ಗೋಕರ್ಣ: 1.26 ಲಕ್ಷ ಮನೆಗಳಿಗೆ ನೀರು ಪೂರೈಕೆ, ಸಚಿವ ಹೆಬ್ಬಾರ

By Kannadaprabha NewsFirst Published Nov 2, 2021, 10:22 AM IST
Highlights

*  ಜಲಜೀವನ ಯೋಜನೆಯಡಿ ಎಲ್ಲ ಮನೆಗಳಿಗೆ ನಳ ಸಂಪರ್ಕ
*  ತೊರ್ಕೇ ಗ್ರಾಮ ಪಂಚಾಯಿತಿ ನೂತನ ಕಟ್ಟಡ ಉದ್ಘಾಟಿಸಿ ಸಚಿವ ಹೆಬ್ಬಾರ
*  ಪುನೀತ ನಿಧನಕ್ಕೆ ಶಿವರಾಮ ಹೆಬ್ಬಾರ ಸಂತಾಪ
 

ಗೋಕರ್ಣ(ನ.02):  ಜಲಜೀವನ ಯೋಜನೆಯಡಿ(Jal Jeevan Mission) ಒಟ್ಟು 1.26 ಲಕ್ಷ ಮನೆಗಳಿಗೆ ನೀರು(Water) ಪೂರೈಕೆ ಮಾಡಲಾಗಿದ್ದು, ಎರಡು ಹಂತದಲ್ಲಿ ಅನುಷ್ಠಾನ ಮಾಡಲಾಗಿದೆ ಎಂದು ಕಾರ್ಮಿಕ ಹಾಗೂ ಜಿಲ್ಲಾ ಉಸ್ತವಾರಿ ಸಚಿವ ಶಿವರಾಮ ಹೆಬ್ಬಾರ(Shivaram Hebbar) ಹೇಳಿದ್ದಾರೆ. 

ಇಲ್ಲಿನ ತೊರ್ಕೇ ಗ್ರಾಮ ಪಂಚಾಯಿತಿ ನೂತನ ಕಟ್ಟಡ ಉದ್ಘಾಟನೆ, ಜಲಜೀವನ ಮಿಷನ್‌ ಯೋಜನೆ ಅಡಿ ನೀರು ಪೂರೈಕೆ ಕಾಮಗಾರಿಗೆ ಚಾಲನೆ ಮತ್ತು ತ್ಯಾಜ್ಯ ಸಂಸ್ಕೃರಣಾ ಘಟಕವನ್ನು ಉದ್ಘಾಟಿಸಿ ನಂತರ ನಡೆದ ಸಮಾರಂಭದಲ್ಲಿ ಮಾತನಾಡಿದರು.

ಸರ್ಕಾರ(Government) ಜಾರಿಗೆ ತರುವ ಯೋಜನೆಗಳನ್ನು ಗ್ರಾಮಾಂತರ ಪ್ರದೇಶಗಳಿಗೆ ಸಮರ್ಪಕವಾಗಿ ಬಳಕೆ ಮಾಡಲು ಸ್ಥಳೀಯ ಗ್ರಾಪಂ ಚುನಾಯಿತ ಪ್ರತಿನಿಧಿ ಹಾಗೂ ಅಧಿಕಾರ ವರ್ಗ ಕಾರಣರಾಗುತ್ತಾರೆ. ಈ ನಿಟ್ಟಿನಲ್ಲಿ ಕಾರ್ಯವಾಗದಿದ್ದರೆ ಸರ್ಕಾರದ ಯೋಜನೆಗಳು ವ್ಯರ್ಥವಾಗುತ್ತದೆ. ಆದರೆ ಸರ್ಕಾರದ ಯೋಜನೆಗಳನ್ನು ಜನರಿಗೆ ತಲಿಪಿಸುವ ಕಾರ್ಯವನ್ನು ಹೇಗೆ ಮಾಡಬೇಕು ಎಂದು ಇಲ್ಲಿನ ಪಂಚಾಯತ್‌ ಅಧ್ಯಕ್ಷ ಹಾಗೂ ಸದಸ್ಯರು ತೋರಿಸಿಕೊಟ್ಟಿದ್ದು, ಅವರ ಆಡಳಿತ ಮಾದರಿಯಾಗಿದೆ ಎಂದು ಗ್ರಾಪಂ ಅಧ್ಯಕ್ಷ ಆನಂದು ಕವರಿ ಮತ್ತು ಸದಸ್ಯರು ಮತ್ತು ಅಧಿಕಾರಿಗಳನ್ನು ಅಭಿನಂದಿಸಿ, ಎಲ್ಲಾ ಅಭಿವೃದ್ಧಿ ಕಾರ್ಯಗಳಿಗೆ ತನ್ನ ಸಹಕಾರ ಇದೆ ಎಂದರು.

ಸಮುದ್ರದಾಳದಲ್ಲಿ ಮೊದಲ ಸಲ ಕನ್ನಡ ಧ್ವಜಾರೋಹಣ!

ಶಾಸಕ ದಿನಕರ ಶೆಟ್ಟಿ ಮಾತನಾಡಿ, ಅಧಿಕಾರ ವಹಿಸಿಕೊಂಡು ಕೇವಲ ಒಂಭತ್ತು ತಿಂಗಳಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಿದ ಗ್ರಾಪಂ ಅಧ್ಯಕ್ಷರು ಮತ್ತು ಸದಸ್ಯರ ಕಾರ್ಯದ ಬಗ್ಗೆ ಶ್ಲಾಘಿಸಿದರು. ಮಂದಿನ ದಿನದಲ್ಲಿ ಪ್ರಗತಿ ಕಾರ್ಯಗಳಿಗೆ ತಮ್ಮ ಸಹಕಾರ ಮುಂದುವರಿಯುತ್ತದೆ ಎಂದು ತಿಳಿಸಿದರು.

