'ಸರ್ಕಾರ ಬೇಗ ಮಹದಾಯಿ ಕಾಮಗಾರಿ ಪ್ರಾರಂಭಿಸಬೇಕು'

By Kannadaprabha NewsFirst Published Mar 24, 2021, 12:00 PM IST
Highlights

ಕೇಂದ್ರ ಸರ್ಕಾರ ಕೂಡ ನೀರು ಪಡೆದುಕೊಳ್ಳಲು ರಾಜ್ಯಕ್ಕೆ ಗೆಜೆಟ್‌ ನೋಟಿಫಿಕೇಶನ್‌ ಹೊರಡಿಸಿದೆ| ರಾಜ್ಯ ಸರ್ಕಾರ ಹಿಂದಿನ ವರ್ಷ ಬಜೆಟ್‌ನಲ್ಲಿ 500 ಕೋಟಿ ರು. ಅನುದಾನ ಮೀಸಲಿರಸಿದೆ| ಈ ವರ್ಷ ಕೂಡ ಈ ಯೋಜನೆ ಕಾಮಗಾರಿಗೆ 1600 ಕೋಟಿ ರು. ಅನುದಾನ ಮೀಸಲಾಗಿರಸಿದ್ದು ಈ ಭಾಗದ ರೈತರಿಗೆ ಸಂತೋಷ ತಂದಿದೆ: ವೀರೇಶ ಸೊಬರದಮಠ ಶ್ರೀ| 

ನರಗುಂದ(ಮಾ.24):  ರಾಜ್ಯದ ಉತ್ತರ ಕರ್ನಾಟಕ ಭಾಗದ ರೈತ ಸಮುದಾಯದ ಬಹುದಿನಗಳ ಬೇಡಿಕೆಯಾದ ಮಹದಾಯಿ ಹಾಗೂ ಕಳಸಾ ಬಂಡೂರಿ ಹಳ್ಳದ ನೀರು ಪಡೆದುಕೊಳ್ಳಲು ಸರ್ಕಾರ ಬೇಗ ಕಾಮಗಾರಿ ಪ್ರಾರಂಭ ಮಾಡಬೇಕೆಂದು ರಾಜ್ಯ ರೈತಸೇನಾ ಸಂಘಟನೆ ರಾಜ್ಯಾಧ್ಯಕ್ಷ ವೀರೇಶ ಸೊಬರದಮಠ ಶ್ರೀ ಆಗ್ರಹಿಸಿದರು.

ಅವರು ಮಂಗಳವಾರ ಪಟ್ಟಣದ ಎ.ಪಿ. ಪಾಟೀಲರ ಗೋದಾಮಿನಲ್ಲಿ ನಾಲ್ಕು ಜಿಲ್ಲೆ ಹನ್ನೂಂದು ತಾಲೂಕಿನ ಸಮಾಲೋಚನೆ ಸಭೆಯಲ್ಲಿ ಮಾತನಾಡಿ, ಮಲಪ್ರಭ ಅಚ್ಚುಕಟ್ಟು ಪ್ರದೇಶದ ರೈತರು ಕಳೆದ 20 ವರ್ಷದಿಂದ ನಮ್ಮ ನೆಲದಲ್ಲಿ ಹರಿಯುವ ಮಹದಾಯಿ ಹಾಗೂ ಕಳಸಾ ಬಂಡೂರಿ ನಾಲಾ ಹಳ್ಳಗಳಲ್ಲಿನ ನಮ್ಮ ಪಾಲಿನ ನೀರು ಪಡೆದುಕೊಳ್ಳಲು ಸರ್ಕಾರ ಕಾಮಗಾರಿ ಪ್ರಾರಂಭ ಮಾಡಿದ್ದು ಈ ಭಾಗದ ರೈತರಿಗೆ ನಿರಾಸೆ ತಂದಿದೆ ಎಂದು ಹೇಳಿದ್ದಾರೆ.

