
ಉಡುಪಿ (ಡಿ.16): ಕೃಷ್ಣ ನಗರಿ ಉಡುಪಿಯ ಕಿನ್ನಿಮೂಲ್ಕಿ ಪ್ರದೇಶದಲ್ಲಿ ಮಹಿಳೆಯೊಬ್ಬರು ಬಾವಿಯಿಂದ ನೀರು ಸೇದುತ್ತಿದ್ದ ಸಂದರ್ಭದಲ್ಲಿ ತಾಯಿಯ ಕೈಲಿದ್ದ ಮಗು ಆಯತಪ್ಪಿ ಬಾವಿಗೆ ಜಾರಿ ಬಿದ್ದಿದೆ. ಕೂಡಲೇ ತಾಯಿ ಹಗ್ಗವನ್ನು ಹಿಡಿದು ಬಾವಿಗಿಳಿದು ಮಗುವಿನ ರಕ್ಷಣೆಗೆ ಮುಂದಾದರೂ ಮಗು ಅದಾಗಲೇ ಮೃತಪಟ್ಟಿತ್ತು ಎಂದು ತಿಳಿದುಬಂದಿದೆ.
ಮೃತಪಟ್ಟ ಮಗುವನ್ನು ಕಿನ್ನಿಮೂಲ್ಕಿ ನಿವಾಸಿಗಳಾದ ನಯನಾ ಕರ್ಕಡ ಅವರ ಒಂದುವರೆ ವರ್ಷದ ಪುತ್ರಿ ಕೀರ್ತನಾ ಎಂದು ಗುರುತಿಸಲಾಗಿದೆ. ಮಂಗಳವಾರ ಮಧ್ಯಾಹ್ನದ ಸಮಯದಲ್ಲಿ ತಾಯಿ ನಯನಾ ಅವರು ತಮ್ಮ ಮನೆಯ ಸಮೀಪದ ಬಾವಿಯಿಂದ ನೀರು ಸೇದುತ್ತಿದ್ದರು. ಈ ವೇಳೆ ಮಗು ಕೀರ್ತನಾ ತಾಯಿಯ ಸಮೀಪದಲ್ಲೇ ಇತ್ತು ಎನ್ನಲಾಗಿದೆ. ದುರದೃಷ್ಟವಶಾತ್, ನೀರು ಸೇದುತ್ತಿದ್ದಾಗ ಆಯತಪ್ಪಿದ ಮಗು ತಾಯಿಯ ಕೈಯಿಂದ ತಪ್ಪಿಸಿಕೊಂಡು ಆಳವಾದ ಬಾವಿಗೆ ಜಾರಿ ಬಿದ್ದಿದೆ.
ಮಗು ಬಾವಿಗೆ ಬಿದ್ದ ತಕ್ಷಣ ಆಘಾತಕ್ಕೊಳಗಾದ ತಾಯಿ ನಯನಾ ಅವರು ಮಗುವಿನ ರಕ್ಷಣೆಗಾಗಿ ತಡಮಾಡದೆ ಹಗ್ಗದ ಸಹಾಯದಿಂದ ತಾವೂ ಬಾವಿಗೆ ಇಳಿದಿದ್ದಾರೆ. ಆದರೆ, ಮಗು ಅಷ್ಟರಲ್ಲಾಗಲೇ ನೀರಿನಲ್ಲಿ ಮುಳುಗಿ ಕೊನೆಯುಸಿರೆಳೆದಿತ್ತು. ತಾಯಿಯ ರಕ್ಷಣಾ ಪ್ರಯತ್ನ ವಿಫಲವಾಗಿದ್ದು, ಆಕೆಯ ಗೋಳಾಟ ಸ್ಥಳದಲ್ಲಿ ಸೂತಕದ ವಾತಾವರಣ ನಿರ್ಮಿಸಿತು. ಸ್ಥಳೀಯರು ಮತ್ತು ಅಕ್ಕಪಕ್ಕದವರು ಕೂಡಲೇ ನೆರವಿಗೆ ಧಾವಿಸಿದರೂ, ಮಗುವನ್ನು ಉಳಿಸಲು ಸಾಧ್ಯವಾಗಲಿಲ್ಲ. ಸ್ಥಳೀಯರು ಮಗುವಿನ ಮೃತದೇಹವನ್ನು ಬಾವಿಯಿಂದ ಹೊರತೆಗೆದಿದ್ದಾರೆ.
ಘಟನೆಯ ಮಾಹಿತಿ ತಿಳಿದ ಕೂಡಲೇ ಉಡುಪಿ ನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ದುರ್ಘಟನೆ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೂರ್ವಯೋಜಿತ ಕೃತ್ಯವಲ್ಲದ ಸಾವು ಎಂದು ಪೊಲೀಸರು ಪ್ರಾಥಮಿಕ ತನಿಖೆಯಲ್ಲಿ ದೃಢಪಡಿಸಿದ್ದು, ಮಗುವಿನ ಪೋಷಕರು ಮತ್ತು ಸ್ಥಳೀಯರಿಂದ ಮಾಹಿತಿ ಸಂಗ್ರಹಿಸಿದ್ದಾರೆ. ಮಗುವಿನ ಅಕಾಲಿಕ ಸಾವಿನಿಂದ ಕಿನ್ನಿಮೂಲ್ಕಿ ಪ್ರದೇಶದಲ್ಲಿ ಶೋಕದ ಛಾಯೆ ಆವರಿಸಿದೆ.