ಉತ್ತರ ಕರ್ನಾಟಕಕ್ಕೆ ಸಂತಸದ ಸುದ್ದಿ, ಬಳ್ಳಾರಿ–ಹೊಸಪೇಟೆ ನಡುವೆ 3ನೇ ಮತ್ತು 4ನೇ ರೈಲ್ವೆ ಮಾರ್ಗಕ್ಕೆ ಕೇಂದ್ರ ಅನುಮೋದನೆ

Published : Feb 16, 2026, 08:05 PM IST
Railway Lines

ಸಾರಾಂಶ

ಕೇಂದ್ರ ಸಚಿವ ಸಂಪುಟವು ಬಳ್ಳಾರಿ–ಹೊಸಪೇಟೆ ನಡುವೆ ಮೂರನೇ ಮತ್ತು ನಾಲ್ಕನೇ ರೈಲ್ವೆ ಮಾರ್ಗ ನಿರ್ಮಾಣಕ್ಕೆ ಅನುಮೋದನೆ ನೀಡಿದೆ. ಈ ಯೋಜನೆಯು ಪ್ರಸ್ತುತ ಜೋಡಿ ಹಳಿಯನ್ನು ಚತುಷ್ಪಥಕ್ಕೆ ಮೇಲ್ದರ್ಜೆಗೇರಿಸಲಿದ್ದು, ಇದರಿಂದ ಸರಕು ಸಾಗಣೆ ಮತ್ತು ಪ್ರವಾಸೋದ್ಯಮಕ್ಕೆ ಹೆಚ್ಚಿನ ಉತ್ತೇಜನ ಸಿಗಲಿದೆ.

ನವದೆಹಲಿ: ಬಳ್ಳಾರಿ–ಹೊಸಪೇಟೆ ನಡುವಿನ ರೈಲು ಸಂಚಾರವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ, ಮೂರನೇ ಮತ್ತು ನಾಲ್ಕನೇ ರೈಲ್ವೆ ಮಾರ್ಗ ನಿರ್ಮಾಣಕ್ಕೆ ಕೇಂದ್ರ ಸಚಿವ ಸಂಪುಟ ಅಧಿಕೃತ ಅನುಮೋದನೆ ನೀಡಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ಯೋಜನೆಗೆ ಹಸಿರು ನಿಶಾನೆ ದೊರೆತಿದೆ.

ಈ ಸಭೆಯಲ್ಲಿ ಕಾಸರಾ–ಮನಮಾಡ್, ದಿಲ್ಲಿ–ಅಂಬಾಲಾ ಸೇರಿದಂತೆ ಒಟ್ಟು ಮೂರು ಪ್ರಮುಖ ರೈಲ್ವೆ ಯೋಜನೆಗಳಿಗೆ ಒಪ್ಪಿಗೆ ನೀಡಲಾಗಿದ್ದು, ಇದರಲ್ಲಿ ಬಳ್ಳಾರಿ–ಹೊಸಪೇಟೆ ಮಾರ್ಗವೂ ಸೇರಿದೆ. ಈ ಮೂರೂ ಯೋಜನೆಗಳ ಒಟ್ಟು ಅಂದಾಜು ವೆಚ್ಚ ₹18,509 ಕೋಟಿ ಆಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಜೋಡಿ ಮಾರ್ಗದಿಂದ ಚತುಷ್ಪಥಕ್ಕೆ ಮೇಲ್ದರ್ಜೆ

ಪ್ರಸ್ತುತ ಬಳ್ಳಾರಿ–ಹೊಸಪೇಟೆ ನಡುವಿನ ರೈಲು ಮಾರ್ಗ ಜೋಡಿ ಹಳಿಯಲ್ಲಿದ್ದು, ಇದೀಗ ಅದನ್ನು ಚತುಷ್ಪಥ (ನಾಲ್ಕು ಹಳಿ) ಮಾರ್ಗವಾಗಿ ಅಭಿವೃದ್ಧಿಪಡಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಈ ಕ್ರಮದಿಂದ ಪ್ರಯಾಣಿಕ ರೈಲುಗಳ ಜೊತೆಗೆ ಸರಕು ಸಾಗಣೆ ರೈಲುಗಳ ಸಂಖ್ಯೆಯೂ ಗಣನೀಯವಾಗಿ ಹೆಚ್ಚಳವಾಗಲಿದೆ.

