ಮಸ್ಕಿ ತಾಲೂಕು ಕೇಂದ್ರಕ್ಕೆ ಅಗ್ನಿಶಾಮಕ ಠಾಣೆ ಮಂಜೂರು ಯಾವಾಗ?

By Kannadaprabha NewsFirst Published Jan 22, 2023, 9:30 PM IST
Highlights

ಮಸ್ಕಿ ಪಟ್ಟಣವನ್ನು ಹೇಸರಿಗಷ್ಟೇ ನೂತನ ತಾಲೂಕು ಕೇಂದ್ರವನ್ನಾಗಿ ಮಾಡಿದಂತೆ ಮೇಲ್ನೋಟಕ್ಕೆ ಕಾಣುವಂತಾಗಿದ್ದು, ತಾಲೂಕು ಕೇಂದ್ರಕ್ಕೆ ಅಗತ್ಯವಾಗಿ ಬೇಕಿರುವ ಕಚೇರಿಗಳು ಆರಂಭವಾಗದೆ ಇರುವುದರಿಂದ ಜನರು ಪರದಾಡುವಂತಾಗಿದೆ. 

ಮಸ್ಕಿ(ಜ.22):  ಸರ್ಕಾರ ಮಸ್ಕಿ ಪಟ್ಟಣವನ್ನು ತಾಲೂಕು ಕೇಂದ್ರವಾಗಿ ಘೋಷಣೆ ಮಾಡಿ 6 ವರ್ಷವಾಗಿದ್ದು, ಇಲ್ಲಿ ಅಗ್ನಿ ಶಾಮಕ ಠಾಣೆ ನಿರ್ಮಿಸಲು ಸುಮಾರು 4 ವರ್ಷಗಳ ಹಿಂದೆ ಭೂಮಿ ಮಂಜೂರಾಗಿದೆ. ಆದರೆ ಠಾಣೆ ಮಂಜೂರು ಮಾಡಲು ವಿಳಂಭವಾಗುತ್ತಿದ್ದು, ಇದರಿಂದ ಆಕಸ್ಮಿಕ, ತುರ್ತು ಅಗ್ನಿ ಅವಗಡ ಸಂಭಂವಿಸಿದರೇ ಬೆಂಕಿ ನಂದಿಸಲು ಲಿಂಗಸಗೂರು, ಸಿಂಧನೂರು ಠಾಣೆಯ ವಾಹನಗಳು ಬರುವವರೆಗೂ ಕಾಯಬೇಕಾದ ಅನಿವಾರ್ಯತೆ ಇಲ್ಲಿನ ಜನರಿಗೆ ಬಂದಿದೆ.

ಮಸ್ಕಿ ಪಟ್ಟಣವನ್ನು ಹೇಸರಿಗಷ್ಟೇ ನೂತನ ತಾಲೂಕು ಕೇಂದ್ರವನ್ನಾಗಿ ಮಾಡಿದಂತೆ ಮೇಲ್ನೋಟಕ್ಕೆ ಕಾಣುವಂತಾಗಿದ್ದು, ತಾಲೂಕು ಕೇಂದ್ರಕ್ಕೆ ಅಗತ್ಯವಾಗಿ ಬೇಕಿರುವ ಕಚೇರಿಗಳು ಆರಂಭವಾಗದೆ ಇರುವುದರಿಂದ ಜನರು ಪರದಾಡುವಂತಾಗಿದೆ. ರಾಜ್ಯದಲ್ಲಿ ಎಲ್ಲಿಯಾದರೂ ಅಗ್ನಿ ಅವಗಡಗಳು ಸಂಭವಿಸಿದರೆ ತುರ್ತಾವಾಗಿ ಅಗ್ನಿ ಶಾಮಕ ಸಿಬ್ಬಂದಿ ರಕ್ಷಿಸುವ ಕಾರ್ಯ ಮಾಡುತ್ತಾರೆ. ಆದರೆ ಮಸ್ಕಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಗ್ನಿ ಅವಘಡ ಸೇರಿದಂತೆ ಯಾವುದೇ ಆಕಸ್ಮಿಕ ಅಗ್ನಿ ಅವಗಡ ಘಟನೆಗಳು ಸಂಭವಿಸಿದರೆ ಸುಮಾರು 25-30 ಕೀಮೀ ದೂರದ ತಾಲೂಕುಗಳಿಂದ ಅಗ್ನಿ ಶಾಮಕ ವಾಹನಗಳೇ ಬಂದು ರಕ್ಷಣೆ ಮಾಡಬೇಕಾದ ಅನಿವಾರ್ಯ ಪರಿಸ್ಥಿತಿ ಇದೆ ಇದರಿಂದ ಜನರು ತೊಂದರೆ ಅನುಭವಿಸುವಂತಾಗುತ್ತಿದೆ.