ಜಿಪಂ ಸಿಇಒ ಪ್ರಿಯಾಂಗ ಮಾತನಾಡಿ, ಜಲಜೀವನ್‌ ಮಿಷನ್‌ ಯೋಜನೆಯಡಿ ಈ ಭಾಗದ ಎಲ್ಲ ಗ್ರಾಪಂನಲ್ಲಿ ಮನೆ-ಮನೆಗೆ ಕುಡಿಯುವ ನೀರಿನ(Drinking Water) ಪೂರೈಕೆ ಕಾಮಗಾರಿ ಪ್ರಾರಂಭವಾಗುತ್ತದೆ ಎಂದು ತಿಳಿಸಿ ಯೋಜನೆಯ ಜಾರಿ ಕುರಿತು ವಿವರಿಸಿದರು.

ಪ್ರಾಸ್ತಾವಿಕವಾಗಿ ತೊರ್ಕೆ ಗ್ರಾಪಂ ಅಧ್ಯಕ್ಷ ಆನಂದು ಕವರಿ ಮಾತನಾಡಿ, ಅಭಿವೃದ್ಧಿ ಕಾರ್ಯಗಳಿಗೆ ಸಹಕರಿಸಿದ ಜಿಲ್ಲಾ ಉಸ್ತುವಾರಿ ಸಚಿವರು, ಸ್ಥಳೀಯ ಶಾಸಕರು ಹಾಗೂ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತು ಎಲ್ಲ ಇಲಾಖೆ ಅಧಿಕಾರಿಗಳು ಮತ್ತು ಗುತ್ತಿಗೆದಾರನ್ನು ಅಭಿನಂದಿಸಿ ಅಭಿವೃದ್ಧಿ ಕಾರ್ಯಗಳಿಗೆ ಸಹಕಾರ ಕೋರಿದರು.

ವೇದಿಕೆಯಲ್ಲಿ ಉಪಾಧ್ಯಕ್ಷೆ ಲಕ್ಷ್ಮೀ ಗೌಡ, ಜಲ್‌ ಜೀವನ ಯೋಜನೆಯ ಎಂಜಿನೀಯರ ಪ್ರಕಾಶ, ಡಯಟ್‌ ಪ್ರಾಚಾರ್ಯ ಈಶ್ವರ ನಾಯ್ಕ, ಪಂಚಾಯತ್‌ ರಾಜ್ಯ ಇಲಾಖೆ ಎಂಜೀನಿಯರ್‌ ಆರ್‌.ಜಿ. ಗುನಗಿ ಉಪಸ್ಥಿತರಿದ್ದರು. ಈ ವೇಳೆ ಗುತ್ತಿಗೆದಾರರಾದ ರಾಮು ಕೆಂಚನ್‌, ಗಜಾನನ ಜಿ. ನಾಯ್ಕ, ದೀಪಕಕುಮಾರ ಬಿ.ಆರ್‌. ಗಜಾನನ ಮೊಗೇರ ಅವರನ್ನು ಸನ್ಮಾನಿಸಲಾಯಿತು.

ಊರಿನ ಪ್ರಮುಖರಾದ ಕುಮಾರ ಕವರಿ ತೊರ್ಕೆ, ಮದನ ನಾಯಕ , ದಿ.ಎನ್‌. ನಾಯಕ, ಸಾಯಿ ಗಾಂವಕರ, ರಾಜೀವ ಗಾಂವಕರ, ಮೋಹನ ನಾಯಕ, ಪ್ರದೀಪ ನಾಯಕ ನಿವೃತ್ತ ಪೊಲೀಸ ಅಧಿಕಾರಿ ಎನ್‌.ಟಿ. ಪ್ರಮೋದ ರಾವ್‌, ಬಿಜೆಪಿಯ ವಿನೋದ ಪ್ರಭು, ಗೋಕರ್ಣ ಗ್ರಾಪಂ ಅಧ್ಯಕ್ಷ್ಯ ಮಂಜುನಾಥ ಜನ್ನು, ತಾಪಂ ಮಾಜಿ ಸದಸ್ಯ ಮಹೇಶ ಶೆಟ್ಟಿ, ಎಲ್ಲ ಗ್ರಾಪಂ ಸದಸ್ಯರು ಮತ್ತು ಪಂಚಾಯತ್‌ ಅಧಿಕಾರಿಗಳು ಮತ್ತು ಅಂಗನವಾಡಿ ಕಾರ್ಯಕರ್ತೆಯರು ಮತ್ತಿತತರು ಹಾಜರಿದ್ದರು.

ಪುನೀತ ನಿಧನಕ್ಕೆ ಸಂತಾಪ:

ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ನಟ ಪುನೀತ ರಾಜಕುಮಾರ(Puneeth Rajkumar) ನಿಧನಕ್ಕೆ ಸಂತಾಪ(Condolence) ಸೂಚಿಸಿದರು. ಭದ್ರಕಾಳಿ ಸಂಯುಕ್ತ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು ನಾಡಗೀತೆ ಹಾಡಿದರು. ತಾಪಂ ಇಒ ಸಿ.ಟಿ. ನಾಯಕ ಸ್ವಾಗತಿಸಿದರು. ಆರ್‌.ಜಿ. ಗುನಗಿ ವಂದಿಸಿದರು. ಸುಭಾಷ ಕಾರೇಬೈಲ್‌ ನಿರ್ವಹಿಸಿದರು.
 

click me!