ಕೊರೋನಾ ಇರದಿದ್ರೂ ಜೆಸಿಬಿಯಲ್ಲಿ ಸಾಗಿಸಿ ಮಹಿಳೆ ಶವಸಂಸ್ಕಾರ..!

By Kannadaprabha NewsFirst Published May 1, 2021, 8:14 AM IST
Highlights

ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯ ಕುರುಟಹಳ್ಳಿಯಲ್ಲಿ ಅಮಾನವೀಯ ಘಟನೆ| ಕೊರೋನಾ ಸೋಂಕಿನಿಂದ ಮೃತಪಟ್ಟಿದ್ದಾಳೆಂದು ಜನರು ಭಾವಿಸಿದ್ದರು| ಮಹಿಳೆಗೆ ಕೊರೋನಾ ಇರಲಿಲ್ಲ: ಎಸ್‌ಪಿ ಮಿಥುನ್‌ಕುಮಾರ್‌ ಸ್ಪಷ್ಟನೆ| 

ಚಿಕ್ಕಬಳ್ಳಾಪುರ(ಮೇ.01): ಮಹಾಮಾರಿ ಕೊರೋನಾ ಮನುಷ್ಯರಲ್ಲಿ ಮನುಷ್ಯತ್ವನ್ನು ಮರೆಸುತ್ತಾ, ಹಲವು ಅಮಾನವೀಯ ಘಟನೆಗಳಿಗೆ ಸಾಕ್ಷಿಯಾಗುತ್ತಿದೆ. ಆಕಸ್ಮಿಕವಾಗಿ ಮೃತಪಟ್ಟ ಮಹಿಳೆ ಕೊರೋನಾ ಸೋಂಕುನಿಂದ ಮೃತಪಟ್ಟಿರಬಹುದೆಂದು ಭಾವಿಸಿ ಗ್ರಾಮಸ್ಥರು ಆಕೆಯ ಮೃತ ದೇಹವನ್ನು ಜೆಸಿಬಿ ಯಂತ್ರದಲ್ಲಿ ಸಾಗಿಸಿ ಶವಸಂಸ್ಕಾರ ನಡೆಸಿದ ಅಮಾನವೀಯ ಘಟನೆ ಜಿಲ್ಲೆಯ ಚಿಂತಾಮಣಿ ತಾಲೂಕಿನಲ್ಲಿ ನಡೆದಿದೆ.

ಚಿಂತಾಮಣಿ ತಾಲೂಕಿನ ಗ್ರಾಮಾಂತರ ಪೊಲೀಸ್‌ ಠಾಣೆ ವ್ಯಾಪ್ತಿಯ ಕುರುಟಹಳ್ಳಿ ಗ್ರಾಮದಲ್ಲಿ ಚಂದ್ರಕಲಾ ಎಂಬ ಮಹಿಳೆ ಗುರುವಾರ ಗ್ರಾಮದ ಟೈಲರ್‌ ಅಂಗಡಿಯೊಂದರ ಮುಂದೆ ಅನಾರೋಗ್ಯದಿಂದ ಮೃತಪಟ್ಟಿದ್ದಾಳೆ. ಇದನ್ನು ಕಂಡ ಗ್ರಾಮಸ್ಥರು ಆಕೆಗೆ ಕೊರೋನಾ ಇದೆ ಎಂದು ಭಾವಿಸಿ ಯಾರೊಬ್ಬರೂ ಪಕ್ಕದಲ್ಲಿ ಸುಳಿದಿಲ್ಲ. ಆಕೆಯ ಶವ ಸಂಸ್ಕಾರಕ್ಕೆ ಗ್ರಾಮಸ್ಥರು ಹಿಂದೇಟು ಹಾಕಿದ್ದರು.

"

ಬಳಿಕ ಆಕೆಯ ಮೃತ ದೇಹವನ್ನು ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಶವ ಸಂಸ್ಕಾರ ನಡೆಸಲು ಯಾರು ಮುಂದೆ ಬಾರದ ಹಿನ್ನೆಲೆಯಲ್ಲಿ ಆಕೆಯನ್ನು ಜೆಸಿಬಿ ಯಂತ್ರದ ಬಕೆಟ್‌ನಲ್ಲಿ ತೆಗೆದುಕೊಂಡು ಹೋಗಿ ಅಂತ್ಯ ಸಂಸ್ಕಾರ ಮಾಡಿದ್ದಾರೆ. ಈ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್‌ ಆಗಿವೆ. ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿ ಈ ಅಮಾನವೀಯ ಘಟನೆಗೆ ಮರುಕ ವ್ಯಕ್ತಪಡಿಸಿದ್ದಾರೆ.

ಅಮಾನವೀಯ ಘಟನೆಗೆ ಸಾಕ್ಷಿಯಾದ ಕೋಲಾರ: ರಸ್ತೆ ಮಧ್ಯೆ ನರಳಿ ಮೃತಪಟ್ಟ ಮಹಿಳೆ

ಅನಾಥವಾದ ಬಾಲಕಿ:

ಚಂದ್ರಕಲಾಗೆ 12 ವರ್ಷದ ಪುತ್ರಿ ಇದ್ದಾಳೆ. 5 ವರ್ಷದ ಹಿಂದೆ ತಂದೆಯನ್ನು ಕಳೆದುಕೊಂಡಿರುವ ಬಾಲಕಿ ಈಗ ಇದ್ದಕ್ಕಿದ್ದಂತೆ ಹೆತ್ತ ತಾಯಿಯನ್ನು ಕಳೆದುಕೊಂಡು ಅನಾಥವಾಗಿದ್ದಾಳೆ. ಹೋಟೆಲ್‌ ಕೆಲಸಕ್ಕೆಂದು ಬಂದಿದ್ದರು. ಏನಾಯಿತೋ ನನಗೆ ಗೊತ್ತಿಲ್ಲ. ಈಗ ನಮ್ಮ ಅಮ್ಮ ತೀರಿಕೊಂಡಿದ್ದಾಳೆಂದು ಮೃತ ಮಹಿಳೆಯ ಮಗಳು ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆ ಬಳಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾಳೆ.

ಕೊರೋನಾ ಸೋಂಕು ಇರಲಿಲ್ಲ: ಎಸ್‌ಪಿ

ಸಾಮಾಜಿಕ ಜಾಲತಾಣಗಳಲ್ಲಿ ಈ ವಿಚಾರ ಸಾಕಷ್ಟುಚರ್ಚೆಗೆ ಗ್ರಾಸವಾದ ಬೆನ್ನಲ್ಲೇ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್‌ ಕುಮಾರ್‌, ಮೃತ ಮಹಿಳೆಗೆ ಕೊರೋನಾ ಟೆಸ್ಟ್‌ ಮಾಡಲಾಗಿದ್ದು, ಸೋಂಕು ಇರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.(ಚಿತ್ರ: ಸಾಂದರ್ಭಿಕ ಚಿತ್ರ)

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ನ್ಯೂಸ್‌ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCoron
 

click me!