'2023ಕ್ಕೆ ಎಚ್‌ಡಿಕೆ ರಾಜ್ಯದ ಮುಖ್ಯಮಂತ್ರಿ'

By Kannadaprabha NewsFirst Published Dec 3, 2020, 1:08 PM IST
Highlights

ರಾಜ್ಯದಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿದೆ. ಇದೇ ವೇಳೆ ವಿವಿಧ ಪಕ್ಷಗಳು ವಿವಿಧ ರಾಜಕೀಯ ಚಟುಟವಿಕೆಗಳು ಗರಿಗೆದರಿಗೆ ಇದೇ ವೇಳೆ ಜೆಡಿಎಸ್‌ನಲ್ಲಿಯೂ ಭಾರೀ ತಯಾರಿ ಈಗಾಗಲೇ ಶುರುವಾಗಿದೆ. 

ಭಾರತೀನಗರ (ಡಿ.03):  ಮಂಡ್ಯ-ಮೈಸೂರು, ರಾಮನರಕ್ಕೆ ಮಾತ್ರ ಜೆಡಿಎಸ್‌ ಪಕ್ಷ ಸೀಮಿತವಾಗಿಲ್ಲ. ಉತ್ತರ ಕರ್ನಾಟಕ ಭಾಗದಲ್ಲೂ ಪಕ್ಷ ಪ್ರಬಲವಾಗಿ ಬೆಳೆದಿದೆ ಎಂದು ಜೆಡಿಎಸ್‌ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ಕುಮಾರಸ್ವಾಮಿ ಅವರು ಹೇಳಿದರು.

ಕೆ.ಎಂ.ದೊಡ್ಡಿಯ ಸಂತೋಷ್‌ ತಮ್ಮಣ್ಣ ಅವರ ನಿವಾಸದಲ್ಲಿ ಕಾರ್ಯಕರ್ತರಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿ, 2023ಕ್ಕೆ ಎಚ್‌.ಡಿ.ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡುವುದೇ ನಮ್ಮ ಗುರಿ. ಇದಕ್ಕಾಗಿ ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ಎಲ್ಲ 30 ಜಿಲ್ಲೆಗಳಲ್ಲೂ ಪ್ರವಾಸ ಕೈಗೊಳ್ಳಲಾಗುವುದು ಎಂದರು.

ಎಚ್‌.ಡಿ. ಕುಮಾರಸ್ವಾಮಿ ಅವರು ಭಾವನಾತ್ಮಕ ಮನುಷ್ಯ. ಅವರು ಕೇವಲ ಮಂಡ್ಯ, ರಾಮನಗರ ಜಿಲ್ಲೆಗಳಿಗೆ ಮಾತ್ರ ಮುಖ್ಯಮಂತ್ರಿ ಎಂದು ವಿರೋಧಿಗಳು ಅಣಕ ಮಾಡಿದರು. ಅವರು ಎಲ್ಲ ಜಿಲ್ಲೆಗಳಿಗೂ ಅನುದಾನವನ್ನು ಪಕ್ಷಭೇದ ಮರೆತು ನೀಡಿದ್ದಾರೆ. ಮಂಡ್ಯ ಜಿಲ್ಲೆ ಬಗ್ಗೆ ಹೆಚ್ಚು ಅಭಿಮಾನ ಇದ್ದುದರಿಂದ ಸ್ವಲ್ಪ ಹೆಚ್ಚಿನ ಅನುದಾನ ನೀಡಿದ್ದಾರೆ ಎಂದು ಸಮರ್ಥಿಸಿಕೊಂಡರು.

