯಾಧಿಕಾರಿ ಡಾ.ಬಸಗೌಡ ಕಾಗೆ, ಡಾ,ಜ್ಞಾನೇಶ್ವರ ಕಾಂಬಳೆ, ನೀರಾವರಿ ಅಭಿಯಂತರ, ಕೆ.ರವಿ, ಅರಣ್ಯಾಧಿಕಾರಿ ಪ್ರಶಾಂತ ಗಾಣಿಗೇರ, ಎಎಸ್ಐ ಬಸವರಾಜ ರಿಜಕನವರ, ಮುಖ್ಯಾಧಿಕಾರಿಗಳಾದ ಮಹಾಂತೇಶ ಕವಲಾಪುರೆ, ಸುನೀಲ ಬಬಲಾದಿ, ಕಲ್ಲಪ್ಪ ಗಾವಡೆ ಸೇರಿದಂತೆ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಲೆಕ್ಕಾಧಿಕಾರಿಗಳು, ತಾಲೂಕಾಡಳಿತದ ಅಧಿಕಾರಿಗಳು, ತಾಪಂ ಸಿಬ್ಬಂದಿ ಇದ್ದರು.

click me!