ಮಹದಾಯಿ ಮೇಲುಸ್ತುವಾರಿ ಸಮಿತಿಗೆ ಕೃಷ್ಣೋಜಿರಾವ್‌ ನೇಮಕ

ಬಂಡಾಯ ನೆಲದಲ್ಲಿ ಕಳೆದ ಐದು ವರ್ಷದಿಂದ ಮಹದಾಯಿ ಹಾಗೂ ಕಳಸಾ ಬಂಡೂರಿ ನಾಲಾ ಯೋಜನೆ ಜಾರಿಗೊಳಸಬೇಕೆಂದು ಈ ಭಾಗದ ರೈತರು ನಿರಂತರ ಹಲವಾರು ರೀತಿ ಹೋರಾಟ ಮಾಡಿದ್ದರಿಂದ ಈ ಮಹದಾಯಿ ಜಲ ವಿವಾದಕ್ಕೆ ನೇಮಕವಾದ ನ್ಯಾಯಾಧೀಕರಣ ಕರ್ನಾಟಕ ರಾಜ್ಯ 13.42 ಟಿಎಂಸಿ ನೀರು ಪಡೆದುಕೊಳ್ಳಲು ಅನುಮತಿ ನೀಡಿದೆ. ಅದೇ ರೀತಿ ಕೇಂದ್ರ ಸರ್ಕಾರ ಕೂಡ ಈ ನೀರು ಪಡೆದುಕೊಳ್ಳಲು ರಾಜ್ಯಕ್ಕೆ ಗೆಜೆಟ್‌ ನೋಟಿಫಿಕೇಶನ ಹೊರಡಿಸಿದೆ. ರಾಜ್ಯ ಸರ್ಕಾರ ಹಿಂದಿನ ವರ್ಷ ಬಜೆಟ್‌ನಲ್ಲಿ 500 ಕೋಟಿ ರು. ಅನುದಾನ ಮೀಸಲಿರಸಿದೆ. ಈ ವರ್ಷ ಕೂಡ ಈ ಯೋಜನೆ ಕಾಮಗಾರಿಗೆ 1600 ಕೋಟಿ ರು. ಅನುದಾನ ಮೀಸಲಾಗಿರಸಿದ್ದು ಈ ಭಾಗದ ರೈತರಿಗೆ ಸಂತೋಷ ತಂದಿದೆ. ಆದರೆ ಸರ್ಕಾರ ಬೇಗ ಈ ಕಾಮಗಾರಿಗೆ ಟೆಂಡರ್‌ ಕರೆದು ಕಾಮಗಾರಿ ಪ್ರಾರಂಭ ಮಾಡಿದ್ದು ಹೋರಾಟಗಾರರಿಗೆ ನಿರಾಸೆವಾಗಿದೆ. ಆದ್ದರಿಂದ ಸರ್ಕಾರ ಗೋವಾದವರು ಈ ಕಾಮಗಾರಿ ಪ್ರಾರಂಭ ಮಾಡಲು ಅಡ್ಡಿ ಮಾಡುತ್ತಿದ್ದಾರೆ ಎನ್ನುವ ನೆಪ ಮುಂದಿಟ್ಟಿಕೊಂಡು ಕಾಮಗಾರಿ ಪ್ರಾರಂಭ ಮಾಡುತ್ತಿಲ್ಲ. ಗೋವಾ ರಾಜ್ಯದವರು ನ್ಯಾಯಾಧಿಕರಣ ನೀಡಿರುವ ನೀರು ಬಳಕೆ ಮಾಡಲು ಯಾವುದೇ ರೀತಿ ತಂಟೆ ಮಾಡುತ್ತಿಲ್ಲ. ಅದು ಮಹದಾಯಿ ನದಿ ನೀರು ಬಳಕೆ ಮಾಡಿಕೊಳ್ಳಬಾರದೆಂದು ತಕಾರರು ಎತ್ತಿದೆ. ಆದ್ದರಿಂದ ನಮ್ಮ ನೆಲದಲ್ಲಿ ಹರಿಯುವ ಕಳಸಾ, ಬಂಡೂರಿ, ನಾಲಾ ಹಳ್ಳಗಳಲ್ಲಿ ಹರಿಯುವ ನೀರು ಬಳಕೆಗೆ ಯಾವುದೇ ರೀತಿ ತೊಂದರೆಯಿಲ್ಲ. ಈ ನೀರು ಬಳಕೆ ಮಾಡಿಕೊಳ್ಳಲು ಸರ್ಕಾರ ಮುಂದಾಗಬೇಕು. ಒಂದು ವೇಳೆ ವಿಳಂಬ ನೀತಿ ಅನುಸರಿಸಿದರೆ ಮುಂದಿನ ದಿನಗಳಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ವಿರುದ್ಧ ಬಂಡಾಯ ನೆಲದಿಂದ ಉಗ್ರ ಹೋರಾಟ ಮಾಡಲು ತೀರ್ಮಾನ ತೆಗೆದುಕೊಂಡಿದ್ದೇವೆ ಎಂದು ಹೇಳಿದರು.

ಶಿವಪ್ಪ ಹೊರಕೇರಿ, ರಾಮನಗೌಡ ಕಿತ್ತೂರ, ಹನಮಂತ ಮಡಿವಾಳರ, ಪರಸಪ್ಪ ಹಣಸಿ, ಮಾಯಪ್ಪ ಓಡಕನವರ, ದೇಸಾಯಿಗೌಡ ಪಾಟೀಲ, ವೀರಬಸಪ್ಪ ಹೂಗಾರ, ಗಿರಿಯಪ್ಪ ಹಂಜಿ, ಗುರು ರಾಯನಗೌಡ್ರ, ಮಲ್ಲಣ್ಣ ಅಲೇಕಾರ, ದೇವಂದ್ರ ಜಾಪರಸಿ, ಮುತ್ತಣ್ಣ ಕುರಿ, ಎಸ್‌.ಬಿ. ಜೋಗಣ್ಣವರ, ಅಶೋಕ ಸಾತಣ್ಣವರ, ಹೇಮಕ್ಕ ಗಾಳಿ, ನಾಗರತ್ನ ಸವಳಭಾವಿ, ಶಾಂತವ್ವ ಪೂಜಾರ, ಅನಸವ್ವ ಶಿಂಧೆ, ಕಾಶವ್ವ ಉಳ್ಳಾಗಡ್ಡಿ, ಚನ್ನಮ್ಮ ಕರಜಗಿ, ಎ.ಪಿ. ಪಾಟೀಲ, ರಾಘವೇಂದ್ರ ಗುಜಮಾಗಡಿ, ಹನಮಂತ ಸರನಾಯ್ಕರ, ಅರ್ಜುನ ಮಾನೆ, ಸಂಗಪ್ಪ ಶಾನವಾಡ, ರಾಮಚಂದ್ರ ಸಾಬಳೆ, ಸುಭಾಸ ಗಿರಿಯಣ್ಣವರ, ವಾಸು ಚವಾಣ, ಬಸಪ್ಪ ತೆಗ್ಗಿನಮನಿ, ಯಲ್ಲಪ್ಪ ಚಲವಣ್ಣವರ, ಅಯ್ಯಪ್ಪ ಮಜ್ಜಿಗಿ, ಶಿವಪ್ಪ ಸಾತಣ್ಣವರ, ವೆಂಕಪ್ಪ ಹುಜರತ್ತಿ, ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
 

click me!