ತುತ್ತು ಅನ್ನಕ್ಕಾಗಿ ಪರದಾಡುತ್ತಿರುವ ಬಾಣಂತಿ| ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಕುಡಚಿ ಪಟ್ಟಣದಲ್ಲಿ ನಡೆದ ಘಟನೆ| ಕುಡಚಿ ಪಟ್ಟಣದಲ್ಲಿ ಬಫರ್ಜೋನ್| ಕೊರೋನಾ ವೈರಸ್ ಹಿನ್ನೆಲೆಯಲ್ಲಿ ಯಾರೂ ಈ ಮಹಿಳೆಗೆ ಆಶ್ರಯ ನೀಡುತ್ತಿಲ್ಲ
ರಾಯಬಾಗ(ಏ.09): ಬಾಣಂತಿ ತನ್ನ ಹಸುಗೂಸಿನೊಂದಿಗೆ ತುತ್ತು ಅನ್ನಕ್ಕಾಗಿ ಪರದಾಡುತ್ತಿರುವ ಮನಕುಲುವ ಘಟನೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಕುಡಚಿ ಪಟ್ಟಣದಲ್ಲಿ ಬುಧವಾರ ಕಂಡು ಬಂದಿದೆ.
ಕುಡಚಿ ಪಟ್ಟಣದಲ್ಲಿ ಕೊರೋನಾ ಪಾಸಿಟಿವ್ ಬಂದ್ ಹಿನ್ನೆಲೆಯಲ್ಲಿ ಇಡೀ ಕುಡಚಿ ಪಟ್ಟಣವನ್ನು ಬಫರ್ಜೋನ್ಗೆ ಒಳಪಡಿಸಿದ್ದರಿಂದ ನಾಲ್ಕು ತಿಂಗಳ ಹಸುಗೂಸು ಹಾಗೂ ಇಬ್ಬರು ಚಿಕ್ಕ ಮಕ್ಕಳೊಂದಿಗೆ ನಿರ್ಗತಿಕ ಬಾಣಂತಿ ಊಟಕ್ಕಾಗಿ ಪರದಾಡುತ್ತಿರುವ ದೃಶ್ಯ ಮನಕಲುಕುತ್ತಿದೆ.
ಬೆಳಗಾವಿಯಲ್ಲಿ ಮತ್ತೆ ನಾಲ್ವರಿಗೆ ಕೊರೋನಾ ದೃಢ: ಕುಡಚಿಯಲ್ಲಿ ಹೈಅಲರ್ಟ್
ಸಂಗೀತಾ ಎಂಬ ಮಹಿಳೆ ಸೂರು ಇಲ್ಲದೆ ತುತ್ತು ಅನ್ನಕ್ಕೂ ಗತಿ ಇಲ್ಲದೆ ಈ ತಾಯಿ ರಸ್ತೆ ಪಕ್ಕದಲ್ಲಿ ಏಕಾಂಗಿಯಾಗಿ ವಾಸಿಸುತ್ತಿದ್ದಾಳೆ. ಕೊರೋನಾ ವೈರಸ್ ಹಿನ್ನೆಲೆಯಲ್ಲಿ ಯಾರೂ ಈ ಮಹಿಳೆಗೆ ಆಶ್ರಯ ನೀಡಲು ಮುಂದೆ ಬರುತ್ತಿಲ್ಲ. ಮನೆ ಮನೆಗೆ ಅಲೆದು ಭಿಕ್ಷೆ ಬೇಡಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದಾಳೆ. ತಾಲೂಕಿನಲ್ಲಿ ಅನೇಕ ಸಂಘ ಸಂಸ್ಥೆಗಳು ಮತ್ತು ತಾಲೂಕು ಆಡಳಿತ ಕಡು ಬಡವರಿಗೆ ಮತ್ತು ನಿರ್ಗತಿಕರಿಗೆ ಆಹಾರ ಹಂಚುವ ಕಾರ್ಯ ಮಾಡುತ್ತಿದೆ. ಆದರೆ, ತುತ್ತು ಅನ್ನಕ್ಕೂ ಪರದಾಡುತ್ತಿರುವ ಇಂತಹ ನಿರ್ಗತಿಕ ಮಹಿಳೆಯರು ಕಾಣದಿರುವುದು ಮಾತ್ರ ದುರ್ದೈವದ ಸಂಗತಿ.