'ಬಸನಗೌಡ ಪಾಟೀಲ ಯತ್ನಾಳ್‌ ಒಬ್ಬ ಹುಚ್ಚ, ಬ್ಲಾಕ್‌ಮೇಲರ್‌'

By Kannadaprabha NewsFirst Published Nov 25, 2020, 10:38 AM IST
Highlights

ಸಿಎಂ ಆಫೀಸ್‌ನಲ್ಲಿ ಜವಾನ ಕೆಲಸ ಮಾಡುವ ಯೋಗ್ಯತೆಯೂ ಆತನಿಗಿಲ್ಲ| ವಿಜಯಪುರ ಬಂದ್‌ ಸಹ ಆಗುತ್ತೇ, ಡಿ.5 ರಂದು ಕರ್ನಾಟಕ ಬಂದ್‌ ನಿಶ್ಚಿತ| ಯಡಿಯೂರಪ್ಪ ವಿರುದ್ಧ ಮಾತನಾಡಿದ್ದು ಆಯಿತು. ಈಗ ನನ್ನ ವಿರುದ್ಧ ಮಾತನಾಡಿದ್ದಾರೆ. ಮುಂದೆ ಅವರ ತಂದೆ, ತಾಯಿ ವಿರುದ್ಧವೇ ಮಾತನಾಡುತ್ತಾರೆ ಎಂದ ವಾಟಾಳ್‌ ನಾಗರಾಜ್‌| 

ಕೊಪ್ಪಳ(ನ.25): ವಿಜಯಪುರದ ಶಾಸಕ ಬಸನಗೌಡ ಪಾಟೀಲ ಯತ್ನಾಳ್‌ ಒಬ್ಬ ಹುಚ್ಚ, ಬ್ಲಾಕ್‌ಮೇಲರ್‌. ಸಿಎಂ ಆಫೀಸ್‌ನಲ್ಲಿ ಜವಾನ ಕೆಲಸ ಮಾಡಲು ಸಹ ಆತ ಲಾಯಕ್‌ ಅಲ್ಲ ಎಂದು ಕನ್ನಡ ಚಳವಳಿ ವಾಟಾಳ್‌ ಪಕ್ಷದ ಅಧ್ಯಕ್ಷ ವಾಟಾಳ್‌ ನಾಗರಾಜ್‌ ಕಿಡಿ ಕಾರಿದ್ದಾರೆ.

"

ತಾಲೂಕಿನ ಹಿಟ್ನಾಳ್‌ ಟೋಲ್‌ಗೇಟ್‌ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯತ್ನಾಳ್‌ ಮತ್ತು ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ಮಾಡಿದರು. ಯತ್ನಾಳ್‌ ನಾಲಿಗೆ ಸರಿ ಇಲ್ಲ. ಯಡಿಯೂರಪ್ಪ ವಿರುದ್ಧ ಮಾತನಾಡಿದ್ದು ಆಯಿತು. ಈಗ ನನ್ನ ವಿರುದ್ಧ ಮಾತನಾಡಿದ್ದಾರೆ. ಮುಂದೆ ಅವರ ತಂದೆ, ತಾಯಿ ವಿರುದ್ಧವೇ ಮಾತನಾಡುತ್ತಾರೆ ಎಂದರು.

ಹಾದಿಬೀದಿಯಲ್ಲಿ ರೋಲ್‌ಕಾಲ್‌ ಬಗ್ಗೆ ಮಾತನಾಡುತ್ತಾರೆ. ರೋಲ್‌ಕಾಲ್‌ ಎಂದರೆ ಏನು ಅಂತಾ ಗೊತ್ತಾ? ಸರ್ಕಾರ ಮಾಡುವ ರೋಲ್‌ಕಾಲ್‌ಗಿಂತ ಕನ್ನಡಪರ ಸಂಘಟನೆಗಳು ಮಾಡುವ ಸಣ್ಣಪುಟ್ಟರೋಲ್‌ಕಾಲ್‌ ದೊಡ್ಡದಾ? ಸರ್ಕಾರ ಜನರ ದುಡ್ಡನ್ನು ಹಗಲು ದರೋಡೆ ಮಾಡುತ್ತಿದೆ. ಲೂಟಿ ಮಾಡುತ್ತದೆ ಎಂದು ಆರೋಪಿಸಿದರು.

ವಿಜಯಪುರದಲ್ಲಿ ಬಂದ್‌ ಮಾಡುವುದನ್ನು ಯಾರು ತಡೆಯುತ್ತಾರೆ ನೋಡ್ತೇವೆ. ನಾವು ಮಾಡಿಯೇ ಮಾಡುತ್ತೇವೆ. ವಿಜಯಪುರಕ್ಕೆ ಹೋಗಿಯೇ ಹೋಗುತ್ತೇವೆ. ಮರಾಠಾ ಅಭಿವೃದ್ಧಿ ಪ್ರಾಧಿಕಾರ ರದ್ದು ಮಾಡುವಂತೆ ಆಗ್ರಹಿಸಿ ಡಿ. 5ರಂದು ಕರೆ ನೀಡಿರುವ ಕರ್ನಾಟಕ ಬಂದ್‌ ನಿಶ್ಚಿತ ಎಂದು ಅವರು ಸ್ಪಷ್ಟಪಡಿಸಿದರು.