ಸಿಂಧನೂರು: ಬಾಲ್ಯ ವಿವಾಹ ಪ್ರಕರಣ, ಮೂವರು ಅಪರಾಧಿಗಳಿಗೆ ಜೈಲು ಶಿಕ್ಷೆ

ಅಗ್ನಿ ಶಾಮಕ ಠಾಣೆಗಾಗಿ ಭೂಮಿ ಮಂಜೂರು: 

ಮಸ್ಕಿ ಪಟ್ಟಣದ ಲಿಂಗಸಗೂರು ರಸ್ತೆಯ ಬಳಿ ಸರ್ಕಾರ ಅಗ್ನಿ ಶಾಮಕ ಠಾಣೆ ನಿರ್ಮಾಣ ಮಾಡಲು 2.18 ಗುಂಟೆ ಜಮೀನನ್ನು ಮಂಜೂರು ಮಾಡಿದ್ದು, ಅಗ್ನಿ ಶಾಮಕ ಇಲಾಖೆಯ ಹೆಸರಿಗೆ ಮ್ಯುಟೆಶನ್‌ ಆಗಿದೆ. ಆದರೆ ಭೂಮಿಯ ಬಗ್ಗೆ ಖಾಸಗಿಯವರು ತಕರಾರು ಅರ್ಜಿ ಸಲ್ಲಿಸಿರುವುದರಿಂದ ಈವರೆಗೆ ವಿಳಂಬವಾಗುತ್ತಿದೆ ಎನ್ನಲಾಗಿದೆ. ಆದರೆ ಸರ್ಕಾರ ಭೂಮಿ ಮಂಜೂರು ಮಾಡಿ ಸುಮಾರು ನಾಲ್ಕು ವರ್ಷಗಳೇ ಗತಿಸಿದೆ ಆದರೆ ಅಗ್ನಿ ಶಾಮಕ ಠಾಣೆ ಮಂಜೂರು ಮಾಡದೇ ನಿರ್ಲಕ್ಷ್ಯ ವಹಿಸಿದೆ ಎಂದು ಸಾರ್ವಜನಿಕರು ದೂರುತ್ತಿದ್ದಾರೆ.

ಮಸ್ಕಿ ಪಟ್ಟಣದಲ್ಲಿ ಅಗ್ನಿ ಶಾಮಕ ಠಾಣೆ ನಿರ್ಮಿಸಲು ಸರ್ಕಾರ 2.18 ಗುಂಟೆ ಜಮೀನು ಮಂಜೂರು ಮಾಡಿದೆ. ಜಮೀನಿನ ತಕರಾರು ಇರುವುದರಿಂದ ನಮ್ಮ ಇಲಾಖೆಯಿಂದ ತಹಸೀಲ್ದಾರ್‌ ಅವರಿಗೆ ಪತ್ರ ಬರೆಯಲಾಗಿದೆ. ಮಸ್ಕಿಯಲ್ಲಿ ಠಾಣೆ ನಿರ್ಮಾಣವಾದರೆ ಸಾರ್ವಜನಿಕರಿಗೆ ತ್ವರಿತಗತಿಯಲ್ಲಿ ಸೇವೆ ನೀಡಲು ಅನೂಕೂಲವಾಗುತ್ತದೆ ಅಂತ ರಾಯಚೂರು ಜಿಲ್ಲಾ ಅಗ್ನಿ ಶಾಮಕ ಅಧಿಕಾರಿ ರವೀಂದ್ರ ಘಾಟೆ ಹೇಳಿದ್ದಾರೆ. 

ಮಸ್ಕಿ ತಾಲೂಕು ಕೇಂದ್ರಕ್ಕೆ ಅಗತ್ಯವಿರುವ ಕಚೇರಿಗಳನ್ನು ಆರಂಭಿಸುವಂತೆ ಮೂರ್ನಾಲ್ಕು ಬಾರಿ ಸರ್ಕಾರದ ಗಮನಕ್ಕೆ ತಂದಿದ್ದೇನೆ. ಆದರೂ ಈವರಗೆ ಸರ್ಕಾರಿ ಕಚೇರಿಗಳನ್ನು ಮಂಜೂರು ಮಾಡುತ್ತಿಲ್ಲ. ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವುದನ್ನು ಸರ್ಕಾರದ ಗಮನಕ್ಕೆ ತಂದು ಅಗ್ನಿ ಶಾಮಕ ಠಾಣೆ ಸೇರಿದಂತೆ ಎಲ್ಲಾ ಕಚೇರಿಗಳನ್ನು ಆರಂಭಿಸುವಂತೆ ಮತ್ತೊಮ್ಮೆ ಒತ್ತಾಯಿಸಲಾಗುವುದು ಅಂತ ಮಸ್ಕಿ ಶಾಸಕ ಆರ್‌. ಬಸನಗೌಡ ತುರ್ವಿಹಾಳ ತಿಳಿಸಿದ್ದಾರೆ. 

click me!