tumakur ಹೈನುಗಾರಿಕೆಯಲ್ಲಿ ಸ್ತ್ರೀಯರ ಪಾತ್ರ ಅತಿ ದೊಡ್ಡದು

By Kannadaprabha NewsFirst Published Oct 25, 2022, 4:23 AM IST
Highlights

ಸಹಕಾರ ಕ್ಷೇತ್ರಕ್ಕೆ ಮಹಿಳೆಯರು ಹೆಚ್ಚು ಪಾಲ್ಗೊಳ್ಳುವ ಮೂಲಕ ಆರ್ಥಿಕ ಹಾಗೂ ಸಾಮಾಜಿಕವಾಗಿ ಅಭಿವೃದ್ಧಿ ಹೊಂದಬೇಕೆಂದು ತುಮಕೂರು ಹಾಲು ಒಕ್ಕೂಟದ ನಿರ್ದೇಶಕ ರೇಣುಕ ಪ್ರಸಾದ್‌ ಕರೆ ನೀಡಿದರು.

  ತುಮಕೂರು : ಸಹಕಾರ ಕ್ಷೇತ್ರಕ್ಕೆ ಮಹಿಳೆಯರು ಹೆಚ್ಚು ಪಾಲ್ಗೊಳ್ಳುವ ಮೂಲಕ ಆರ್ಥಿಕ ಹಾಗೂ ಸಾಮಾಜಿಕವಾಗಿ ಅಭಿವೃದ್ಧಿ ಹೊಂದಬೇಕೆಂದು ತುಮಕೂರು ಹಾಲು ಒಕ್ಕೂಟದ ನಿರ್ದೇಶಕ ರೇಣುಕ ಪ್ರಸಾದ್‌ ಕರೆ ನೀಡಿದರು.

ತುಮಕೂರು ತಾಲೂಕು ದೊಡ್ಡವೀರನಹಳ್ಳಿಯಲ್ಲಿ ಹಾಲು ಒಕ್ಕೂಟದ ಕ್ಷೀರ ಸಂಜೀವಿನಿ ಯೋಜನೆಯಡಿಯಲ್ಲಿ ಸ್ಥಳೀಯ ಮಹಿಳಾ ಸಹಕಾರ ಸಂಘದ ಸದಸ್ಯರಿಗೆ ಆಯೋಜಿಸಿದ್ದ ಅರಿವು ಕಾರ್ಯಕ್ರಮ ಹಾಗೂ ರಾಸುಗಳ ಖರೀದಿಗೆ ಚೆಕ್‌ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ತುಮಕೂರು ಸಾಂತ್ವನ ಕೇಂದ್ರದ ಸಲಹೆಗಾರ ಸಾ.ಚಿ.ರಾಜಕುಮಾರ ಮಹಿಳೆ ಮತ್ತು ಕಾನೂನು ಕುರಿತು ಮಾತನಾಡಿ ಬಹಳ ಹಿಂದಿನಿಂದ ಮಹಿಳೆಯನ್ನು ಕೆಲವು ಕಟ್ಟುಪಾಡುಗಳಲ್ಲಿ ಬಂಧಿಸಲಾಗಿತ್ತು. ನಮ್ಮ ಸಂವಿಧಾನದ ಅಡಿಯಲ್ಲಿ ಎಲ್ಲರೂ ಸಮಾನರು ಎಂಬ ಅಂಶ ಹಾಗೂ ವಿವಿಧ ವಿಶೇಷ ಕಾನೂನುಗಳು ಜಾರಿಯಾದ ನಂತರ ಮಹಿಳೆಯರ ಶೋಷಣೆಯನ್ನು ತಪ್ಪಿಸಲು ಸಾಧ್ಯವಾಗಿದೆ. ಆದರೂ ಕೆಲವೊಂದು ಕ್ಷೇತ್ರಗಳಲ್ಲಿ ಮಹಿಳಾ ದೌರ್ಜನ್ಯ ಬೇರೆ ಬೇರೆ ರೀತಿಯಲ್ಲಿ ಮುಂದುವರೆದಿದೆ. ಇದನ್ನು ತಪ್ಪಿಸಲೆಂದೇ ಕಾನೂನುಗಳನ್ನು ರಚನೆ ಮಾಡಲಾಗಿದ್ದು, ಅಗತ್ಯ ಬಿದ್ದಾಗ ಇವುಗಳ ಬಳಕೆ ಮಾಡಿಕೊಳ್ಳಬೇಕು ಎಂದರು.