ಶೀಘ್ರ ಕೈ ಸೇರುತ್ತಿದ್ದಾರೆ ಈ ಬಿಜೆಪಿ ನಾಯಕ : ಡಿ.ಕೆ.‌ ಶಿವಕುಮಾರ್ ಮಾಹಿತಿ

ಯಡಿಯೂರಪ್ಪ ಅವರಿಗೆ ಗಡಿನಾಡು ಹೋರಾಟದ ಬಗ್ಗೆ ಮಾಹಿತಿ ಇಲ್ಲ. ಬಸವಣ್ಣನ ನಾಡಿನಲ್ಲಿ ಏನಾದರೂ ಮಾಡಿದ್ದಾರಾ? ಬಸವ ಕಲ್ಯಾಣ ಅಭಿವೃದ್ಧಿ ಮಾಡದ ಯಡಿಯೂರಪ್ಪ ಮರಾಠಾ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡ್ತಾರೆ. ಹೀಗೆಯೇ ಬಿಟ್ಟರೆ ವಿಧಾನಸೌಧವನ್ನೇ ಮಾರಿ ಬಿಡ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸುತ್ತ, ನ. 30ರೊಳಗಾಗಿ ಮಾರಾಠ ಪ್ರಾಧಿಕಾರ ರಚನೆಯನ್ನು ಕೈಬಿಡದಿದ್ದರೆ ಬಂದ್‌ ನಿಶ್ಚಿತ ಎಂದರು.

ಅನುದಾನ ಕೊಡಿ, ಪ್ರಾಧಿಕಾರ ಬೇಡ

ಮರಾಠಿಗರ ಶಿಕ್ಷಣಕ್ಕೆ ಮತ್ತು ಕಲ್ಯಾಣಕ್ಕೆ ಒಂದು ಸಾವಿರ ಕೋಟಿ ರುಪಾಯಿ ಕೊಡಿ, ನಮ್ಮ ವಿರೋಧ ಇಲ್ಲ. ಆದರೆ, ಮರಾಠಾ ಅಭಿವೃದ್ಧಿ ಪ್ರಾಧಿಕಾರವನ್ನು ಕೈಬಿಡುವಂತೆ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ, ಡಾ. ರಾಜಕುಮಾರ ಅಭಿಮಾನಿ ಸಂಘದ ಅಧ್ಯಕ್ಷ ಸಾ.ರಾ. ಗೋವಿಂದ ಆಗ್ರಹಿಸಿದರು.

ಕೊಪ್ಪಳ ತಾಲೂಕಿನ ಹಿಟ್ನಾಳ್‌ ಬಳಿ ಟೋಲ್‌ಗೇಟ್‌ನಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮರಾಠಾ ಅಭಿವೃದ್ಧಿ ಪ್ರಾಧಿಕಾರಕ್ಕೆ ಕೊಟ್ಟಿರುವ 50 ಕೋಟಿಯಲ್ಲಿ ಪಂಚೆ, ನಿಕ್ಕರ್‌ ಸಹ ಬರುವುದಿಲ್ಲ ಎಂದು ಕಟುವಾಗಿ ಟೀಕಿಸಿದರು.

ಮರಾಠಾ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡುವುದರಿಂದ ನಾನಾ ಸಮಸ್ಯೆಗೆ ದಾರಿಯಾಗುತ್ತದೆ. ಮುಂದಿನ ದಿನಗಳಲ್ಲಿ ತಮಿಳರು, ತೆಲುಗರು ಸೇರಿದಂತೆ ಅನೇಕರು ನಮಗೂ ಪ್ರಾಧಿಕಾರ ರಚನೆ ಮಾಡಿ ಅಂತಾ ಕೇಳಬಹುದು.
ಸರ್ಕಾರ ಕೂಡಲೇ ಎಚ್ಚೆತ್ತು, ಮರಾಠ ಪ್ರಾಧಿಕಾರ ರಚನೆಯನ್ನು ಕೈಬಿಡಬೇಕು. ಇಲ್ಲದಿದ್ದರೆ ಅನಿವಾರ್ಯವಾಗಿ ನಾವು ಬಹುದೊಡ್ಡ ಹೋರಾಟ ಮಾಡಬೇಕಾಗುವುದು. ಹೋರಾಟವನ್ನು ಹತ್ತಿಕ್ಕಲು ಯಾರಿಂದಲೂ ಸಾಧ್ಯವಿಲ್ಲ ಎಂದರು.
 

click me!