ಸಿಪಿವೈಗೆ ಮಂತ್ರಿ ಸ್ಥಾನ ಸಿಕ್ಕರೆ ಭಯವಿಲ್ಲ:

ಚನ್ನಪಟ್ಟಣ ಕ್ಷೇತ್ರದ ಶಾಸಕರಾಗಿ ಎಚ್‌.ಡಿ.ಕುಮಾರಸ್ವಾಮಿ ಅವರು 126 ಕೆರೆಗಳನ್ನು ತುಂಬಿಸಿ, ಬಹಳಷ್ಟುಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಸಿ.ಪಿ.ಯೋಗೇಶ್ವರ್‌ ಅವರಿಗೆ ಮಂತ್ರಿ ಸ್ಥಾನ ಸಿಕ್ಕರೆ ನಮಗೇನು ಭಯವಿಲ್ಲ. ಅವರು ಚನ್ನಪಟ್ಟಣದ ಭಗೀರಥ ಎಂದು ಕರೆಸಿಕೊಳ್ಳುತ್ತಾರೆ. ಅವರ ಬಗ್ಗೆ ಮಾತನಾಡಲು ನಾನು ಇಷ್ಟಪಡೋಲ್ಲ ಎಂದರು.

ದಾಖಲೆ ಬಿಡುಗಡೆ ಮಾಡ್ತಾರಂತೆ: ಕುಮಾರಸ್ವಾಮಿಗೆ ಶುರುವಾಯ್ತು ಸಂಕಷ್ಟ..! ..

ಎಚ್‌.ವಿ.ವಿಶ್ವನಾಥ್‌ ಅವರು ಹಿರಿಯರು, ಅನುಭವಿ ರಾಜಕಾರಣಿಗಳು. ಅವರಿಗೆ ದೇವರೇ ಶಿಕ್ಷೆ ನೀಡಿದ್ದಾನೆ. ಅವರ ಸ್ವಾರ್ಥ, ವೈಯಕ್ತಿಕ ಕಾರಣ ಹಾಗೂ ಅವರ ಒಳಿತಿಗಾಗಿ ಬಿಜೆಪಿಯೊಂದಿಗೆ ಹೋಗಿದ್ದಾರೆಯೇ ಹೊರತು, ರಾಜ್ಯದ ಅಭಿವೃದ್ಧಿಗಾಗಿ ಏನಲ್ಲ ಎಂದು ಛೇಡಿಸಿದರು.

ಮಂಡ್ಯ ಜನತೆ ನಮಗೆ ಮೋಸ ಮಾಡಿಲ್ಲ:

ಕಳೆದ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್‌ ಪಕ್ಷದಿಂದ ಸ್ಪರ್ಧೆಮಾಡಿದ್ದ ಸಿ.ಎಸ್‌.ಪುಟ್ಟರಾಜು ಅವರಿಗೆ 5.25 ಲಕ್ಷ ಮತಗಳನ್ನು ನೀಡಿ ಆಯ್ಕೆಗೊಳಿಸಿದ್ದರು. ನನಗೆ ಮಂಡ್ಯ ಜಿಲ್ಲೆಯ ಜನತೆ ಮೋಸಮಾಡಲಿಲ್ಲ. ಪುಟ್ಟರಾಜು ಅವರಿಗಿಂತಲೂ 50 ಸಾವಿರ ಹೆಚ್ಚು ಮತಗಳನ್ನು ನೀಡಿದ್ದಾರೆ. ರಾಜಕೀಯ ಕುತಂತ್ರದಿಂದ ನಾನು ಸೋಲು ಅನುಭವಿಸಿದ್ದೇನೆ ಹೊರತು ಮಂಡ್ಯ ಜಿಲ್ಲೆಯ ಜನತೆಯಿಂದಲ್ಲ ಎಂದರು.