ಆರೋಗ್ಯ ಮತ್ತು ಮಹಿಳೆ ಕುರಿತು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಚಂದ್ರಪ್ಪ ಮಾತನಾಡಿ ಸೊಪ್ಪು, ತರಕಾರಿ ಮತ್ತು ಹಣ್ಣು ಸೇವನೆಯಿಂದ ರಕ್ತ ಕಡಿಮೆಯ ಕಾಯಿಲೆಗಳನ್ನು ವಾಸಿ ಮಾಡಿಕೊಳ್ಳಬಹುದು. ಸ್ವಚ್ಛತೆಯ ಕಡೆಗೆ ಜನತೆ ಗಮನ ಹರಿಸುತ್ತಿಲ್ಲ. ಋುತುಸ್ರಾವದ ಸಂದರ್ಭದಲ್ಲಿ ರಕ್ತದ ಕೊರತೆ ನಿವಾರಿಸುವ ಜೊತೆಗೆ ಸ್ವಚ್ಛತೆಯ ಕಡೆಗೆ ಹೆಚ್ಚು ಗಮನ ಹರಿಸಬೇಕು ಎಂದರು.

ಸ್ಟೆಪ್‌ ಯೋಜನೆಯ ಅಧಿಕಾರಿ ವೈ.ಎಸ್‌.ಮಧು ಮಾತನಾಡಿ, ಫಲಾನುಭವಿಗಳಿಗೆ ಹಸು ಖರೀದಿಸಲು 25 ಸಾವಿರ ರು. ಬಡ್ಡಿರಹಿತ ಸಾಲ ನೀಡುತ್ತಿದ್ದು, ಪ್ರತಿ ತಿಂಗಳು ಕಂತು ಪಾವತಿಸುತ್ತಾ ಹೋಗಬೇಕು. ಗುಣಮಟ್ಟದ ಹಾಲು ಪೂರೈಸಬೇಕು. ಸಂಘಗಳ ಬಲವರ್ಧನೆಗೆ ಒಕ್ಕೂಟದಿಂದ ಸಾಕಷ್ಟುಅನುಕೂಲಗಳನ್ನು ಕಲ್ಪಿಸುತ್ತಿದ್ದು, ಇದರ ಪ್ರಯೋಜನ ಪಡೆದು ಹೈನುಗಾರಿಕೆ ಅಭಿವೃದ್ಧಿಪಡಿಸಿಕೊಳ್ಳಿ ಎಂದು ಸಲಹೆ ನೀಡಿದರು.

ವಿಸ್ತರಣಾಧಿಕಾರಿ ಚೈತ್ರಾ ರಾಸುಗಳಲ್ಲಿ ಆರೋಗ್ಯ ಮತ್ತು ಸ್ವಚ್ಛತೆ, ಮೇವು ಕುರಿತು ಮಾತನಾಡಿದರು. ಸಂಘದ ಅಧ್ಯಕ್ಷೆ ಸಿದ್ಧಗಂಗಮ್ಮ, ಕಾರ್ಯದರ್ಶಿ ಮಮತಾ, ಸ್ಪೆಪ್‌ ಯೋಜನೆಯ ಭವ್ಯಶ್ರೀ ಮೊದಲಾದವರು ಪಾಲ್ಗೊಂಡಿದ್ದರು. ಶಿವಪ್ಪ ಕಾರ್ಯಕ್ರಮ ನಿರೂಪಿಸಿದರು.

 ಹೈನುಗಾರಿಕೆಯಲ್ಲಿ ಮಹಿಳೆಯರ ಪಾತ್ರ ಅತಿ ದೊಡ್ಡದಿದೆ. ಸಹಕಾರ ಕ್ಷೇತ್ರಕ್ಕೆ ಮಹಿಳೆಯರು ಪಾದಾರ್ಪಣೆ ಮಾಡುತ್ತಿರುವುದರಿಂದ ಆರ್ಥಿಕ ಮತ್ತು ಸಾಮಾಜಿಕವಾಗಿ ಮುನ್ನಡೆಯಲು ಸಾಧ್ಯವಾಗಿದೆ. ಹೈನುಗಾರಿಕೆಯು ಅಭಿವೃದ್ಧಿ ಪಥದಲ್ಲಿ ಸಾಗಿದೆ.