ಈ ಯೋಜನೆಯಿಂದ ವಾರ್ಷಿಕವಾಗಿ ಸುಮಾರು ₹323 ಕೋಟಿ ಮೌಲ್ಯದ ಸರಕು ಸಾಗಣೆ ವೆಚ್ಚ ಉಳಿತಾಯವಾಗಲಿದೆ ಎಂದು ಅಂದಾಜಿಸಲಾಗಿದೆ. ಇದರಿಂದ ರೈಲ್ವೆ ಸಂಚಾರದ ದಕ್ಷತೆ ಹೆಚ್ಚುವದರ ಜೊತೆಗೆ ಕೈಗಾರಿಕಾ ಚಟುವಟಿಕೆಗಳಿಗೆ ಹೊಸ ಚೈತನ್ಯ ಸಿಗಲಿದೆ.

HUN ರೈಲು ಜಾಲ ಯೋಜನೆಯ ಭಾಗ

ಬಳ್ಳಾರಿ–ಹೊಸಪೇಟೆ 3ನೇ ಮತ್ತು 4ನೇ ರೈಲ್ವೆ ಮಾರ್ಗ ಯೋಜನೆ, ವಾಸ್ಕೋ ಡ ಗಾಮಾ–ವಿಜಯವಾಡ ನಡುವಿನ ಹೈಲಿ ಯುಟಿಲೈಸ್ಡ್ ನೆಟ್‌ವರ್ಕ್ (HUN) ರೈಲು ಮಾರ್ಗವನ್ನು ಜೋಡಿ ಹಳಿಯಿಂದ ಚತುಷ್ಪಥಕ್ಕೆ ಮೇಲ್ದರ್ಜೆಗೇರಿಸುವ ಮಹತ್ವಾಕಾಂಕ್ಷಿ ಯೋಜನೆಯ ಭಾಗವಾಗಿದೆ. ಈ ಮಾರ್ಗವನ್ನು ನಾಲ್ಕು ಹಳಿಗೆ ವಿಸ್ತರಿಸುವುದರಿಂದ ಆಂಧ್ರಪ್ರದೇಶ, ಕರ್ನಾಟಕ ಮತ್ತು ಗೋವಾ ಕರಾವಳಿ ಪ್ರದೇಶಗಳ ನಡುವಿನ ಸಂಪರ್ಕ ಮತ್ತಷ್ಟು ಸುಗಮವಾಗಲಿದೆ.

ಪ್ರವಾಸೋದ್ಯಮಕ್ಕೆ ಹೊಸ ಬಲ

ಈ ಯೋಜನೆಯಿಂದ ಉತ್ತರ ಕರ್ನಾಟಕದ ಪ್ರಮುಖ ಪ್ರವಾಸಿ ತಾಣಗಳಿಗೆ ರೈಲು ಸಂಪರ್ಕ ಸುಲಭವಾಗಲಿದೆ. ವಿಶ್ವ ಪಾರಂಪರಿಕ ತಾಣವಾದ ಹಂಪಿ, ಬಳ್ಳಾರಿ ಕೋಟೆ, ದರೋಜಿ ಕರಡಿ ಧಾಮ, ತುಂಗಭದ್ರಾ ಜಲಾಶಯ, ಕೆಂಚನಗುಡ್ಡ ಹಾಗೂ ವಿಜಯ ವಿಠ್ಠಲ ದೇಗುಲದಂತಹ ಪ್ರಸಿದ್ಧ ಸ್ಥಳಗಳಿಗೆ ಪ್ರವಾಸಿಗರ ಸಂಖ್ಯೆ ಹೆಚ್ಚುವ ನಿರೀಕ್ಷೆ ಇದೆ. ಇದರ ಪರಿಣಾಮವಾಗಿ ಸ್ಥಳೀಯ ಆರ್ಥಿಕತೆಗೆ ಸಹ ಲಾಭವಾಗಲಿದೆ.