ಪಂಚಾಯ್ತಿಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಬೆಂಬಲಿಸಿ:

ಗ್ರಾಪಂ ಚುನಾವಣೆಯು ಪಕ್ಷದ ಚಿಹ್ನೆಯಡಿ ನಡೆಯುವುದಿಲ್ಲ. ಆದರೆ, ಅಭ್ಯರ್ಥಿಗಳು ಪಕ್ಷದ ಬೆಂಬಲಿಗರಾಗಿ ನಿಲ್ಲುವುದರಿಂದ ಯಾವುದೇ ಗೊಂದಲಗಳಿದ್ದರೆ ಸ್ಪರ್ಧಿಗಳೇ ಬಗೆಹರಿಸಿಕೊಂಡರೆ ಒಳ್ಳೆಯದು. ಜೆಡಿಎಸ್‌ ಬೆಂಬಲಿತ ಅಭ್ಯರ್ಥಿಗಳಾಗಿ ಸ್ಪರ್ಧಿಸಲು ಈಗಾಗಲೇ ಹಲವು ಆಕಾಂಕ್ಷಿತರು ವರಿಷ್ಠರು ಹಾಗೂ ನನ್ನನ್ನು ಭೇಟಿ ಮಾಡಿದ್ದಾರೆ. ಜನತೆಯ ಸಮಸ್ಯೆಗಳಿಗೆ ಸ್ಪಂದಿಸಿ, ಅವರ ಮಧ್ಯೆ ಇರುವಂತಹವರನ್ನು ಪಕ್ಷ ಬೆಂಬಲಿಸಲಿದೆ ಎಂದರು.

ಮುಂದಿನ ಏಪ್ರಿಲ್‌ ಅಂತ್ಯದಲ್ಲಿ ತಾಪಂ ಹಾಗೂ ಜಿಪಂ ಚುನಾವಣೆ ನಡೆಯುವ ಸಂಭವವಿದ್ದು, ಈ ಹಿನ್ನೆಲೆಯಲ್ಲಿ ಪಕ್ಷದ ಕಚೇರಿಯಲ್ಲಿ ತುರ್ತು ಸಭೆ ಕರೆದು ಚರ್ಚಿಸಲಾಗುವುದು. ಅಲ್ಲದೇ, ಕೆಲ ಬದಲಾವಣೆಗಳನ್ನು ಮಾಡುವ ಅವಶ್ಯಕತೆ ಇದ್ದು, ಪ್ರಸ್ತುತ ಇರುವ ಹಿರಿಯರು ಅವರಿಗೆ ವಹಿಸಿರುವ ಕೆಲಸವನ್ನು ನಿಭಾಯಿಸಲು ಸಾಧ್ಯವಾಗದಿದ್ದರೆ ಯುವಕರಿಗೆ ಸ್ಥಾನ ಬಿಟ್ಟುಕೊಡುವುದು ಒಳಿತು ಎಂದರು.

ಹಾಗೆಂದ ಮಾತ್ರಕ್ಕೆ ಎಲ್ಲ ಹಿರಿಯರನ್ನು ಬದಲಾವಣೆ ಮಾಡುವುದಿಲ್ಲ. ಹಿರಿಯರ ಅನುಭವ ಅವಶ್ಯಕವಾಗಿದ್ದು, ಅವರ ಮಾರ್ಗದರ್ಶನದಲ್ಲೇ ಪಕ್ಷ ಸಂಘಟಿಸುವುದರ ಜತೆಗೆ ಯುವಕರಿಗೆ ಮಾರ್ಗದರ್ಶನ ನೀಡಲಾಗುವುದು. ಯುವಕರಲ್ಲೂ ಪ್ರತಿಭಾನ್ವಿತರು, ಬುದ್ಧಿವಂತರಿದ್ದಾರೆ ಎಂದರು.

ಇದೇ ವೇಳೆ ಜೆಡಿಎಸ್‌ ಮುಖಂಡ ಸಂತೋಷ್‌ತಮ್ಮಣ್ಣ, ತಾಲ್ಲೂಕು ಅಧ್ಯಕ್ಷ ಚಿಕ್ಕತಿಮ್ಮೇಗೌಡ, ಜಿಲ್ಲಾಗೌರವಾಧ್ಯಕ್ಷ ಎಚ್‌.ಎಂ.ಮರಿಮಾದೇಗೌಡ ಸೇರಿದಂತೆ ಇತರರಿದ್ದರು.

click me!