* ಖ್ಯಾತ ಭರತನಾಟ್ಯ ಕಲಾವಿದೆ ಬಿ. ಭಾನುಮತಿ ನಿಧನ
* ಕೊರೋನಾ ಸೋಂಕಿನಿಂದ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು
* 'ನೃತ್ಯ ಕಲಾ ಮಂದಿರಂ ' ಶಾಲೆ ಮೂಲಕ ನೂರಾರು ನೃತ್ಯ ಕಲಾವಿದರು ತಯಾರಾಗಿದ್ದರು
* ಅಮೆರಿಕ, ಬ್ರಿಟನ್ ಮುಂತಾದ ದೇಶಗಳಲ್ಲಿ ಅವರ ನೃತ್ಯ ರೂಪಕ ಮನ್ನಣೆ ಪಡೆದುಕೊಂಡಿತ್ತು
ಬೆಂಗಳೂರು(ಮೇ 24) ಕರ್ನಾಟಕ ಕಂಡ ಅಪ್ರತಿಮ ನೃತ್ಯ ಕಲಾವಿದರಲ್ಲಿ ಒಬ್ಬರಾಗಿದ್ದ ನೃತ್ಯ ಗುರು ಬಿ .ಭಾನುಮತಿ ಅವರು ಕೊರೊನಾದಿಂದ ಸೋಮವಾರ ನಿಧನ ಹೊಂದಿದ್ದಾರೆ. ಕಳೆದ ಒಂದು ವಾರದಿಂದ ಕೊರೋನಾಗೆ ಚಿಕಿತ್ಸೆ ಪಡೆಯುತ್ತಿದ್ದರು.
ಮೂಲತ: ಕಲಾವಿದರ ಕುಟುಂಬದಿಂದಲೇ ಬಂದ ಬಿ. ಭಾನುಮತಿ ಭರತನಾಟ್ಯ ನೃತ್ಯ ಪ್ರಕಾರದಲ್ಲಿ ದೊಡ್ಡ ಹೆಸರು ಮಾಡಿದವರು. ರಾಷ್ಟ್ರೀಯ, ಅಂತರ ರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕ ಶಾಸ್ತ್ರೀಯ ನೃತ್ಯ ಸೌಂದರ್ಯವನ್ನು ಪಸರಿಸಿದವರು ಭಾನುಮತಿ.
ಲಕ್ಷಾಂತರ ಸುಂದರ ಚಿತ್ರ ಹಿಡಿದು ಮರೆಯಾದ ನೇತ್ರರಾಜು
ಅವರ 'ನೃತ್ಯ ಕಲಾ ಮಂದಿರಂ ' ಶಾಲೆ ಮೂಲಕ ನೂರಾರು ನೃತ್ಯ ಕಲಾವಿದರನ್ನು ತಯಾರು ಮಾಡಿದ ಕೀರ್ತಿ ಭಾನುಮತಿ ಅವರಿಗೆ ಸಲ್ಲುತ್ತದೆ .ಅವರ ಸಂಯೋಜನೆಯ 'ಭರತಾಂಜಲಿ ' ನೃತ್ಯ ರೂಪಕ ಅಮೆರಿಕ, ಬ್ರಿಟನ್ ಮುಂತಾದ ದೇಶಗಳಲ್ಲಿ ಪ್ರದರ್ಶಿತವಾಗಿ ಜನಪ್ರಿಯವಾಗಿದೆ.
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಕಲಾಶ್ರೀ ಪ್ರಶಸ್ತಿ, ,ಕೇಂದ್ರ ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಅಸಂಖ್ಯ ಸನ್ಮಾನಗಳಿಗೆ ಭಾಜನರಾದ ಭಾನುಮತಿ ಅವರ ನಿಧನದಿಂದ ಕರ್ನಾಟಕ ಸಾಂಸ್ಕೃತಿಕ ಲೋಕ ದೊಡ್ಡ ನಷ್ಟ ಅನುಭವಿಸಿದೆ. ಕರೋನಾ ಮತ್ತೊಬ್ಬ ಕಲಾವಿದರನ್ನು ಕರೆದೊಯ್ದಿದೆ.
ಕರ್ನಾಟಕ ಕಂಡ ಅಪ್ರತಿಮ ನೃತ್ಯ ಕಲಾವಿದರಲ್ಲಿ ಒಬ್ಬರಾಗಿದ್ದ , ನೃತ್ಯ ಗುರು ಬಿ .ಭಾನುಮತಿ ಅವರು ನಿಧನರಾದ ಸುದ್ದಿ ತಿಳಿದು ದುಃಖವಾಗಿದೆ. ಭಗವಂತ ಅವರ ಆತ್ಮಕ್ಕೆ ಶಾಂತಿ ನೀಡಲಿ, ಕುಟುಂಬಕ್ಕೆ , ಅಭಿಮಾನಿಗಳಿಗೆ ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿ ದಯಪಾಲಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಸಚಿವ ಅರವಿಂದ್ ಲಿಂಬಾವಳಿ ಸಂತಾಪ ಸೂಚಿಸಿದ್ದಾರೆ.