ರೇಣುಕ ಪ್ರಸಾದ್‌ ನಿರ್ದೇಶಕ ತುಮಕೂರು ಹಾಲು ಒಕ್ಕೂಟ

ವೈಜ್ಞಾನಿಕತೆ 

ಯಮಕನಮರಡಿ :  ಕೃಷಿಯಲ್ಲಿ ಹೈನುಗಾರಿಕೆ ಪಾತ್ರವು ದೊಡ್ಡದಾಗಿದ್ದು, ಇದು ರೈತರಿಗೆ ನಿತ್ಯದ ಉದ್ಯೋಗವಾಗಿದೆ ಎಂದು ಚಿಕ್ಕೋಡಿ ಬಿಜೆಪಿ ಎಸ್‌ಟಿ ಮೋರ್ಚಾ ಅಧ್ಯಕ್ಷ ಬಸವರಾಜ ಹುಂದ್ರಿ ಹೇಳಿದರು.

ಸೋಮವಾರ ಸಮೀಪದ ಗುಟಗುದ್ದಿ ಗ್ರಾಮದಲ್ಲಿ ಬ್ರಹ್ಮಶ್ರೀ ಬಾಳಯ್ಯಜ್ಜನ ಹಾಲು ಉತ್ಪಾದನಾ ಕೇಂದ್ರ ಗುಟಗುದ್ದಿ ಮತ್ತು ಬಾಳಯ್ಯಜ್ಜನ ಸೇವಾ ಕಮಿಟಿ ಅವರು ಆಯೋಜಿಸಿದ್ದ ಹಾಲು ಉತ್ಪಾದಕರಿಗೆ ಹಾಲಿನ ಕ್ಯಾನ್‌ಗಳನ್ನು ವಿತರಿಸಿ ಮಾತನಾಡಿದ ಅವರು, ಕೃಷಿಕರು ಹೈನುಗಾರಿಕೆಯಲ್ಲಿ ವೈಜ್ಞಾನಿಕ ಪದ್ಧತಿ ಅಳವಡಿಸಿಕೊಂಡು ತಮ್ಮ ಆದಾಯ ಹೆಚ್ಚಿಸಿಕೊಳ್ಳಬೇಕೆಂದು ಕರೆ ನೀಡಿದರು. ಕಾರ್ಯಕ್ರಮದ ಸಾನ್ನಿಧ್ಯವನ್ನು ಗುಟಗುದ್ದಿಯ ಬ್ರಹ್ಮಶ್ರೀ ಬಾಳಯ್ಯಜ್ಜನ ಮಠದ ಶ್ರೀಶಿವಾನಂದ ಮಹಾಸ್ವಾಮಿಗಳು ವಹಿಸಿದ್ದರು. ಕಾರ್ಯಕ್ರಮದಲ್ಲಿ ಬಸವರಾಜ ಭ ನಾಯಿಕ, ಬಸವರಾಜ ಪೂಜೇರಿ, ಬಸ್ಸು ಪೂಜೇರಿ, ಬಸಪ್ಪ ಲಕ್ಕೆಪ್ಪಗೋಳ, ಮಲ್ಲಪ್ಪ ಪಾಟೀಲ, ಮಲಗುಂಡ ಕರಗುಪ್ಪಿ, ಫಕೀರಪ್ಪ ಬೆಟಗಾರ, ಗುರು ಹಿರೇಮಠ, ಬಾಳಯ್ಯ ತವಗಮಠ, ಮಲ್ಲಪ್ಪ ಕರಗುಪ್ಪಿ ಹಾಗೂ ಇನ್ನುಳಿದ ಗಣ್ಯರು ಹಾಲು ಉತ್ಪಾದಕರು ಪಾಲ್ಗೊಂಡಿದ್ದರು.

click me!