ಸರಕು ಸಾಗಣೆಗೆ ಹೆಚ್ಚಿನ ಅನುಕೂಲ

ಈ ಪ್ರದೇಶದಲ್ಲಿ ಲಭ್ಯವಿರುವ ಕಬ್ಬಿಣದ ಅದಿರು, ಮ್ಯಾಂಗನೀಸ್, ಉಕ್ಕು, ಸಿಮೆಂಟ್, ಆಹಾರಧಾನ್ಯ, ಸಕ್ಕರೆ ಹಾಗೂ ಗೊಬ್ಬರದಂತಹ ಪ್ರಮುಖ ವಸ್ತುಗಳ ಸಾಗಣೆ ಈ ಹೊಸ ಮಾರ್ಗದಿಂದ ಇನ್ನಷ್ಟು ವೇಗವಾಗಿ ಮತ್ತು ಕಡಿಮೆ ವೆಚ್ಚದಲ್ಲಿ ಸಾಧ್ಯವಾಗಲಿದೆ. ಕೈಗಾರಿಕಾ ವಲಯಕ್ಕೆ ಇದು ಮಹತ್ತರ ಉತ್ತೇಜನ ನೀಡಲಿದೆ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

ಯೋಜನೆಯ ತಾಂತ್ರಿಕ ವಿವರಗಳು

ಒಟ್ಟು 65 ಕಿಲೋಮೀಟರ್ ಉದ್ದದ ಈ ರೈಲು ಮಾರ್ಗ ನಿರ್ಮಾಣ ಯೋಜನೆಯಡಿ:

34 ಪ್ರಮುಖ ಸೇತುವೆಗಳು

220 ಸಣ್ಣ ಸೇತುವೆಗಳು

11 ರಸ್ತೆ ಮೇಲ್ಸೇತುವೆಗಳು (ROB)

14 ರಸ್ತೆ ಅಂಡರ್‌ಬ್ರಿಡ್ಜ್‌ಗಳು (RUB)

ನಿರ್ಮಾಣಗೊಳ್ಳಲಿವೆ. ಈ ಯೋಜನೆಯ ಅಂತಿಮವಾಗಿ ಒಟ್ಟು ರೈಲ್ವೆ ಹಳಿಯ ಉದ್ದ 149 ಕಿಲೋಮೀಟರ್ ಆಗಿರಲಿದೆ.

ಉತ್ತರ ಕರ್ನಾಟಕದ ಅಭಿವೃದ್ಧಿಗೆ ಮಹತ್ವದ ಹೆಜ್ಜೆ

ಬಳ್ಳಾರಿ–ಹೊಸಪೇಟೆ ನಡುವೆ ನಾಲ್ಕು ಹಳಿ ರೈಲು ಮಾರ್ಗ ನಿರ್ಮಾಣದಿಂದ ಉತ್ತರ ಕರ್ನಾಟಕದ ಸಾರಿಗೆ ವ್ಯವಸ್ಥೆ ಬಲಗೊಳ್ಳುವುದರ ಜೊತೆಗೆ, ಪ್ರವಾಸೋದ್ಯಮ, ಕೈಗಾರಿಕೆ ಮತ್ತು ವಾಣಿಜ್ಯ ಚಟುವಟಿಕೆಗಳಿಗೆ ಹೊಸ ದಿಕ್ಕು ದೊರೆಯಲಿದೆ. ಇದು ರಾಜ್ಯದ ಸಮಗ್ರ ಅಭಿವೃದ್ಧಿಗೆ ಸಹಕಾರಿಯಾಗುವ ಮಹತ್ವದ ಮೂಲಸೌಕರ್ಯ ಯೋಜನೆ ಎನ್ನಲಾಗುತ್ತಿದೆ.

PREV
Read more Articles on
click me!

Recommended Stories

ಶೀಘ್ರದಲ್ಲೇ ಜಯನಗರದ 42 ರಸ್ತೆಗಳಲ್ಲಿ ಪೇಯ್ಡ್ ಸ್ಮಾರ್ಟ್ ಪಾರ್ಕಿಂಗ್ ಜಾರಿ, ಎಲ್ಲೆಲ್ಲಿ? ಎಷ್ಟು ಟಿಕೆಟ್?
ಈ ಖ್ಯಾತಿಗೆ 1.4 M ಫಾಲೋವರ್ಸ್ ಇದ್ರೂ ಕಾಮನ್ ಸೆನ್ಸ್ ಇಲ್ಲ; ಕಬ್ಬನ್ ಪಾರ್ಕ್ ನೋ-ಕಿಸ್ ಬೋರ್ಡ್ ಮುಂದೆ ಲಿಪ್‌ಲಾಕ್!