
ಚಿಕ್ಕಮಗಳೂರು: ಜಿಲ್ಲೆಯ ಕಡೂರು ಬಳ ಯುವಕ-ಯುವತಿ ಇಬ್ಬರು ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾಗಿರುವ ಘಟನೆ ವರದಿಯಾಗಿದೆ. ಮೃತರನ್ನು ಕುಣಿಗಲ್ ಮೂಲದ ರೋಹಿಣಿ ಹಾಗೂ ಬೆಂಗಳೂರು ಮೂಲದ ನವೀನ್ ಎಂದು ಗುರುತಿಸಲಾಗಿದ್ದು, ಆತ್ಮಹತ್ಯೆಗೂ ಮುನ್ನ ಇಬ್ಬರು ಡೆತ್ನೋಟ್ ಬರೆದಿಟ್ಟು ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಮೃತರು ಬರೆದಿಟ್ಟಿದ್ದಾರೆ ಎಂಬ ಡೆತ್ನೋಟ್ನಲ್ಲಿ, ನಮ್ಮ ಸಂಬಂಧಕ್ಕೆ ಕಳಂಕ ಹಚ್ಚಬೇಡಿ ಎಂದು ಮನವಿ ಮಾಡಿದ್ದಾರೆ. ನಾವು ರಕ್ತ ಸಂಬಂಧಿಕರಲ್ಲದಿದ್ದರೂ, ನಮ್ಮ ಸಂಬಂಧಕ್ಕೆ ಕಳಂಕ ಹಚ್ಚಬೇಡಿ ಎಂದ ಉಲ್ಲೇಖಿಸಿದ್ದಾರೆ.
ಮೃತರಿಬ್ಬರು ಅನ್ಯೋನ್ಯವಾಗಿದ್ದನ್ನು ಕಂಡು ಸಂಬಂಧಿಕರು, ಸ್ನೇಹಿತರು ಪ್ರೀತಿ ಎಂದು ಕಥೆ ಕಟ್ಟಿದ್ದ ಆರೋಪ ಕೇಳಿಬಂದಿದೆ. ಅಕ್ಕ-ತಮ್ಮನ ಸಂಬಂಧಕ್ಕೆ ಪ್ರೀತಿ ಎಂಬ ಬಣ್ಣ ನೀಡಿದ್ದರಿಂದ, ಸಂಬಂಧಿಕರ ಚುಚ್ಚು ಮಾತಿನಿಂದ ಮನನೊಂದು ಇಬ್ಬರು ಆತ್ಮಹತ್ಯೆಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದೆ.
ಇನ್ನು, ಇಬ್ಬರ ಅಂತ್ಯಕ್ರಿಯೆಯನ್ನು ಒಂದೇ ಕಡೆ ಮಾಡುವಂತೆ ಡೆತ್ನೋಟ್ನಲ್ಲಿ ಉಲ್ಲೇಖ ಮಾಡಿದ್ದಾರೆ ಎಂದು ಎನ್ನಲಾಗಿದ್ದು, ಬೆಳೆದು ಕೈಗೆ ಬಂದಿದ್ದ ಮಕ್ಕಳನ್ನು ಕಳೆದುಕೊಂಡ ಕುಟುಂಬಸ್ಥ ಆಕ್ರಂಧನ ಮುಗಿಲು ಮುಟ್ಟಿದೆ. ಘಟನೆ ಕುರಿತು ಅರಸೀಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಡೆತ್ನೋಟ್ ಸೇರಿದಂತೆ ಎಲ್ಲಾ ಆಯಾಮಗಳಲ್ಲಿಯೂ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
'ನಾವು ಇಬ್ಬರು ರಕ್ತಹಂಚಿಕೊಂಡು ಹುಟ್ಟಿಲ್ಲ, ಆದರೆ ನಾವು ಯಾವುದೇ ಬೇಧ ಭಾವ ಇಲ್ಲದೆ ಸಹೋದರ ರೀತಿ ಇದ್ದೇವೆ. ಆದರೆ ನಮಗೆ ಮನೆಯಲ್ಲಿಯೂ ಬೆಂಬಲ ಸಿಗಲಿಲ್ಲ. ನಮ್ಮ ರಿಲೆಷನ್ಶಿಪ್ ನೋಡದರೆ ಯಾರಿಗೂ ಆಗುತ್ತಿರಲಿಲ್ಲ. ಒಟ್ಟಿಗೆ ಬದುಕಲು ಆಗಲಿಲ್ಲ, ಅದಕ್ಕೆ ಒಟ್ಟಿಗೆ ಸಾಯೋದಕ್ಕೆ ನಿರ್ಧಾರ ಮಾಡಿದ್ದೇವೆ. ಇನ್ನ ಮೇಲೆ ಚೆನ್ನಾಗಿರಿ, ನಾವು ಯಾರಿಗೂ ತೊಂದರೆ ಕೊಡುವುದಿಲ್ಲ. ನಾವು ಸತ್ತ ಮೇಲೆ ನಮ್ಮನ್ನು ಒಂದೇ ಹತ್ತಿರ ಹಾಗೂ ಪಕ್ಕ ಪಕ್ಕದಲ್ಲೇ ಅಂತ್ಯಕ್ರಿಯೆ ಮಾಡಬೇಕು, ನಮಗೆ ನೆಮ್ಮದಿ ಸಿಗುತ್ತದೆ. ಇದು ನಮ್ಮಿಬ್ಬರ ಮನವಿ' ಎಂದು ಬರೆದುಕೊಂಡಿದ್ದಾರೆ.