ಸಮಯ ಬಂದಾಗ ಆಗಲಿದೆ ಸಂಪುಟ ವಿಸ್ತರಣೆ: ಕೇಂದ್ರ ಸಚಿವ ಪ್ರಹ್ಲಾದ ಜೋಶಿ

By Kannadaprabha NewsFirst Published Nov 14, 2020, 1:31 PM IST
Highlights

ಈ ಬಗ್ಗೆ ಯಾರೇ ಸಭೆ ನಡೆಸಿದರೂ ಪರವಾಗಿಲ್ಲ, ಮುಖ್ಯಮಂತ್ರಿಗಳೇ ಈ ಕಾರ್ಯ ಮಾಡಬೇಕು| ಮೋದಿ ಪ್ರಸಿದ್ಧಿ ಮಣಿಪುರಂದಿಂದ ಹಿಡಿದು ತೆಲಂಗಾಣ, ಮೊನ್ನೆಯಷ್ಟೇ ಬಿಹಾರದಲ್ಲೂ ವಿಜಯ ಸಾಧಿಸಿದ್ದೇವೆ| ವಿನಯ ಕುಲಕರ್ಣಿ  ಬಂಧನ ಪ್ರಕರಣ ರಾಜಕೀಯಗೊಳಿಸುತ್ತಿರುವವರಿಗೆ ಸದ್ಬುದ್ದಿ ಬರಲಿ: ಜೋಶಿ| 

ಧಾರವಾಡ(ನ.14): ರಾಜ್ಯ ಸಚಿವ ಸಂಪುಟ ವಿಸ್ತರಣೆಯನ್ನು ಸಮಯ ಬಂದಾಗ ಮುಖ್ಯಮಂತ್ರಿಗಳು ಕೇಂದ್ರೀಯ ನಾಯಕರು, ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ಜೊತೆಗೆ ಚರ್ಚಿಸಿ ವಿಸ್ತರಣೆ ಮಾಡಲಿದ್ದು ಈ ಬಗ್ಗೆ ಯಾವುದೇ ಸಂಶಯ ಬೇಡ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದ್ದಾರೆ. 

ಶುಕ್ರವಾರ ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದ ಕಾರ್ಯಕ್ರಮ, ಮುಂದಿನ ಯೋಜನೆಗಳು ಹಾಗೂ ಇತರೆ ವಿಷಯಗಳ ಕುರಿತು ಸಚಿವರು ಆಗಾಗ ಭೇಟಿ, ಸಭೆಗಳನ್ನು ಮಾಡುತ್ತಾರೆ. ಸಚಿವ ಸಂಪುಟ ವಿಚಾರವಾಗಿಯೇ ಸಚಿವರು ಸಭೆ ನಡೆಸುತ್ತಾರೆ ಎಂಬುದಲ್ಲ. ಆದಷ್ಟು ಬೇಗ ಮುಖ್ಯಮಂತ್ರಿಗಳು ಈ ಬಗ್ಗೆ ಸ್ಪಷ್ಟನೆ ನೀಡುತ್ತಾರೆ ಎಂದರು.

ಕೇಂದ್ರ ಸರ್ಕಾರವು ಕೋವಿಡ್‌ ನಿರ್ವಹಣೆ ಸರಿಯಾಗಿ ಮಾಡಿಲ್ಲ, ಯೋಜನೆ ರೂಪಿಸದೇ ಲಾಕ್‌ಡೌನ್‌ ಮಾಡಲಾಗಿದ್ದು ವಿಫಲವಾಗಿದೆ ಎಂದೆಲ್ಲಾ ಆರೋಪಗಳು ಕೇಳಿ ಬಂದವು. ಇಷ್ಟಾಗಿಯೂ ಕೋವಿಡ್‌ ನಂತರದಲ್ಲಿ ದೇಶದಲ್ಲಿ ನಡೆದ 58ಕ್ಕೂ ಹೆಚ್ಚು ಉಪ ಚುನಾವಣೆಗಳಲ್ಲಿ ಬಿಜೆಪಿ ಜಯಭಾರಿ ಬಾರಿಸಿದೆ. ರಾಜಕೀಯವಾಗಿ ಜನರು ಸ್ಪಷ್ಟ ಉತ್ತರವನ್ನು ನೀಡಿದ್ದಾರೆ. ಮೋದಿ ಅವರ ಪ್ರಸಿದ್ಧಿ ಮಣಿಪುರಂದಿಂದ ಹಿಡಿದು ತೆಲಂಗಾಣ, ಮೊನ್ನೆಯಷ್ಟೇ ಬಿಹಾರದಲ್ಲೂ ವಿಜಯ ಸಾಧಿಸಿದ್ದೇವೆ ಎಂದರು.

ಬಿಹಾರ ಸರ್ಕಸ್‌ ಬಳಿಕ ರಾಜ್ಯ ಸಂಪುಟ ಕಸರತ್ತು: ಬಿಎಸ್‌ವೈ

ಇನ್ನು ಕೋವಿಡ್‌ನಿಂದ ಆರ್ಥಿಕತೆಗೆ ಪೆಟ್ಟಾಗಿದ್ದು ನಿಜ. ಆದರೆ, ಇದೀಗ ಪುನಶ್ಚೇತನಗೊಳ್ಳುತ್ತಿದೆ. ವಿದ್ಯುತ್‌ ಉತ್ಪಾದನೆ, ಜಿಎಸ್‌ಟಿ ಸಂಗ್ರಹ, ಕೈಗಾರಿಕಾ, ಅಟೋಮೊಬೈಲ್‌ ಉತ್ಪಾದನೆ ಮತ್ತು ಮಾರಾಟ ಹೆಚ್ಚಳವಾಗುತ್ತಿದ್ದು ಜೊತೆಗೆ ವಿದೇಶಿ ಬಂಡವಾಳ ಹೂಡಿಕೆಯಾಗುತ್ತಿದೆ. ಇದೆಲ್ಲವೂ ಭಾರತದ ಆರ್ಥಿಕತೆಯ ಸಂಕೇತ ಎಂದರು.

ಯೋಗೀಶಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿನಯ ಕುಲಕರ್ಣಿ ಅವರ ಬಂಧನ ರಾಜಕೀಯ ಪ್ರೇರಿತ ಎಂಬ ಕಾಂಗ್ರೆಸ್‌ ಮುಖಂಡರ ಆರೋಪಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ ಸಚಿವ ಜೋಶಿ, ಈ ಪ್ರಕರಣದಲ್ಲಿ ಕಾನೂನು ತನ್ನ ಕ್ರಮ ಕೈಗೊಳ್ಳುತ್ತಿದೆ. ಪ್ರಕರಣವನ್ನು ರಾಜಕೀಯಗೊಳಿಸುತ್ತಿರುವವರಿಗೆ ಸದ್ಬುದ್ದಿ ಬರಲಿ ಎಂದು ಹಾರೈಸಿದರು.

click me!