
ಉಡುಪಿ: ಕೊಂಕಣ ರೈಲ್ವೆ ಭಾರತೀಯ ರೈಲ್ವೆಯೊಂದಿಗೆ ಸದ್ಯವೇ ವಿಲೀನವಾಗುವ ಸಾಧ್ಯತೆ ಇದೆ. ಇದರಿಂದ ಕೇಂದ್ರ ಸರ್ಕಾರದಿಂದ ಹೆಚ್ಚಿನ ಅನುದಾನ ದೊರೆಯುವುದಲ್ಲದೆ ರೈಲ್ವೆ ಅಭಿವೃದ್ಧಿ, ಜನಸ್ನೇಹಿಗೊಳಿಸಲು ಸಾಧ್ಯವಾಗಲಿದೆ ಎಂದು ಉಡುಪಿ - ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಶುಕ್ರವಾರ ಇಲ್ಲಿನ ಇಂದ್ರಾಳಿ ರೈಲ್ವೆ ನಿಲ್ದಾಣದಲ್ಲಿ ಕೊಂಕಣ ರೈಲ್ವೆ ವತಿಯಿಂದ ಪ್ಲಾಟ್ಫಾರ್ಮ್ಗಳ ನಡುವೆ ಓಡಾಡಲು ಹಿರಿಯ ನಾಗರಿಕರ, ವಿಶೇಷ ಚೇತನರ ಅನುಕೂಲಕ್ಕಾಗಿ 2.26 ಕೋಟಿ ರು. ವೆಚ್ಚದಲ್ಲಿ ಅಳವಡಿಸಲಾದ ಲಿಫ್ಟ್ ಗಳನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಬೆಂಗಳೂರು - ಮಂಗಳೂರು - ಉಡುಪಿ - ಕಾರವಾರ ನಡುವೆ ವಂದೇ ಭಾರತ್ ರೈಲು ಓಡಾಟಕ್ಕೆ ಸಿದ್ದತೆಗಳಾಗುತ್ತಿದ್ದು, ಪ್ರಸ್ತುತ ಪ್ರಾಯೋಗಿಕವಾಗಿ ಸರ್ವೆ ಕಾರ್ಯ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಬಾರ್ಕೂರು ರೈಲ್ವೆ ನಿಲ್ದಾಣ ಅಭಿವೃದ್ಧಿಗೆ ಸುಮಾರು 14 ಕೋಟಿ ರು. ಯೋಜನೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಶೀಘ್ರ ಮಂಜೂರಾಗುವ ಭರವಸೆ ಇದೆ ಎಂದರು.
ಉಡುಪಿ ಶಾಸಕ ಯಶ್ಪಾಲ್ ಎ ಸುವರ್ಣ ಮಾತನಾಡಿ, ಈ ದಿನ ಪ್ರಧಾನಿ ನರೇಂದ್ರ ಮೋದಿ ಅವರು ಹೈಡ್ರೋಜನ್ ಟ್ರೈನ್ ಮತ್ತು ಅಮೃತ್ ಯೋಜನೆಯಡಿ ಮೇಲ್ದರ್ಜೆಗೇರಿಲಾದ ದೇಶದ ಸುಮಾರು 75 ರೈಲ್ವೆ ಸ್ಟೇಷನ್ಗಳನ್ನು ಲೋಕಾರ್ಪಣೆ ಮಾಡಿದ್ದು, ಇದೇ ಹೊತ್ತಿಗೆ ಇಂದ್ರಾಳಿ ರೈಲ್ವೆ ನಿಲ್ದಾಣದಲ್ಲಿ ಹಿರಿಯರ ನಾಗರಿಕರಿಗಾಗಿ ಲಿಫ್ಟ್ ಗೆ ಚಾಲನೆ ನೀಡಲಾಗಿದೆ. ಪ್ರಯಾಣಿಕರು ರಾತ್ರಿ ವೇಳೆ ಆಶ್ರಯಕ್ಕಾಗಿ ಈಗಾಗಲೇ ಶೆಲ್ಟರ್ ನಿರ್ಮಿಸಲಾಗಿದೆ. ಮುಂದೆ ಈ ನಿಲ್ದಾಣದ ಸುತ್ತಮುತ್ತಲಿನ ಪರಿಸರವನ್ನು ಸುಂದರಗೊಳಿಸುವ, ರಸ್ತೆಯನ್ನು ಅಗಲಗೊಳಿಸುವ ಯೋಜನೆ ಇದೆ ಎಂದರು.
ಇದನ್ನೂ ಓದಿ: ₹17.20 ಕೋಟಿ ವೆಚ್ಚದಲ್ಲಿ ಅಳ್ನಾವರ ರೈಲು ನಿಲ್ದಾಣಕ್ಕೆ ಹೈಟೆಕ್ ಸ್ಪರ್ಶ: ಪ್ರಧಾನಿ ಮೋದಿ ಲೋಕಾರ್ಪಣೆ
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ರೈಲ್ವೆ ಇಲಾಖೆಯ ಉಪಮುಖ್ಯ ಇಂಜಿನಿಯರ್ ವಿಜಯ್ ಕುಮಾರ್, ಕೊಂಕಣ ರೈಲ್ವೆ ಪಿಆರ್ಓ ಸುಧಾ ಕೃಷ್ಣಮೂರ್ತಿ ಮತ್ತಿತರರಿದ್ದರು.
ಕಾರವಾರ ಪ್ರಾದೇಶಿಕ ರೈಲ್ವೆ ಪ್ರಬಂಧಕಿ ಆಶಾ ಶೆಟ್ಟಿ ಸ್ವಾಗತಿಸಿ, ಅವಿನಾಶ್ ಕಾಮತ್ ನಿರೂಪಿಸಿ, ಕೊಂಕಣ ರೈಲ್ವೆಯ ಹಿರಿಯ ಪ್ರಾದೇಶಿಕ ವ್ಯವಸ್ಥಾಪಕ ದಿಲೀಪ್ ಭಟ್ ವಂದಿಸಿದರು.
ಇದನ್ನೂ ಓದಿ: ದೇಶದ ಮೊದಲ ಜಲಜನಕ ರೈಲಿಗೆ ಹಸಿರು ನಿಶಾನೆ ತೋರಿದ ಪ್ರಧಾನಿ ನರೇಂದ್ರ ಮೋದಿ, ಇತಿಹಾಸ ಬರೆದ ಭಾರತೀಯ ರೈಲ್ವೆ